ಬೆಂಗಳೂರು: ನಟ ರಾಘವೇಂದ್ರ ರಾಜ್ಕುಮಾರ್ ಅವರು ಮಂಗಳವಾರ ಸಂಜೆ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಕು ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ಅವರನ್ನು ತಕ್ಷಣವೇ ಯಶವಂತಪುರದಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಪಾಲ್ಪಿಟೇಷನ್ಸ್’ (ಅನಾರೋಗ್ಯದ ಕಾರಣ ಹೃದಯಬಡಿತದಲ್ಲಿ ಆಗುವ ಏರುಪೇರು) ಕಾರಣದಿಂದ ಸಂಜೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ‘ಬೆಳಕು’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ರಾಘವೇಂದ್ರ ರಾಜ್ಕುಮಾರ್ ಸಂಜೆ 4 ಗಂಟೆಯವರೆಗೂ ಚಿತ್ರೀಕರಣದ ಸ್ಥಳದಲ್ಲೇ ಇದ್ದರು. ‘ಸೋಮವಾರದಿಂದ ಬೆಳಕು ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಸಂಜೆ 4.15ಕ್ಕೆ ಸಾಮಾನ್ಯ ಆರೋಗ್ಯ ತಪಾಸಣೆ ಇದೆ ಎಂದು ರಾಘವೇಂದ್ರ ರಾಜ್ಕುಮಾರ್ ತಿಳಿಸಿದ್ದರು. ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲೂ ಅವರು ಭಾಗವಹಿಸಿದ್ದರು ಎಂದು ಚಿತ್ರದ ನಿರ್ದೇಶಕ ಮಂಜುನಾಥ್ ಅವರು ಮಾಹಿತಿ ನೀಡಿದರು.
ಪೊಗರು ಚಿತ್ರದ ನಾಯಕ ಧ್ರುವ ಸರ್ಜಾ ಸೇರಿದಂತೆ ಚಿತ್ರರಂಗದ ಪ್ರಮುಖರು, ಅಭಿಮಾನಿಗಳು ಆಸ್ಪತ್ರೆಗೆ ಧಾವಿಸಿ ಕುಟುಂಬದವರೊಡನೆ ಆರೋಗ್ಯ ವಿಚಾರಿಸಿದರು.
ರಾಘವೇಂದ್ರ ರಾಜ್ಕುಮಾರ್ ಅವರ ಕೈಯಲ್ಲಿ ಈಗ ಕ್ಯಾಪ್ಟನ್ ರಾಜಾರಾಂ ಚಿತ್ರವೂ ಇದೆ. ನಿವೃತ್ತ ಸೈನಿಕನ ಬದುಕಿನ ಕಥೆ ಆಧರಿಸಿದ ಚಿತ್ರ ನಿರ್ಮಾಣದ ಹಂತದಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.