ADVERTISEMENT

ವಿಷ್ಣು ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ತೆಲುಗು ನಟ ವಿಜಯ್‌ ರಂಗರಾಜು ಕ್ಷಮೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 12:52 IST
Last Updated 13 ಡಿಸೆಂಬರ್ 2020, 12:52 IST
   

‘ಸಾಹಸ ಸಿಂಹ’, ದಿವಂಗತ ನಟ ವಿಷ್ಣುವರ್ಧನ್‌ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿಷ್ಣು ಅಭಿಮಾನಿಗಳು ಹಾಗೂ ಸ್ಯಾಂಡಲ್‌ವುಡ್‌ ನಟರ ಆಕ್ರೋಶಕ್ಕೆ ಕಾರಣರಾಗಿದ್ದ ತೆಲುಗು ನಟ ವಿಜಯ್‌ ರಂಗರಾಜು ಕ್ಷಮೆ ಕೇಳಿದ್ದಾರೆ.

ಕೆಲವು ದಿನಗಳ ಹಿಂದೆ ತೆಲುಗು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಜಯ್‌ ರಂಗರಾಜು ನಟ ವಿಷ್ಣು ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದರು.

ಈಗ ಕ್ಷಮೆ ಕೇಳಿದ ವಿಡಿಯೊ ಒಂದನ್ನು ಬಿಡುಗಡೆ ಮಾಡಿರುವ ರಂಗರಾಜು, ‘ವಿಷ್ಣು ದಾದಾ ಅವರ ಬಗ್ಗೆ ಮಾತನಾಡಿದ್ದು ತಪ್ಪು. ವಿಷ್ಣು ಅವರ ಕುಟುಂಬ, ನಟರಾದ ಪುನೀತ್‌ ರಾಜ್‌ಕುಮಾರ್‌, ಸುದೀಪ್‌ ಹಾಗೂ ವಿಷ್ಣು ಅವರ ಅಭಿಮಾನಿಗಳಲ್ಲಿ ಈ ಬಗ್ಗೆ ಕ್ಷಮೆ ಕೇಳುತ್ತೇನೆ. ಈ ತಪ್ಪಿಗೆ ಈಗಾಗಲೇ ಶಿಕ್ಷೆ ಅನುಭವಿಸುತ್ತಿದ್ದು, ಕೊರೊನಾದಿಂದ ಬಳಲುತ್ತಿದ್ದೇನೆ’ ಎಂದು ಅತ್ತಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ADVERTISEMENT

ವಿಜಯ್‌ ರಂಗರಾಜು ಅವರ ವಿರುದ್ಧ ಡಾ. ವಿಷ್ಣು ಸೇನಾ ಸಮಿತಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.

ಸ್ಯಾಂಡಲ್‌ವುಡ್‌ನ ಪ್ರಮುಖ ನಟರು ರಂಗರಾಜು ವಿವದಾತ್ಮಕ ಹೇಳಿಕೆ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಎಚ್ಚರಿಕೆಯನ್ನೂ ನೀಡಿದ್ದರು.

‘ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತನ್ನು ಹಿಂಪಡೆಯಬೇಕು. ಭಾರತೀಯ ಚಿತ್ರರಂಗ ಒಂದು ಮನೆ. ಎಲ್ಲ ಕಲಾವಿದರು ಒಂದು ಕುಟುಂಬ. ಕಲಾವಿದರನ್ನು ಗೌರವಿಸೋದನ್ನು ಮೊದಲು ಕಲಿಯಬೇಕು’ ಎಂದು ನಟ ಪುನೀತ್‌ ಟ್ವೀಟ್‌ ಮಾಡಿದ್ದರು.

‘ಕೋಟಿ ಜನರ ಆರಾಧ್ಯದೈವವಾದ ವಿಷ್ಣು ಅವರ ಬಗ್ಗೆ ಮಾತನಾಡೋದು ತಪ್ಪು, ಅವರು ಇಲ್ಲದಿದ್ದರೂ ನಾವು ಇದ್ದೇವೆ. ನಿಮ್ಮ ಮಾತನ್ನು ಹಿಂತೆಗೆದುಕೊಳ್ಳಿ’ ಎಂದು ಕಿಚ್ಚ ಸುದೀಪ್‌ ಎಚ್ಚರಿಕೆ ನೀಡಿದ್ದರು.

‘ಅಪ್ಪಾವ್ರು ಶಾರೀರಿಕವಾಗಿ ಇಲ್ಲವಾಗಿ 11 ವರ್ಷಗಳಾದ ಮೇಲೆ ಈ ರೀತಿ ಮಾತನಾಡುವುದರಲ್ಲಿ ಸತ್ಯಾಂಶ ಇಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ವಿಷ್ಣು ಅವರ ಅಳಿಯ ಅನಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಪೋಷಕ ಪಾತ್ರಗಳನ್ನು ಮಾಡುತ್ತಿದ್ದ ವಿಜಯ್‌ ರಂಗರಾಜು ಹಿಂದೆ ವಿಷ್ಣುವರ್ಧನ್‌ ಜೊತೆ ನಟಿಸಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು. ವಿಷ್ಣು ಅವರ ನಡತೆಯ ಬಗ್ಗೆ ಸಂದರ್ಶನದಲ್ಲಿ ಆಕ್ಷೇಪಾರ್ಹವಾಗಿ ಮಾತನಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.