`ಎಷ್ಟು ಜನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಕೋಟ್ಯಧಿಪತಿ ಆಗುತ್ತಾರೋ ಗೊತ್ತಿಲ್ಲ. ನಾನಂತೂ ಕೋಟ್ಯಧಿಪತಿ ಆದೆ~ ಎಂದು ನಕ್ಕರು ಪುನೀತ್ ರಾಜ್ಕುಮಾರ್.
ಸುವರ್ಣ ವಾಹಿನಿಗಾಗಿ ಅವರು ನಡೆಸಿಕೊಡುವ ಬಹುನಿರೀಕ್ಷೆಯ `ಕನ್ನಡದ ಕೋಟ್ಯಧಿಪತಿ~ ರಿಯಾಲಿಟಿ ಶೋ ಮಾರ್ಚ್ 12ರಿಂದ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತಿಗಿಳಿದ ಪುನೀತ್ ತಮ್ಮ ಅನುಭವಗಳನ್ನು ಹರಿಬಿಟ್ಟರು.
`ಸುಮಾರು ಮೂರು ತಿಂಗಳ ಹಿಂದೆ ಇಂಥದ್ದೊಂದು ಕಾರ್ಯಕ್ರಮ ನಡೆಸಿಕೊಡುವಂತೆ ವಾಹಿನಿಯವರು ಕೇಳಿದಾಗ ದಿಗಿಲಾಯಿತು. ನಾನು ಹೆಚ್ಚು ಓದಿದವನಲ್ಲ. ಸಾಮಾನ್ಯಜ್ಞಾನವಂತೂ ಸಂಪೂರ್ಣ ಶೂನ್ಯ. ಅಮಿತಾಬ್ ಬಚ್ಚನ್, ಶಾರೂಕ್ ಖಾನ್ರಂತಹ ಶ್ರೇಷ್ಠರು ನಡೆಸಿಕೊಟ್ಟ ಜನಪ್ರಿಯ ಕಾರ್ಯಕ್ರಮವಿದು. ಹೀಗಿರುವಾಗ ನನ್ನಂತಹವರು ಹೇಗೆ ಇದನ್ನು ನಡೆಸಿಕೊಡಲು ಸಾಧ್ಯ ಎಂಬ ಹಿಂಜರಿಕೆ ಮೂಡಿತು.
ಆದರೆ ಮನೆಯಲ್ಲಿ ರಾಘಣ್ಣ, ಶಿವಣ್ಣ ಎಲ್ಲರೂ ಧೈರ್ಯ ತುಂಬಿದರು. ಒಪ್ಪಿಕೊಂಡೆ. ಈಗ ಕಾರ್ಯಕ್ರಮದಲ್ಲಿ ಅನೇಕ ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಸಾಕಷ್ಟು ಕಲಿತಿದ್ದೇನೆ. ಕಲಿಯುತ್ತಲೂ ಇದ್ದೇನೆ. ಕೋಟ್ಯಂತರ ಮನೆಯನ್ನು ಪ್ರವೇಶಿಸುತ್ತಿದ್ದೇನೆ. ಹೀಗಾಗಿ ನಿಜವಾದ ಕೋಟ್ಯಧಿಪತಿ ನಾನೇ~ ಎಂದು ಭಾವಪೂರ್ಣರಾಗಿ ಹೇಳಿದ ಪುನೀತ್, `ಬುದ್ದಿವಂತನಾಗುತ್ತಿದ್ದೇನೆ ಎಂಬ ಭರವಸೆ ಬಂದಿದೆ~ ಎಂದು ನಗು ಹರಿಸಿದರು.
ಅಪ್ಪಾಜಿ ಅಮಿತಾಬ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿಯನ್ನು ತಪ್ಪದೇ ನೋಡುತ್ತಿದ್ದರು. ಅವರಿಗೆ ತುಂಬಾ ಇಷ್ಟವಾದ ಕಾರ್ಯಕ್ರಮವದು. ಕನ್ನಡದಲ್ಲಿ ಈ ಕಾರ್ಯಕ್ರಮ ನಡೆಸಿಕೊಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಭಾಗ್ಯ. ಇಲ್ಲಿ ಅಮಿತಾಬ್ ಅನುಕರಣೆ ಇಲ್ಲ. ಅವರ ವಯಸ್ಸಿಗೆ ತಕ್ಕಂತೆ ಅವರು ಕಾರ್ಯಕ್ರಮ ನಡೆಸಿಕೊಡುತ್ತಾರೆ. ನಾನು ನನ್ನ ವಯಸ್ಸಿಗೆ ತಕ್ಕಂತೆ ನಿರ್ವಹಿಸುತ್ತೇನೆ. ಇಲ್ಲಿ ಎಲ್ಲವೂ ನನ್ನದೇ ಶೈಲಿ ಎಂದರು.
ಕೆಬಿಸಿಯಲ್ಲಿ ಅಮಿತಾಬ್ `ಕಂಪ್ಯೂಟರ್ಜಿ~ ಎನ್ನುವಂತೆ ಪುನೀತ್ ಇಲ್ಲಿ ಕಂಪ್ಯೂಟರ್ ಅನ್ನು ಕರೆಯುವುದು `ಗುರುಗಳೇ~ ಎಂದು. ಕಾರ್ಯಕ್ರಮದಲ್ಲಿ ಶೇಕಡಾ 80ರಷ್ಟು ಕನ್ನಡಕ್ಕೆ ಸಂಬಂಧಿತ ಪ್ರಶ್ನೆಗಳಿರುತ್ತವೆಯಂತೆ. ಶೇ 10ರಷ್ಟು ದಕ್ಷಿಣ ಭಾರತಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಉಳಿದ ಪ್ರಶ್ನೆಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿರುತ್ತವೆಯಂತೆ.
ಪ್ರಶ್ನೆಗಳನ್ನು ರೂಪಿಸಲೆಂದೇ ವಿಶೇಷ ತಂಡವನ್ನು ರಚಿಸಲಾಗಿದೆ. ಈ ತಂಡ ಅಧ್ಯಯನ ನಡೆಸಿ ಪ್ರಶ್ನೆಗಳನ್ನು ತಯಾರಿಸಲಿದೆಯಂತೆ. ಕಾರ್ಯಕ್ರಮಕ್ಕೆ ಸಂಭಾಷಣೆಗಳನ್ನು ಹೆಣೆದಿರುವುದು `ಮಠ~ ಗುರುಪ್ರಸಾದ್.
ಕನ್ನಡಿಗರಿಗೆ ಹೊಸತನವಿರುವ ಕಾರ್ಯಕ್ರಮ ನೀಡುವ ಉದ್ದೇಶ ವಾಹಿನಿಯದು. ಇದು ಅತ್ಯಂತ ವೆಚ್ಚದಾಯಕ ಕಾರ್ಯಕ್ರಮ. ಕನ್ನಡ ಕಿರುತೆರೆಯಲ್ಲಿ ಇದು ಹೊಸ ಇತಿಹಾಸ ಸೃಷ್ಟಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು ವಾಹಿನಿಯ ಬಿಜಿನೆಸ್ ಹೆಡ್ ಅನೂಪ್ ಚಂದ್ರಶೇಖರ್.
ಹಿಂದಿಯಲ್ಲಿ ಸುಮಾರು 12 ವರ್ಷದಿಂದ ಪ್ರಸಾರವಾಗುತ್ತಿರುವ ಕಾರ್ಯಕ್ರಮವನ್ನು ಕನ್ನಡಕ್ಕೆ ತರುತ್ತಿರುವುದು ಹೆಮ್ಮೆಯ ವಿಚಾರ. ಈ ಕಾರ್ಯಕ್ರಮ ಹಣವಂತರಿಗಲ್ಲ. ಜ್ಞಾನದ ಹಸಿವುಳ್ಳ, ಹಣದ ಅಗತ್ಯವುಳ್ಳ ಸಾಮಾನ್ಯ ಜನರಿಗಾಗಿ ಎನ್ನುವುದು ವಾಹಿನಿಯ ನಾನ್ ಫಿಕ್ಷನ್ ವಿಭಾಗದ ಮುಖ್ಯಸ್ಥ ರಾಘವೇಂದ್ರ ಅಭಿಪ್ರಾಯ.
ಸುಮಾರು 18 ಲಕ್ಷ ಜನ ಎಸ್ಎಂಎಸ್ ಮೂಲಕ ಕಾರ್ಯಕ್ರಮಕ್ಕೆ ಪ್ರವೇಶ ಬಯಸಿದ್ದರು. ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಮೈಸೂರು, ಬೆಂಗಳೂರುಗಳಲ್ಲಿ ಆಡಿಷನ್ ನಡೆಸಲಾಗಿದೆ. ಮೊದಲ ಅವಧಿಯಲ್ಲಿ 80 ಕಂತುಗಳನ್ನು ಪ್ರಸಾರ ಮಾಡುವುದು ವಾಹಿನಿಯ ಉದ್ದೇಶ. ಶೀಘ್ರದಲ್ಲೇ ಎರಡನೇ ಹಂತದ ಆಡಿಷನ್ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ನಿರ್ಮಾಣ ಸಂಸ್ಥೆ ಬಿಗ್ ಸಿನರ್ಜಿಯ ನಿರ್ದೇಶಕ ಅನಿತಾ ಬಾಸು, ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
`ಕನ್ನಡದ ಕೋಟ್ಯಧಿಪತಿ~ ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಮಾರ್ಚ್ 12ರಿಂದ ಸೋಮವಾರದಿಂದ ಗುರುವಾರ ಪ್ರತಿರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.