ADVERTISEMENT

ಹೊರಟಿತು ‘ಝೀ ಕುಟುಂಬ’ ಅವಾರ್ಡ್ಸ್‌ ರಥ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 19:30 IST
Last Updated 7 ಅಕ್ಟೋಬರ್ 2021, 19:30 IST
ಹಂಸಲೇಖ, ರಾಘವೇಂದ್ರ ಹುಣಸೂರು
ಹಂಸಲೇಖ, ರಾಘವೇಂದ್ರ ಹುಣಸೂರು   

ಝೀ ಕನ್ನಡ ವಾಹಿನಿಯ ‘ಕುಟುಂಬ’ ಅವಾರ್ಡ್ಸ್‌ ರಥ ನಾಡಿನಾದ್ಯಂತ ಸಂಚಾರಕ್ಕೆ ಹೊರಟಿದೆ. ವೀಕ್ಷಕರ ಅಭಿಪ್ರಾಯ ಆಧರಿಸಿ ನೀಡುವ ಪ್ರಶಸ್ತಿಗಾಗಿ ಈ ರಥ ಎಲ್ಲ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಿದೆ ಎಂದು ವಾಹಿನಿಯ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು ಹೇಳಿದರು.

ಇತ್ತೀಚೆಗೆ ನಾದಬ್ರಹ್ಮ ಹಂಸಲೇಖ ಅವರು ಈ ವಾಹನಗಳಿಗೆ ಚಾಲನೆ ನೀಡಿದರು.

ಝೀ ವಾಹಿನಿಯ ಕಾರ್ಯಕ್ರಮಗಳ ಫಲಕ ಹೊತ್ತ ವಾಹನಗಳು 16 ದಿನಗಳ ಕಾಲ ಎಲ್ಲ 31 ಜಿಲ್ಲೆಗಳಲ್ಲಿ ಸಂಚರಿಸಲಿವೆ ಎಂದು ಮಾಧ್ಯಮಗೋಷ್ಠಿಯಲ್ಲಿ ಹುಣಸೂರು ಅವರು ಹೇಳಿದರು.

ADVERTISEMENT

ಹೊಸತನದತ್ತ ಝೀ ಕನ್ನಡ; ₹ 100 ಕೋಟಿ ಹೂಡಿಕೆ

ಮುಂದೆ ವಾಹಿನಿಯ ಡಿಜಿಟಲ್‌ ವೇದಿಕೆಯಲ್ಲಿ (ಝೀ5) ಕನ್ನಡದ ವೆಬ್‌ ಸರಣಿಗಳು ‘ಝೀ ಒರಿಜಿನಲ್ಸ್‌’ ಬರಲಿವೆ. ಅದಕ್ಕಾಗಿ ಝೀ 5 ಅಪ್ಲಿಕೇಷನ್‌ನನ್ನು ಉನ್ನತಗೊಳಿಸುವ ಕೆಲಸ ನಡೆದಿದೆ. ಕನ್ನಡದ ಸರಣಿ ಪ್ರಸಾರಕ್ಕೆ ಡಿಸೆಂಬರ್‌ ವೇಳೆಗೆ ಝೀ ಸಂಸ್ಥೆ ₹ 100 ಕೋಟಿ ಹೂಡಲಿದೆ. ಮುಂದಿನ ಜೂನ್‌ ವೇಳೆಗೆ ಝೀ 5 ವೇದಿಕೆಯಲ್ಲಿ ಕನ್ನಡದ ವೆಬ್‌ ಸರಣಿಗಳು, ಡಿಜಿಟಲ್‌ ವೇದಿಕೆಯ ಪ್ರತ್ಯೇಕ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ಝೀ ವಾಹಿನಿ ಜನವರಿಯಿಂದ ಪೂರ್ಣ ಹೊಸತನದಿಂದ ಮೂಡಿಬರಲಿದೆ ಎಂದುಹುಣಸೂರು ಮಾಹಿತಿ ನೀಡಿದರು.

ಡಿಜಿಟಲ್‌ನಲ್ಲಿ ‘ವೀಕೆಂಡ್‌ ವಿತ್‌ ರಮೇಶ್‌’

‘ವಾಹಿನಿಯ ಜನಪ್ರಿಯ ಸರಣಿ ‘ವೀಕೆಂಡ್ ವಿತ್‌ ರಮೇಶ್‌’ ಮುಂದೆ ಡಿಜಿಟಲ್‌ ವೇದಿಕೆಯಲ್ಲಿ ಮಾತ್ರ ಪ್ರಸಾರವಾಗಲಿದೆ. ಇದರಲ್ಲಿ ದೊಡ್ಡ ಉದ್ಯಮವನ್ನು ಕಟ್ಟಿ ಬೆಳೆಸಿದ ಕಥೆಗಳು ಅಲ್ಲಿ ಪ್ರಸಾರವಾಗಲಿವೆ’ ಎಂದರು.

ಝೀ ಸೋನಿ ಕಂಪನಿಗಳು ಶೀಘ್ರ ವಿಲೀನಗೊಳ್ಳುವ ಸಾಧ್ಯತೆ ಇದೆ. ಆಗ ಭಾರತದಲ್ಲಿ 50 ಸಾವಿರ ಕೋಟಿ ಮೌಲ್ಯದ, ಮನೋರಂಜನಾ ಕ್ಷೇತ್ರದ ಬೃಹತ್‌ ಉದ್ಯಮ ಸಂಸ್ಥೆಯೊಂದು ರೂಪುಗೊಳ್ಳಲಿದೆ ಎಂದು ಅವರು ಹೇಳಿದರು.

ಹಂಸಲೇಖ ಮಾತನಾಡಿ, ‘ಝೀ ಸರಿಗಮಪ ವೇದಿಕೆಯಲ್ಲಿ ಕೆಲಸ ಮಾಡುವುದೆಂದರೆ ಒಂದು ಪೂರ್ಣಾನುಭೂತಿಯ ಅನುಭವ. ಸರಿಗಮಪ ಕರ್ನಾಟಕದ ಮಟ್ಟಿಗೆ ಒಂದು ವಿಶ್ವವಿದ್ಯಾಲಯ ಪರಿಕಲ್ಪನೆಯನ್ನು ತಂದುಕೊಟ್ಟಿದೆ’ ಎಂದರು.

ನಟ ಅನಿರುದ್ಧ ಜಟ್ಕರ್‌ ಮಾತನಾಡಿ, ‘ಜೊತೆಜೊತೆಯಲಿ ಧಾರಾವಾಹಿಗೆ ದೇಶ ವಿದೇಶಗಳಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ಬರುತ್ತಿದೆ. ಕನ್ನಡ ಕಲಿಯಲು ಈ ಧಾರಾವಾಹಿ ಪ್ರಚೋದನೆ ನೀಡಿದೆ. ಸಾಧಿಸುವ ಛಲವೇ ವಾಹಿನಿಯನ್ನು ಬೆಳೆಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.