ADVERTISEMENT

ಸಮರಸದ ಹಣತೆ ಬೆಳಗಿದ ಕೃಷ್ಣ...

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 19:45 IST
Last Updated 24 ಡಿಸೆಂಬರ್ 2019, 19:45 IST
ಟಿ.ಎಂ. ಕೃಷ್ಣ
ಟಿ.ಎಂ. ಕೃಷ್ಣ   

ನಮ್ಮ ಸಂಸ್ಕೃತಿಯ ನೈಜ ಅರ್ಥವನ್ನು ಮಕ್ಕಳಿಗೆ ತಿಳಿಸುವಲ್ಲಿನಾವು ವಿಫಲರಾಗಿದ್ದೇವೆ. ವಿವಿಧತೆಯಲ್ಲಿ ಏಕತೆಯ ನಿಜವಾದ ಕಲ್ಪನೆಯನ್ನು ಎಳೆಯ ಮನಸ್ಸುಗಳಿಗೆ ಮನವರಿಕೆ ಮಾಡುವಲ್ಲಿ ಎಡವಿದ್ದೇವೆ..

ಹೀಗಂತ ಬೇಸರ ಪಟ್ಟುಕೊಂಡಿದ್ದು ಕ್ರಾಂತಿಕಾರಿ ಮತ್ತು ವಿಭಿನ್ನ ನಿಲುವುಗಳಿಂದ ಹೆಸರಾದ ಕರ್ನಾಟಕ ಶಾಸ್ತ್ರೀಯ ಗಾಯಕ ಮತ್ತು ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಟಿ.ಎಂ. ಕೃಷ್ಣ.

ಸಾಹಿತಿ ಯು.ಆರ್‌. ಅನಂತಮೂರ್ತಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದ ಅವರು ಸಂಸ್ಕೃತಿ, ಶಿಕ್ಷಣ, ಸಂವಿಧಾನ, ಹೋರಾಟಕ್ಕೆ ಸಂಬಂಧಿಸಿದ ಹಲವಾರು ಪ್ರಶ್ನೆಗಳನ್ನು ಎತ್ತಿ ಹೋಗಿದ್ದಾರೆ.

ADVERTISEMENT

ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಿದೆ. ವಿವಿಧತೆಯಲ್ಲಿ ಏಕತೆ, ಸರ್ವಧರ್ಮ ಸಮನ್ವಯ, ಸಾಮರಸ್ಯ ಸಾರುವ ಸಂವಿಧಾನದ ಆಶಯಗಳನ್ನು ಮಕ್ಕಳಿಗೆ ಮನನ ಮಾಡುವ ಕೆಲಸವಾಗಬೇಕಿದೆ. ಅದಕ್ಕಾಗಿ ಶಾಲೆಗಳಲ್ಲಿ ನಿತ್ಯ ರಾಷ್ಟ್ರಗೀತೆಯ ಜತೆಗೆ ಸಾಮರಸ್ಯದ ಹಾಡುಗಳನ್ನು ಮಕ್ಕಳಿಂದ ಹಾಡಿಸಬೇಕು ಎಂಬ ಸಲಹೆಯನ್ನು ಅವರು ಮುಂದಿಟ್ಟಿದ್ದಾರೆ.

ಇಂದು ನಾವು ಪ್ರಶ್ನಿಸುವುದನ್ನೇ ಮರೆತಿದ್ದೇವೆ. ಒಂದು ಹೊತ್ತಿನ ಊಟಕ್ಕಾಗಿ ಹೋರಾಡುತ್ತಿರುವ, ಮಾಂಸ ಒಯ್ಯುತ್ತಿದ್ದ ಕಾರಣದಿಂದಲೇ ಸಾವಿಗೀಡಾದ ಜನರಿಗೆ ಆದ ಅನ್ಯಾಯದ ಕುರಿತು ನಾವು ಪ್ರಶ್ನಿಸುತ್ತಿಲ್ಲ. ಈ ಬಗ್ಗೆ ಮಾತನಾಡಲೂ ನಾವು ಮುಂದಾಗುತ್ತಿಲ್ಲವಲ್ಲ ಎನ್ನುವುದು ಕೃಷ್ಣ ಅವರ ಬೇಸರಕ್ಕೆ ಕಾರಣವಾಗಿದೆ.

ಪ್ರತಿಭಟಿಸಲು ಅನೇಕ ಮಾರ್ಗಗಳು ಇರಬಹುದು. ನಮ್ಮ ಬರವಣಿಗೆ, ಸಂಗೀತ, ಕಲೆಯ ಮೂಲಕ ಪ್ರತಿಭಟಿಸುವ ಜೊತೆಗೆ ಬೀದಿಗಿಳಿದು ಪ್ರತಿಭಟಿಸುವ, ಹೋರಾಡುವ ಮತ್ತು ಪ್ರಶ್ನಿಸುವ ಅಗತ್ಯವಿದೆ. ದೇಶವನ್ನು ಜೀವಂತವಾಗಿಡಲು ಬೀದಿಗಿಳಿದು ಹೋರಾಡುವುದು ಅಗತ್ಯವಾಗಿದೆ. ಈಗ ಉಳಿದಿರುವುದು ಅದೊಂದೆ ಮಾರ್ಗ ಎನ್ನುವುದು ಸಂಗೀತಗಾರನ ಸ್ಪಷ್ಟ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.