ADVERTISEMENT

ಧಾರಾವಾಹಿ ಶೂಟಿಂಗ್ ವೇಳೆ ಕಿರುತೆರೆ ನಟ ಚಂದನ್ ಮೇಲೆ ಹಲ್ಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2022, 6:22 IST
Last Updated 1 ಆಗಸ್ಟ್ 2022, 6:22 IST
ನಟ ಚಂದನ್
ನಟ ಚಂದನ್   

ಬೆಂಗಳೂರು: ಕಿರುತೆರೆ ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಚಂದನ್ ಅಲಿಯಾಸ್ ಚಂದನ್ ಕುಮಾರ್ ಅವರ ಮೇಲೆ ಧಾರಾವಾಹಿ ಚಿತ್ರೀಕರಣದ ಸೆಟ್‌ನಲ್ಲಿ ಹಲ್ಲೆ ನಡೆದಿದೆ.

ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ‘ಶ್ರೀಮತಿ ಶ್ರೀನಿವಾಸ್’ ಎಂಬ ತೆಲುಗು ಧಾರಾವಾಹಿಯ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಧಾರಾವಾಹಿಯಸಿಬ್ಬಂದಿಯೊಬ್ಬಚಂದನ್ ಮೇಲೆ ಕಪಾಳ ಮೋಕ್ಷ ಮಾಡಿ, ಹಲ್ಲೆ ನಡೆಸಿದ್ದಾರೆ.

ಹಲ್ಲೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ADVERTISEMENT

ಈ ಕುರಿತು ಖಾಸಗಿ ಮಾಧ್ಯಮಗಳ ಜೊತೆ ಮಾತನಾಡಿರುವ ಚಂದನ್, ಈ ಘಟನೆ ಜುಲೈ 31 ರಂದು ನಡೆದಿದೆ. ಸಣ್ಣ ಕಾರಣಕ್ಕೆ ನಾನು ಕ್ಯಾಮೆರಾಮೆನ್ ಮೇಲೆ ಕೋಪಗೊಂಡಿದ್ದರಿಂದ ಅವನು ಯಾರನ್ನೋ ಕರೆದುಕೊಂಡು ಬಂದ ನನ್ನ ಜೊತೆ ಕೆಟ್ಟದಾಗಿ ವರ್ತಿಸಿದ್ದಾನೆ. ನಾನು ಆ ಘಟನೆಯನ್ನು ಅಲ್ಲೇ ಮರತಿದ್ದೇನೆ ಎಂದಿದ್ದಾರೆ.

‘ಇದೊಂದು ಚಿಕ್ಕ ಘಟನೆ. ಆದರೆ ನಂತರ ನಡೆದಿದ್ದು ಬೇಸರ ತಂದಿತು. ಅಮ್ಮನಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ಯೋಚನೆಯಲ್ಲಿ ನಾನಿದ್ದೆ. ಆದರೂ ನಾನು ಚಿತ್ರೀಕರಣಕ್ಕೆ ಹೈದರಾಬಾದ್ ಗೆ ಬಂದಿದ್ದೆ. ಆದರೆ ಇಲ್ಲಿ ಸರಿಯಾಗಿ ಶೂಟಿಂಗ್ ಆಗಿಲ್ಲ. ಧಾರಾವಾಹಿಯ ಸಹಾಯಕ ನಿರ್ದೇಶಕ ರಂಜಿತ್ ಸ್ವಲ್ಪ ತರಲೆ. ಭಾನುವಾರ ಮಧ್ಯಾಹ್ನ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ನನ್ನನ್ನು ಪದೇ ಪದೇ ಬಂದು ಕರೆಯುತ್ತಿದ್ದ. ತಲೆ ನೋವಿದೆ ಬರುತ್ತೇನೆ ಎಂದು ನಾನು ಹೇಳಿದ್ದೆ. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿ ಎಬ್ಬಿಸೋ ಅವನನ್ನು ಎಂದು ನನ್ನ ಸಹಾಯಕರಿಗೆ ಗಟ್ಟಿಯಾಗಿ ಹೇಳಿದ್ದಾನೆ. ಇದನ್ನು ನಾನು ಕೇಳಿಸಿಕೊಂಡೆ. ಇದನ್ನು ನಾನು ಪ್ರಶ್ನಿಸಿದೆ. ಹೀಗೆ ಮಾತನಾಡುವಾಗ ಸ್ವಲ್ಪ ಸಲಿಗೆಯಿಂದ ನಾನು ಅವನನ್ನು ಕೊಂಚ ತಳ್ಳಿದೆ. ಇದನ್ನೇ ಹಲ್ಲೆ ಎಂದು ಆತ ನಿರ್ದೇಶಕರ ಬಳಿ ಹೋಗಿ ದೂರು ಹೇಳಿದ. ಇದರ ಬಳಿಕ ಈ ಘಟನೆ ನಡೆಯಿತು. ಇದನ್ನು ಮುಂದುವರಿಸಲು ಇಚ್ಛಿಸುವುದಿಲ್ಲ. ದೊಡ್ಡದು ಮಾಡುವಂಥದ್ದೇನೂ ಆಗಿಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.