ಜೀ ಕನ್ನಡ ವಾಹಿನಿಯ ಜನಪ್ರಿಯ ಷೋ ‘ಡ್ರಾಮಾ ಜ್ಯೂನಿಯರ್ಸ್’ ಇದೀಗ ಫೈನಲ್ ಹಂತಕ್ಕೆ ಬಂದಿದೆ. ಈ ಸಂಭ್ರಮ ಹಂಚಿಕೊಳ್ಳಲು ‘ಡ್ರಾಮಾ...’ ತಂಡ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಮಾಧ್ಯಮದವರ ಮುಂದೆ ಹಾಜರಾಗಿತ್ತು.
ಕಾರ್ಯಕ್ರಮದ ಗ್ರಾಂಡ್ ಫಿನಾಲೆಯ ಚಿತ್ರೀಕರಣಕ್ಕಾಗಿ ಕಲಾ ನಿರ್ದೇಶಕ ಸುರೇಶ್ ಅಡಪ ಕಲ್ಪನೆಯಲ್ಲಿ ಉತ್ತರ ಕರ್ನಾಟಕ ಭಾಗದ ಗದಗದಲ್ಲಿ ವಿಶೇಷವಾದ ಸೆಟ್ ಸಿದ್ಧಗೊಳ್ಳುತ್ತಿದೆ. ಸೆಪ್ಟಂಬರ್ 19 ರಂದು ಚಿತ್ರೀಕರಣ ನಡೆಯಲಿದ್ದು, ತಿಂಗಳಾಂತ್ಯದಲ್ಲಿ ಪ್ರಸಾರಗೊಳ್ಳಲಿದೆ.
ಪಂಚಭಾಷಾ ತಾರೆ, ಲಕ್ಷ್ಮೀ, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಂ ಹಾಗೂ ನಟ ವಿಜಯ ರಾಘವೇಂದ್ರ ಕಾರ್ಯಕ್ರಮದ ನಿರ್ಣಾಯಕರಾಗಿದ್ದರೆ, ಮಾಸ್ಟರ್ ಆನಂದ್ ನಿರೂಪಕ.
‘ನಮ್ಮ ಕಾಲದಲ್ಲಿ ಈ ತರಹದ ಯಾವ ಅವಕಾಶಗಳು ಇರಲಿಲ್ಲ. ಈ ಪುಟ್ಟ ಮಕ್ಕಳಲ್ಲಿರುವ ಅಗಾಧ ಪ್ರತಿಭೆ ಕಂಡು ತುಂಬಾ ಖುಷಿಯಾಗಿದೆ’ ಎಂದು ಲಕ್ಷ್ಮಿ ಅಭಿಪ್ರಾಯಪಟ್ಟರು.
‘ಕಾರ್ಯಕ್ರಮದ ನಿರ್ಣಾಯಕನಾಗಿ ನನ್ನನ್ನು ಕರೆದಾಗ, ಇದೆಲ್ಲ ನನಗೇತಕಪ್ಪಾ ಅಂತ ಹೇಳಿದ್ದೆ’ ಎಂದು ಮಾತು ಆರಂಭಿಸಿದ ಟಿ.ಎನ್. ಸೀತಾರಾಂ, ‘ಮಕ್ಕಳಲ್ಲಿರುವ ಅದ್ಭುತ ಕಲೆ ನೋಡಿ ಅತ್ಯಾಶ್ಚರ್ಯವಾಗಿದೆ’ ಎಂದರು.
‘ಡ್ರಾಮಾ ಜ್ಯೂನಿಯರ್ಸ್ ಮಕ್ಕಳಿಂದ ನಾನೂ ಕೆಲ ಪಾಠಗಳನ್ನು ಕಲಿತಿದ್ದೇನೆ’ ಎಂದು ವಿಜಯರಾಘವೇಂದ್ರ ಹೇಳಿದರು. ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಡ್ರಾಮಾ ಜ್ಯೂನಿಯರ್ಸ್ ನಿರ್ದೇಶಕ ಶರಣಯ್ಯ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.