ADVERTISEMENT

ಸೆ. 26ರಿಂದ ‘ಯುವರತ್ನ’ ಸಿನಿಮಾದ ಶೂಟಿಂಗ್‌ ಆರಂಭ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 9:27 IST
Last Updated 23 ಸೆಪ್ಟೆಂಬರ್ 2020, 9:27 IST
‘ಯುವರತ್ನ’ ಸಿನಿಮಾದ ಪೋಸ್ಟರ್‌
‘ಯುವರತ್ನ’ ಸಿನಿಮಾದ ಪೋಸ್ಟರ್‌   

‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಮತ್ತು ನಿರ್ದೇಶಕ ಸಂತೋಷ್ ಆನಂದರಾಮ್ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ‘ಯುವರತ್ನ’ ಚಿತ್ರ ಸಿನಿಪ್ರಿಯರ ಕುತೂಹಲದ ಕೇಂದ್ರಬಿಂದುವಾಗಿದೆ. ಕೋವಿಡ್‌–19 ಕಾಣಿಸಿಕೊಳ್ಳದಿದ್ದರೆ ಬಾಕಿ ಇರುವ ಶೂಟಿಂಗ್‌ ಪೂರ್ಣಗೊಳಿಸಿ ಕಳೆದ ಏಪ್ರಿಲ್‌ನಲ್ಲಿಯೇ ತೆರೆಕಾಣಬೇಕಿತ್ತು. ಕೋವಿಡ್‌ ಪರಿಣಾಮ ಚಿತ್ರೀಕರಣ ಸ್ಥಗಿತಗೊಂಡಿತ್ತು.

ಈಗ ಸೆಪ್ಟೆಂಬರ್‌ 26ರಿಂದ ಕೊನೆಯ ಹಂತದ ಶೂಟಿಂಗ್‌ ನಡೆಸಲು ‘ಯುವರತ್ನ’ ಚಿತ್ರತಂಡ ಸಿದ್ಧತೆ ನಡೆಸಿದೆ. ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಈ ಹಾಡುಗಳ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ಚಿತ್ರತಂಡ ನಿರ್ಧರಿಸಿತ್ತು. ಕೊರೊನಾ ಪರಿಣಾಮ ಇಲ್ಲಿಯೇ ಚಿತ್ರೀಕರಣಕ್ಕೆ ಮುಂದಾಗಿದೆ.ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಸೆಟ್‌ ಅಳವಡಿಸಲಾಗಿದ್ದು, ಇಲ್ಲಿಯೇ ಚಿತ್ರೀಕರಣ ನಡೆಯಲಿದೆಯಂತೆ. ಇದಕ್ಕಾಗಿ ಪುನೀತ್‌ ಕೂಡ ಭರ್ಜರಿ ತಯಾರಿ ನಡೆಸಿದ್ದಾರೆ.

‘ಯುವರತ್ನ’ದಲ್ಲಿ ಶೈಕ್ಷಣಿಕ ದಂಧೆಯ ಸುತ್ತ ಚಿತ್ರಕಥೆ ಹೆಣೆಯಲಾಗಿದೆ. ‘ಡಾಲಿ’ ಖ್ಯಾತಿಯ ಧನಂಜಯ್‌ ಇದರಲ್ಲಿ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತಮಿಳಿನ ಶಯೇಷಾ ಇದರ ನಾಯಕಿ. ಹೊಂಬಾಳೆ ಫಿಲ್ಮ್ಸ್‌ನಡಿ ವಿಜಯ್‌ ಕಿರಗಂದೂರು ಬಂಡವಾಳ ಹೂಡಿದ್ದಾರೆ.

ADVERTISEMENT

ಇತ್ತೀಚೆಗೆ ‘ಯುವರತ್ನ’ ಚಿತ್ರತಂಡ ಬಿಡುಗಡೆಗೊಳಿಸಿದ್ದ ‘ನಾವು ಯಾವತ್ತೂ ಬೇರೆಯವರ ರೂಟ್‌ ಅಲ್ಲಿ ಟ್ರಾವೆಲ್‌ ಆಗಲ್ಲ. ನಮ್ದೇ ದಾರಿ, ನಮ್ದೇ ಸವಾರಿ... ಪಕ್ಕದಲ್ಲಿ ಫೆರಾರಿ ಹೋದ್ರು ತಲೆಕೆಡಿಸಿಕೊಳ್ಳಲ್ಲ...’ ಎಂಬ ಪೋಸ್ಟರ್‌ ಡೈಲಾಗ್‌ ಪುನೀತ್‌ ಅಭಿಮಾನಿಗಳ ಮನ ಸೆಳೆದಿತ್ತು.

ಈ ಚಿತ್ರದ ಬಳಿಕ ಪುನೀತ್‌ ನಟಿಸುತ್ತಿರುವ ‘ಜೇಮ್ಸ್‌’ ಕೂಡ ಕುತೂಹಲ ಕೆರಳಿಸಿದೆ. ಕೋವಿಡ್‌ ಪರಿಣಾಮ ಇದರ ಶೂಟಿಂಗ್‌ ಕೂಡ ಸ್ಥಗಿತಗೊಂಡಿತ್ತು. ಚೇತನ್‌ ಕುಮಾರ್‌ ನಿರ್ದೇಶಿಸಿರುವ ಇದರ ಶೂಟಿಂಗ್‌ ಅಕ್ಟೋಬರ್‌ 13ರಿಂದ ಆರಂಭವಾಗಲಿದೆಯಂತೆ. ಸರ್ಕಾರದ ಮಾರ್ಗಸೂಚಿ ಅನ್ವಯ ಶೂಟಿಂಗ್‌ ನಡೆಸಲು ಚಿತ್ರತಂಡಗಳು ಮುಂದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.