ಬೆಂಗಳೂರು:29ನೇ ದಿನ ಕನ್ನಡದ ಬಿಗ್ ಬಾಸ್ ಮನೆ ರೋಚಕತೆ ಪಡೆದುಕೊಂಡಿತ್ತು. ಫಿಸಿಕಲ್ ಟಾಸ್ಕ್ನಲ್ಲಿ ಸೆಣೆಸಾಡಿದ ಸ್ಪರ್ಧಿಗಳು ಸುಸ್ತಾದರು. ಮನೆಯ ಅತ್ಯುತ್ತಮ ಸ್ಪರ್ಧಿ ಮಂಜು ಪಾವಗಡ ಹಲ್ಲು ಮುರಿದುಕೊಂಡರೆ, ರಾಜೀವ್ ಭುಜಕ್ಕೆ ಗಾಯ ಮಾಡಿಕೊಂಡರು.
ಈ ವಾರ ಬಿಗ್ ಬಾಸ್ ದಿವ್ಯಾ ಉರುಡುಗ ಮತ್ತು ಶುಭಾ ಪೂಂಜಾ ನೇತೃತ್ವದ ತಂಡಗಳಿಗೆ ಕ್ಯಾಪ್ಟೆನ್ಸಿ ಕಂಟೆಂಡರ್ ಟಾಸ್ಕ್ ನೀಡಿದ್ದರು. ಇಟ್ಟಿಗೆಗಳನ್ನು ಜೋಡಿಸಿ ಗೋಪುರ ಕಟ್ಟಬೇಕು. ಎದುರಾಳಿ ತಂಡದವರು ಅದನ್ನು ಉರುಳಿಸಬೇಕು. ಎದುರಾಳಿಗಳ ದಾಳಿಗಳಿಗೆ ಜಗ್ಗದೆ ಇಟ್ಟಿಗೆಗಳನ್ನು ಕಾಪಾಡಿಕೊಳ್ಳಬೇಕು. ಈ ಮಧ್ಯೆ, ಮಂಜು ಅವರು ಎದುರಾಳಿ ತಂಡದ ಬಲಿಷ್ಠ ಸ್ಪರ್ಧಿ ರಾಜೀವ್ ಅವರನ್ನು ಹಿಡಿದಿಟ್ಟುಕೊಂಡಿದ್ದರು. ಈ ಸಂದರ್ಭ ಇಬ್ಬರ ನಡುವೆ ಎಳೆದಾಟ ನಡೆಯಿತು. ರಾಜೀವ್ ಜೋರಾಗಿ ಮೊಣಕೈ ಹಿಂದಕ್ಕೆ ಸರಿಸಿದ್ದರಿಂದ ಮಂಜು ಅವರ ದವಡೆಗೆ ತಗುಲಿ ಹಲ್ಲು ಮುರಿದೇ ಹೋಯ್ತು. ಈ ವೇಳೆ ರಾಜೀವ್ ಅವರ ಭುಜಕ್ಕೆ ಗಾಯವಾಗಿ ಕುಸಿದು ಬಿದ್ದರು.
ಕಣ್ಣೀರು ಹಾಕಿದ ಮಂಜು: ಹಲ್ಲು ಮುರಿದಿದೆ. ಕಲಾವಿದನಾಗಿ ಮುಂದೆ ನನ್ನ ಪರಿಸ್ಥಿತಿ ಏನು ಎಂದು ನೋವು ತೋಡಿಕೊಂಡರು. ಮಧ್ಯಪ್ರವೇಶಿಸಿದ ನಿಧಿ ಮತ್ತು ಶುಭಾ ಅವರು ಅರ್ಧ ಗಂಟೆಯಲ್ಲಿ ಕ್ಯಾಪ್ ಹಾಕಿ ಹಲ್ಲು ಸರಿಪಡಿಸಬಹುದು ಎಂದು ಧೈರ್ಯ ಹೇಳಿದರು. ಇತ್ತ, ಮಂಜು ಅವರಿಗೆ ಗಾಯ ಮಾಡಿದ್ದ ರಾಜೀವ್, ಒಬ್ಬ ಕಲಾವಿದನಿಗೆ ಹೀಗೆ ಆಯಿತಲ್ಲ ಎಂದು ಕಣ್ಣೀರು ಹಾಕಿದರು.
ಪ್ರಶಾಂತ್ ವರ್ತನೆಗೆ ಸಿಡಿದ ಅರವಿಂದ್: ಇದೇವೇಳೆ, ಆಟದ ಮಧ್ಯೆ ದಿವ್ಯಾ ಉರುಡುಗ ಅವರನ್ನು ಹಿಡಿದಿದ್ದ ಪ್ರಶಾಂತ್ ಸಂಬರಗಿ ತಮ್ಮ ಪೂರ್ತಿ ಭಾರ ಅವರ ಮೇಲೆ ಹಾಕಿ ಕುಳಿತಿದ್ದರು. ಇದರಿಂದ ಕೋಪಗೊಂಡ ಅರವಿಂದ್ ಪ್ರಶಾಂತ್ ಕಾಲುಗಳನ್ನು ಹಿಡಿದು ಎಳೆದು ಹಾಕಿದರು.ಈ ಸಂದರ್ಭ ಮಾತಿನ ಚಕಮಕಿ ನಡೆದು, ನೀನೇನ್ ಮಾಡ್ತಿದ್ದೀಯಾ ಗೊತ್ತಿದೆ ಹೋಗೋ ಎಂದು ಏಕವಚನದಲ್ಲಿ ನಿಂದಿಸಿದರು.
ಕಮ್ ಬ್ಯಾಕ್ ಮಾಡಿದ ವೈಷ್ಣವಿ: ಮೊದಲ ಮೂರು ವಾರ ಸೈಲೆಂಟ್ ಆಗಿ ನಟಿ ವೈಷ್ಣವಿ ಉತ್ತಮ ಆಟದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ದೇಹಕ್ಕೆ ಹಗ್ಗ ಸುತ್ತಿಕೊಂಡು ಮತ್ತೆ ಕಂಬಕ್ಕೆ ಸುತ್ತುವ ಟಾಸ್ಕ್ನಲ್ಲಿ ಮಂಜು ಪಾವಗಡ ಸೇರಿ ಜೊತೆ ರಜೀವ್ ಮತ್ತು ಅರವಿಂದ್ಗೆ ಭರ್ಜರಿ ಸ್ಪರ್ಧೆ ಕೊಟ್ಟ ವೈಷ್ಣವಿ ಗೆಲುವಿನ ರೂವಾರಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.