ADVERTISEMENT

ಸಿನಿ ಸುದ್ದಿ | ‘ಗೆರಿಲ್ಲಾ ವಾರ್‌’ನಲ್ಲಿ ಉಪೇಂದ್ರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 23:23 IST
Last Updated 18 ಸೆಪ್ಟೆಂಬರ್ 2025, 23:23 IST
ಉಪೇಂದ್ರ 
ಉಪೇಂದ್ರ    

ನಟ ಉಪೇಂದ್ರ ಜನ್ಮದಿನದಂದು(ಸೆ.18) ಅವರ ಹೊಸ ಸಿನಿಮಾ ‘ಗೆರಿಲ್ಲಾ ವಾರ್‌’ ಘೋಷಣೆಯಾಗಿದೆ. ಸಿನಿಮಾವನ್ನು ಖ್ಯಾತ ನಿರ್ದೇಶಕ ಓಂಪ್ರಕಾಶ್‌ ರಾವ್‌ ನಿರ್ದೇಶಿಸಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. 

‘ಎಕೆ 47’, ‘ಲಾಕಪ್‌ಡೆತ್‌’, ‘ಕಲಾಸಿಪಾಳ್ಯ’, ‘ಹುಚ್ಚ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ಓಂಪ್ರಕಾಶ್‌ ರಾವ್‌ ಅವರ ನಿರ್ದೇಶನದ 50ನೇ ಸಿನಿಮಾವಾಗಿ ಇದು ಸೆಟ್ಟೇರಲಿದೆ. ಓಂಪ್ರಕಾಶ್ ರಾವ್ ನಿರ್ದೇಶನದ ‘ತ್ರಿಶೂಲಂ’ ಚಿತ್ರದಲ್ಲೂ ಉಪೇಂದ್ರ ಅವರು ನಟಿಸಿದ್ದು, ‘ಗೆರಿಲ್ಲಾ WAR’ ಇವರಿಬ್ಬರ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರವಾಗಿದೆ.

ಬೇಬಿ ಇಂಚರ ಅರ್ಪಿಸುವ, ಎನ್.ಎಸ್.ರಾವ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಓಂಪ್ರಕಾಶ್ ರಾವ್ ಹಾಗೂ ಆರ್. ವಾಸುದೇವ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಡೆನ್ನಿಸಾ ಪ್ರಕಾಶ್ ಬರೆದಿರುವ ಕಥೆಗೆ ಓಂಪ್ರಕಾಶ್ ಅವರೇ ಚಿತ್ರಕಥೆ ಬರೆದಿದ್ದಾರೆ. ಹಂಸಲೇಖ ಅವರು ಹಾಡುಗಳನ್ನು ಬರೆದು ಸಂಗೀತ ಸಂಯೋಜಿಸುತ್ತಿದ್ದಾರೆ. ರವಿಕುಮಾರ್ ಛಾಯಾಚಿತ್ರಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ, ದೀಪು ಪಿ.ಆರ್‌. ಸಂಭಾಷಣೆ ಹಾಗೂ ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ. 

ADVERTISEMENT

ಉಪೇಂದ್ರ ಅವರಿಗೆ ನಾಯಕಿಯಾಗಿ ನಿಮಿಕಾ ರತ್ನಾಕರ್ ನಟಿಸುತ್ತಿದ್ದು, ರಂಗಾಯಣ ರಘು, ಸ್ವಸ್ತಿಕ್ ಶಂಕರ್, ಅಚ್ಯುತ್ ರಾವ್, ಭಾಸ್ಕರ್ ಶೆಟ್ಟಿ, ಆರಾಧ್ಯ, ಶ್ವೇತ ವೀರೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. 

‘ಗೆರಿಲ್ಲಾ ವಾರ್‌’ ಒಂದು ರೀತಿಯ ಯುದ್ಧ. ಅಲ್ಲಿ ಒಂದು ಸಣ್ಣ ಗುಂಪು ದೊಡ್ಡ ಸಂಖ್ಯೆಯ ಶತ್ರುಗಳೊಂದಿಗೆ ಯುದ್ಧ ಮಾಡಲು ಅಸಾಂಪ್ರದಾಯಿಕ ತಂತ್ರಗಳನ್ನು ಬಳಸುತ್ತದೆ. ಹಿಂದೆ ಈ ರೀತಿಯ ಯುದ್ಧಗಳು ಆಗಿರುವ ಅನೇಕ ಉದಾಹರಣೆಗಳಿದೆ. ಹಾಗೆಂದು ನಮ್ಮದು ಐತಿಹಾಸಿಕ ಚಿತ್ರವಲ್ಲ. ಈ ವಿಷಯವನ್ನಿಟ್ಟುಕೊಂಡು ಪ್ರಸಕ್ತ ನಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ತೋರಿಸುವ ಪ್ರಯತ್ನ ಮಾಡಲಾಗುವುದು. ಉಪೇಂದ್ರ ಈ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಸೈನಿಕ ಗಡಿಯನ್ನು ಮಾತ್ರ ಕಾಯುವ ಸೈನಿಕನಲ್ಲ‌‌. ಪ್ರಸ್ತುತ ಇರುವ ಸಮಸ್ಯೆಗಳನ್ನು ಪರಿಹರಿಸುವ ನಾಯಕ. ಈಗಿನ ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಅದ್ದೂರಿಯಾಗಿ ಈ ಚಿತ್ರ ಮೂಡಿಬರಲಿದೆ’ ಎನ್ನುತ್ತಾರೆ ಓಂಪ್ರಕಾಶ್ ರಾವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.