‘ಜೀವನದಲ್ಲಿ ಎದುರಾಗುವ ಯಾವುದೇ ಸಂದರ್ಭದಲ್ಲಾಗಲಿ ನಾನು ಧನಾತ್ಮಕವಾಗಿ ಯೋಚಿಸುತ್ತೇನೆ. ಸದಾ ಪಾಸಿಟಿವ್ ಮಂತ್ರವನ್ನು ಪಠಿಸುವುದರಿಂದ ಜೀವನವನ್ನು ಸಂತಸದಿಂದ ಕಳೆಯಬಹುದು’ ಎಂದಿದ್ದಾರೆ ನಟಿ ತಮನ್ನಾ. ಸಕಾರಾತ್ಮಕ ಮನೋಭಾವ ವಿಷಯದ ಕುರಿತು ಮಾತನಾಡುವಾಗ ತಮ್ಮ ಅಭಿಪ್ರಾಯವನ್ನು ಬಿಚ್ಚಿಟ್ಟಿದ್ದಾರೆ ಮಿಲ್ಕಿಬ್ಯೂಟಿ.
‘ಇತ್ತೀಚೆಗೆ ಜನರಲ್ಲಿ ದ್ವೇಷ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರ ಮೇಲೆ ಒಬ್ಬರು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಋಣಾತ್ಮಕ ಭಾವ ಹೆಚ್ಚುವಂತೆ ಮಾಡುತ್ತಿದ್ದಾರೆ. ಆದರೆ ಜನರು ಯಾಕೆ ಒಬ್ಬರನ್ನೊಬ್ಬರು ಇಷ್ಟೊಂದು ದ್ವೇಷಿಸುತ್ತಾರೆ ಎಂಬುದು ನನಗೆ ಅರ್ಥವೇ ಆಗುವುದಿಲ್ಲ. ಎಲ್ಲರೂ ಎಲ್ಲಾ ಸಂದರ್ಭದಲ್ಲೂ ಸಕಾರಾತ್ಮಕವಾಗಿಯೇ ಯೋಚಿಸಬೇಕು’ ಎಂದಿದ್ದಾರೆ ತಮನ್ನಾ.
‘ಕೊರೊನಾದಿಂದ ಜನರು ಪಾಠ ಕಲಿಯಬೇಕು. ಈ ಸಮಯದಲ್ಲಿ ಜನರು ಹೆಚ್ಚು ಖಿನ್ನತೆಯಿಂದ ಬಳಲುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರಿಗೆ ಸಾಂತ್ವನ ಹಾಗೂ ಮಾನಸಿಕವಾಗಿ ಬಲಗೊಳ್ಳಲು ಸ್ಫೂರ್ತಿ ಬೇಕು. ಆದರೆ ಇದಕ್ಕೆ ತದ್ವಿರುದ್ಧವಾಗಿ ಹೆಚ್ಚು ಸಾಮಾಜಿಕ ಮಾಧ್ಯಮಗಳು ಜನರಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತಿವೆ. ಇದು ಸರಿಯಲ್ಲ’ ಎಂದಿದ್ದಾರೆ.
‘ಸಮಾಜ ಈಗ ಅಡ್ಡಕತ್ತರಿಯಲ್ಲಿ ನಿಂತಿದೆ. ಈಗ ದೇಶದ ಬುದ್ಧಿಜೀವಿಗಳು ಹಾಗೂ ಶ್ರೀಮಂತರು ಮುಂದೆ ಬಂದು ಜನರಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿಯೊಬ್ಬರು ಸಾಮಾಜಿಕ ಜಾಲತಾಣವನ್ನು ಧನಾತ್ಮಕತೆ ಹೆಚ್ಚಿಸುವ ಸಲುವಾಗಿ ಬಳಸಬೇಕು’ ಎಂದಿದ್ದಾರೆ ಈ ಬೆಡಗಿ.
‘ಕೊರೊನಾ ಬಿಕ್ಕಟ್ಟು ಇರುವ ಈ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಸ್ನೇಹಿತರಂತೆ ಇರಿ’ ಎಂದು ಸಲಹೆ ನೀಡಿದ್ದಾರೆ ಆಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.