ನವದೆಹಲಿ: ಶ್ವಾಸಕೋಶದ ಸೋಂಕಿನಿಂದ ಸೋದರಿ ಕಮಲ್ ಕಪೂರ್ ಸಾವಿಗೀಡಾಗಿದ್ದಾರೆ ಎಂದು ಹಿರಿಯ ನಟ, ಮಹಾಭಾರತ ಧಾರಾವಾಹಿಯ ಭೀಷ್ಮ ಪಿತಾಮಹ ಪಾತ್ರಧಾರಿ ಮುಕೇಶ್ ಖನ್ನಾ ಹೇಳಿದ್ದಾರೆ. ‘ಜೀವನದಲ್ಲೇ ಮೊದಲ ಬಾರಿ ನಾನು ಅಧೀರನಾಗಿದ್ದೇನೆ’ ಎಂದು ಫೇಸ್ಬುಕ್ನಲ್ಲಿ ಅವರು ಬರೆದುಕೊಂಡಿದ್ದಾರೆ.
ಸ್ವತಃ ಮುಕೇಶ್ ಮೃತಪಟ್ಟಿದ್ದಾರೆಂಬ ವದಂತಿ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು. ಇದಾಗಿ ಒಂದು ದಿನದ ನಂತರ ಸ್ವತಃ ಹಿರಿಯ ನಟನೇ, ಸೋದರಿಯ ಸಾವಿನ ಕುರಿತು ಪೋಸ್ಟ್ ಹಾಕಿದ್ದಾರೆ. ಸೋದರಿ ಇತ್ತೀಚೆಗಷ್ಟೇ ಕೋವಿಡ್ನಿಂದ ಗುಣಮುಖರಾಗಿದ್ದರು. ಆದರೆ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು.
‘ನಿನ್ನೆ ನನ್ನ ಸಾವಿನ ಕುರಿತು ಹಬ್ಬಿಸಿದ ವದಂತಿಯ ಸತ್ಯ ಏನೆಂದು ತಿಳಿಸಲು ಒದ್ದಾಡಿದೆ. ಆದರೆ ಇಂದು ಅದಕ್ಕಿಂತ ದೊಡ್ಡ ಆಘಾತ ಎದುರಾಗಬಹುದು ಎಂದು ನನಗೆ ಗೊತ್ತಿರಲಿಲ್ಲ. ಹಿರಿಯ ಸೋದರಿ ಕಮಲ್ ಕಪೂರ್ ದೆಹಲಿಯಲ್ಲಿ ಸಾವಿಗೀಡಾಗಿದ್ದಾರೆ. ಬೇಸರವಾಗಿದೆ’ ಎಂದು ಅವರು ಬರೆದಿದ್ದಾರೆ. ಜೊತೆಗೆ ಹಲವು ಚಿತ್ರಗಳನ್ನು ಪೋಸ್ಟ್ ಜೊತೆ ಹಂಚಿಕೊಂಡಿದ್ದಾರೆ.
‘ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಂಪೂರ್ಣ ಚೇತರಿಸಿಕೊಂಡಿದ್ದೇನೆ. ನನಗೆ ಕೋವಿಡ್–19 ಕಾಣಿಸಿಕೊಂಡಿಲ್ಲ. ಯಾವುದೇ ಆಸ್ಪತ್ರೆಗೂ ದಾಖಲಾಗಿಲ್ಲ’ ಎಂದೂ ಮುಕೇಶ್ ಖನ್ನಾ ಬುಧವಾರ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.