1965ರಿಂದಲೂ ನಗರದ ಸಾಂಸ್ಕೃತಿಕ ಲೋಕದಲ್ಲಿ ಹೆಸರಾಗಿದೆ ಉದಯಭಾನು ಕಲಾಸಂಘ. ಸಾಂಸ್ಕೃತಿಕ ಕಾರ್ಯಕ್ರಮಗಳಷ್ಟೇ ಅಲ್ಲದೇ ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ಸಂಘ ನಿರತವಾಗಿದೆ. ಈ ಬಾರಿಯ ರಾಜ್ಯೋತ್ಸವ ನಿಮಿತ್ತ ಉದಯಭಾನು ಕಲಾ ಸಂಘ ಶನಿವಾರದಿಂದ ನ. 18ವರೆಗೆ ಕನ್ನಡ ನಾಟಕೋತ್ಸವವನ್ನು ಹಮ್ಮಿಕೊಂಡಿದೆ.
ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಂಗಪ್ರಿಯರನ್ನು ಸೆಳೆಯಲು ಸಜ್ಜಾಗಿದೆ ಉದಯಭಾನು ಕಲಾಸಂಘ. ಶನಿವಾರ ಸಂಜೆ 5.30ಕ್ಕೆ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ನೆರವೇರಿಸುವರು. ಅತಿಥಿಗಳಾಗಿ ನಟಿ ಸಿಂಧೂ ಲೋಕನಾಥ್, ಉದಯಭಾನು ಕಲಾಸಂಘದ ಅಧ್ಯಕ್ಷ ಬಿ. ಕೃಷ್ಣ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಪಾಲ್ಗೊಳ್ಳುವರು.
ನ. 18ರಂದು ನಾಟಕೋತ್ಸವ ಸಮಾರೋಪ ಮತ್ತು ರಂಗಗೌರವ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರಾದ ಸುರೇಶ್ ದೇವರಮನಿ, ಹೆಲನ್ ಮೈಸೂರು ಅವರಿಗೆ ರಂಗಗೌರವ ಸಲ್ಲಲಿದೆ. ಸಮಾರೋಪದಲ್ಲಿ ಅತಿಥಿಗಳಾಗಿ ಹಿರಿಯ ನಟಿ ಗಿರಿಜಾ ಲೋಕೇಶ್, ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ, ಕೆ.ಬಾಗೇಗೌಡ, ಎನ್.ಶ್ರೀರಾಮರೆಡ್ಡಿ ಪಾಲ್ಗೊಳ್ಳುವರು.
ಉದಯಭಾನು ಕಲಾಸಂಘ ಕನ್ನಡ ನಾಟಕೋತ್ಸವ: ಶನಿವಾರ ಸಂಜೆ 5.30ಕ್ಕೆ ‘ಸೇವಂತಿ ಪ್ರಸಂಗ’ ನಾಟಕ ಪ್ರದರ್ಶನ. ರಚನೆ–ಜಯಂತ ಕಾಯ್ಕಿಣಿ, ನಿರ್ದೇಶನ–ಧನ್ವಂತ್ರಿ ಬಿ.ಎ., ತಂಡ–ರಂಗಪರಂಪರೆ ಟ್ರಸ್ಟ್, ಮುದ್ದಯ್ಯನಪಾಳ್ಯ. ಭಾನುವಾರ ಸಂಜೆ 5.30ಕ್ಕೆ ‘ಮಿ. ಡೂಪ್ಲಿಕೇಟ್’ ನಾಟಕ ಪ್ರದರ್ಶನ. ರಚನೆ–ಜಿ.ಜಿ., ನಿರ್ದೇಶನ–ಧನ್ವಂತ್ರಿ ಬಿ.ಎ., ತಂಡ–ಅಮರೇಶ್ವರ ವಿಜಯ ನಾಟಕ ಮಂಡಳಿ. ಆಯೋಜನೆ, ಸ್ಥಳ– ಉದಯಭಾನು ಕಲಾಸಂಘದ ಸಾಂಸ್ಕೃತಿಕ ಭವನ, ಗವಿಪುರ ಸಾಲು ಛತ್ರಗಳ ಎದುರು. ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡ ನಗರ. ಪ್ರವೇಶ ಉಚಿತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.