ಸ್ಯಾಂಡಲ್ವುಡ್ನ ‘ಬಾದ್ ಷಾ’ ಕಿಚ್ಚ ಸುದೀಪ್ ಏನೇ ಮಾಡಿದರೂ ಅದರಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಸದಾ ಹೊಸತನದ ಹುಟುಕಾಟ ಅವರಿಗೆ ಸಾಮಾನ್ಯ ಸಂಗತಿ. ಕೊರೊನಾ ಬಹುತೇಕ ಎಲ್ಲರನ್ನು ಇದ್ದಲ್ಲೇ ಕಟ್ಟಿ ಹಾಕಿದ್ದರೂ ಸುದೀಪ್ ಅವರು ಮಾತ್ರ ಸುಮ್ಮನೆ ಕುಳಿತಿಲ್ಲ. ಒಂದು ತಿಂಗಳಿನಿಂದಲೂ ಪ್ರತಿ ವಾರದ ಅಂತ್ಯದಲ್ಲೂ ವಿಶ್ವದ ನಾನಾ ಭಾಗದಲ್ಲಿರುವ ಕನ್ನಡಿಗರ ಜತೆ ನೇರ ಮಾತುಕತೆ ನಡೆಸುತ್ತಲೇ ಇದ್ದಾರೆ. ಅಭಿಮಾನಿಗಳು ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಅವರ ಕುತೂಹಲ ತಣಿಸುವ ಜತೆಗೂ ಅವರನ್ನು ಖುಷಿಪಡಿಸುತ್ತಿದ್ದಾರೆ. ಇದರ ಮುಂದುವರೆದ ಭಾಗವಾಗಿಯೇ ಈಗ ಮತ್ತೊಂದು ವಿಶೇಷ ಲೈವ್ ಕಾರ್ಯಕ್ರಮಕ್ಕೆ ಸುದೀಪ್ ಈ ವಾರಾಂತ್ಯಕ್ಕೆ ಸಜ್ಜಾಗುತ್ತಿದ್ದಾರೆ.
ಜು. 11 (ಶನಿವಾರ) ಮತ್ತು 12 (ಭಾನುವಾರ) ರಾತ್ರಿ 8ರಿಂದ 10 ಗಂಟೆಯವರೆಗೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕಿಚ್ಚ ತಮ್ಮ ಅಭಿಮಾನಿಗಳ ಜತೆ ಸಂವಾದ ನಡೆಸಲಿದ್ದಾರೆ.ಇದು ರಾಜ್ಯದಲ್ಲಿನ ಸುದೀಪ್ ಅವರ ಅಪ್ಪಟ ಅಭಿಮಾನಿಗಳಿಗೆಂದೇ ರೂಪಿತವಾಗಿರುವ ಕಾರ್ಯಕ್ರಮ.
ಅಭಿಮಾನಿಗಳು ಇಲ್ಲಿ ಸುದೀಪ್ ಎದುರು ತಮ್ಮ ಪ್ರತಿಭೆ ಪ್ರದರ್ಶಿಸುವ ಅಪರೂಪದ ಅವಕಾಶವೂ ಇದೆ.ಸದ್ಯ ಕೊರೊನಾದಿಂದಾಗಿ ಚಿತ್ರಮಂದಿರಗಳು ಮುಚ್ಚಿರುವುದರಿಂದ ತಮ್ಮ ಮೆಚ್ಚಿನ ನಟನನ್ನು ತೆರೆಯ ಮೇಲೆ ನೋಡಬೇಕೆಂಬ ಅಭಿಮಾನಿಗಳ ಆಸೆ ಸದ್ಯಕ್ಕೆ ಈಡೇರುವಂತಿಲ್ಲ. ಹಾಗಾಗಿ ಅಭಿಮಾನಿಗಳನ್ನು ನಿರಾಸೆಪಡಿಸಬಾರದೆಂದು ಸುದೀಪ್ ತಾವೇ ಅವರನ್ನು ಆನ್ಲೈನ್ ಮೂಲಕ ನೇರ ಭೇಟಿ ಮಾಡಿ, ಅವರ ಜತೆ ಒಂದಿಷ್ಟು ಸಮಯ ಕಳೆಯುವ ಪ್ರಯತ್ನ ನಡೆಸುತ್ತಿದ್ದಾರೆ.
ಸದ್ಯದ ಸಂದರ್ಭವನ್ನು ಧೈರ್ಯವಾಗಿ ಎಲ್ಲರೂ ಒಗ್ಗಟ್ಟಾಗಿಎದುರಿಸೋಣ ಎಂಬ ಸಂದೇಶ ರವಾನಿಸಲು ಮುಂದಾಗಿದ್ದಾರೆ. ಸುದೀಪ್ ಅವರ ಜೊತೆಗೆ ಮಾತನಾಡಲು ಇಚ್ಛಿಸುವವರು, ಅವರ ಕುರಿತು ಹತ್ತು ಹಲವು ಪ್ರಶ್ನೆಗಳನ್ನ ಕೇಳಬೇಕೆಂದು ಕಾತರದಿಂದ ಕಾಯುತ್ತಿರುವವರಿಗೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.