ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್–9ರ ಮೊದಲ ವಾರವೇ ಬೈಕರ್ ಐಶ್ವರ್ಯಾ ಪಿಸೆ ಮನೆಯಿಂದ ಹೊರಬಿದ್ದಿದ್ದಾರೆ.
ಬೈಕ್ ರೇಸರ್ ಆಗಿ ವಿಶ್ವಮಟ್ಟದಲ್ಲಿ ಗಮನ ಸೆಳೆದಿರುವ ಪಿಸೆ ಅವರಿಗೆ ಪ್ರೇಕ್ಷಕರು ಒಲವು ತೋರಲಿಲ್ಲ. ಕ್ರೀಡೆಯಿಂದ ಗುರುತಿಸಿಕೊಂಡಿರುವ ಐಶ್ವರ್ಯಾ ಬಿಗ್ ಬಾಸ್ ಮನೆಯಲ್ಲಿ ಅಷ್ಟಾಗಿ ಗಮನ ಸೆಳೆಯಲಿಲ್ಲ. ಟಾಸ್ಕ್ ಮತ್ತು ಇತರೆ ಚಟುವಟಿಕೆಗಳಲ್ಲಿ ಅವರ ಪ್ರದರ್ಶನ ಅಷ್ಟಾಗಿ ಕಾಣುತ್ತಿರಲಿಲ್ಲ. ಮನೆಯಲ್ಲೂ ಎಲ್ಲರ ಜೊತೆ ಬೆರೆತಂತೆ ಕಾಣಲಿಲ್ಲ. ಹೀಗಾಗಿ, ಅವರಿಗೆ ಕಳಪೆ ಎಂದೂ ಸಹ ಕೆಲವರು ಮತ ಹಾಕಿದ್ದರು. ಆದರೆ, ಅಂತಿಮವಾಗಿ ಪ್ರೇಕ್ಷಕರ ಮತವೂ ಅವರ ಪರವಾಗಿಲ್ಲದ ಕಾರಣ ಮನೆಯಿಂದ ಹೊರಹೋದರು.
ಭಾನುವಾರದ ಸಂಚಿಕೆಯ ಎಲಿಮಿನೇಶನ್ನ ಅಂತಿಮ ಹಂತಕ್ಕೆ ನಟ, ಉದ್ಯಮಿ ದರ್ಶ್ ಚಂದ್ರಪ್ಪ ಮತ್ತು ಐಶ್ವರ್ಯಾ ಪಿಸೆ ಬಂದಿದ್ದರು. ಅದೃಷ್ಟವಶಾತ್, ದರ್ಶ್ ಚಂದ್ರಪ್ಪ ಬಚಾವಾದರು.
ಅನುಪಮಾ ಗೌಡ, ನೇಹಾ ಗೌಡ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಮತ್ತು ಅಮೂಲ್ಯ ಹೊರತುಪಡಿಸಿ ಉಳಿದ 12 ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದರು.
ಆರ್ಯವರ್ಧನ್ಗೆ ಶಾಕ್ ಕೊಟ್ಟ ಪಿಸೆ:
ಮನೆಯಿಂದ ತೆರಳುತ್ತಿದ್ದ ಐಶ್ವರ್ಯಾ ಪಿಸೆ ಅವರಿಗೆ ಬಿಗ್ ಬಾಸ್, ಮುಂದಿನ ವಾರದ ಎಲಿಮಿನೇಶನ್ಗೆ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ನೀಡಿದ್ದರು. ಈ ಸಂದರ್ಭ ಆರ್ಯವರ್ಧನ್ ಹೆಸರು ತೆಗೆದುಕೊಂಡ ಪಿಸೆ, ಅವರು ಶ್ರಮದ ಬದಲು ಯಾವಾಗಲೂ ನಂಬರ್ ಲೆಕ್ಕ ಹಾಕುತ್ತಿರುತ್ತಾರೆ. ಹಾಗಾಗಿ, ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂದು ಹೇಳಿದರು.
ನವಾಜ್ ಮೆಚ್ಚಿದಪಿಸೆ: ಮನೆಯಲ್ಲಿ ಐಶ್ವರ್ಯ ಅವರನ್ನು 19 ವರ್ಷದ ಸ್ಪರ್ಧಿ ನವಾಜ್ ತುಂಬಾ ಮೆಚ್ಚಿಕೊಂಡಿದ್ದರು. ಹಾಲಿವುಡ್ ಹೀರೊಯಿನ್ ಥರಾ ಕಾಣುತ್ತಾರೆ. ಮೇಕಪ್ ಇಲ್ಲದ ಸಹಜ ಸೌಂದರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಮಾಷೆಯಾಗಿ ಪ್ರಪೋಸ್ ಮಾಡಿ, ಐಶ್ವರ್ಯಾ ಅವರಿಂದ ಅಪ್ಪುಗೆಯನ್ನೂ ಗಿಟ್ಟಿಸಿದ್ದರು. ಪಿಸೆ ಎಲಿಮಿನೇಶನ್ನ ಅಂತಿಮ ಹಂತಕ್ಕೆ ಬಂದಾಗ ಅವರು, ಉಳಿದುಕೊಳ್ಳಬೇಕು ಎಂದು ಸುದೀಪ್ ಬಳಿ ನವಾಜ್ ಹೇಳಿದ್ದೂ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.