ಪ್ಯಾರಾಬ್ಯಾಡ್ಮಿಂಟನ್ ಸ್ಪರ್ಧಿ ಕರ್ನಾಟಕದ ಬೋರೇಗೌಡ ಆನಂದ್ ಕುಮಾರ್ ವಿಶ್ವ ಪ್ಯಾರಾಬ್ಯಾಡ್ಮಿಂಟನ್ ನಕ್ಷೆಯಲ್ಲಿ ಭಾರತದ ಹೆಸರನ್ನು ಅಗ್ರಸ್ಥಾನಕ್ಕೇರಿದ್ದಾರೆ. ಎಸ್ಎಲ್-4 ವಿಭಾಗದ ಸಿಂಗಲ್ಸ್ನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎನಿಸಿದ್ದಾರೆ.
ದೇಹದ ಒಂದು ಭಾಗವೇ ಸರಿಯಿಲ್ಲದಾಗ ವಿಧಿಯನ್ನು ಶಪಿಸುತ್ತಾ ಬದುಕನ್ನೇ ವ್ಯರ್ಥ ಮಾಡಿಕೊಳ್ಳುವವರ ಸಂಖ್ಯೆಯೇ ಹೆಚ್ಚು. ಕೊರತೆಗಳ ನಡುವೆಯೂ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕುವವರು ವಿರಳ. ಆದರೆ, ಜೀವನೋತ್ಸಾಹ ಇಮ್ಮಡಿಸಿಕೊಳ್ಳುವ ಸಲುವಾಗಿ ಬ್ಯಾಡ್ಮಿಂಟನ್ ಮೊರೆ ಹೋದ ಆನಂದ್ ವಿಶ್ವ ಪ್ಯಾರಾಬ್ಯಾಡ್ಮಿಂಟನ್ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಹೋದ ವರ್ಷ ದಕ್ಷಿಣ ಕೊರಿಯಾದ ಸೋಲ್ನಲ್ಲಿ ಜರುಗಿದ ಮೂರನೇ ವಿಕ್ಟರ್ ಏಷ್ಯನ್ ಪ್ಯಾರಾಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಸಿಂಗಲ್ಸ್ನಲ್ಲಿ ಚಿನ್ನ ಮತ್ತು ಡಬಲ್ಸ್ನಲ್ಲಿ ಕಂಚು ಜಯಿಸಿದ್ದರು. `ನಿನ್ನ ದೇಹದ ಅರ್ಧಭಾಗವೇ ಊನವಾಗಿದೆ. ರ್ಯಾಕೆಟ್ ಹಿಡಿಯುವುದೂ ಹಾಗೂ ಓಡಾಡುವುದು ನಿನ್ನಿಂದಾಗದು. ಇದರಲ್ಲಿಯೇ ಸಾಧನೆ ಮಾಡುವುದು ಕೇವಲ ಕನಸಿನ ಮಾತು' ಎಂದು ಕೊಂಕು ನುಡಿದವರೇ ಹೆಚ್ಚು. ಹೀಗೆ ಪ್ರತಿ ಸಲ ಕೊಂಕು ನುಡಿ ಕೇಳಿದಾಗ ಸಾಧನೆಯ ತುಡಿತ ಹೆಚ್ಚಾಗುತ್ತಿತ್ತು. ಬದುಕಿನ ಹುಮ್ಮಸ್ಸು ಇಮ್ಮಡಿಕೊಳ್ಳುತ್ತಿತ್ತು ಎನ್ನುತ್ತಾರೆ ಆನಂದ್. ಇವರ ಬಲಗೈ ಮತ್ತು ಬಲಗಾಲು ಭಾಗದ ಸ್ವಾಧೀನ ಇಲ್ಲ.
ಅಥ್ಲೆಟಿಕ್ಸ್ನಲ್ಲೂ ಸೈ: ಬ್ಯಾಡ್ಮಿಂಟನ್ ಮಾತ್ರವಲ್ಲದೇ ಅಥ್ಲೆಟಿಕ್ಸ್ನಲ್ಲೂ ಆನಂದ್ ಸೈ ಎನಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಇದೇ ಏಪ್ರಿಲ್ನಲ್ಲಿ ನಡೆದ 14ನೇ ಪ್ಯಾರಾಲಿಂಪಿಕ್ ಸೀನಿಯರ್ ನ್ಯಾಷನಲ್ ಅಥ್ಲೆಟಿಕ್ ಚಾಂಪಿಯನ್ಷಿಪ್ನ 800 ಮೀಟರ್ ಓಟದಲ್ಲಿ ಚಿನ್ನ ಮತ್ತು 400 ಮೀ. ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದೇ ಸಾಕ್ಷಿ.
ಏಪ್ರಿಲ್ನಲ್ಲಿ ಟರ್ಕಿ ಪ್ಯಾರಾಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲೂ ಆನಂದ್ ಚಿನ್ನ ಜಯಿಸಿದ್ದರು. 13 ವರ್ಷಗಳ ಬ್ಯಾಡ್ಮಿಂಟನ್ ಯಾತ್ರೆಯಲ್ಲಿ ಸಾಗಿ ಬಂದ ಹಾದಿಯ ಬಗ್ಗೆ ಆನಂದ್ `ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಪ್ಯಾರಾಬ್ಯಾಡ್ಮಿಂಟನ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಬಗ್ಗೆ ಹೇಳಿ?
13 ವರ್ಷಗಳ ಹಿಂದೆ ರ್ಯಾಕೆಟ್ ಹೇಗೆ ಹಿಡಿಯಬೇಕೆನ್ನುವುದೇ ಗೊತ್ತಿರಲಿಲ್ಲ. ಆಗ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಆಡಿದರೆ ಸಾಕು ಎನ್ನುವ ಕನಸಿತ್ತು. ಆದರೆ, ಪ್ರಯತ್ನದ ಫಲದಿಂದ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಪಡೆಯುವ ಸಾಧನೆ ಸಾಧ್ಯವಾಗಿದೆ. ಬ್ಯಾಡ್ಮಿಂಟನ್ ಆಡಲು ಶುರುಮಾಡಿದ ಮೂರು ವರ್ಷಗಳ ನಂತರ (2005-06ರಲ್ಲಿ) ವಿಶ್ವ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನದಲ್ಲಿದ್ದೆ. ಆದರೆ, ಮೊದಲ ಸ್ಥಾನಕ್ಕೇರಲು ಎಂಟು ವರ್ಷ ಶ್ರಮ ಪಡಬೇಕಾಯಿತು. ನಿರೀಕ್ಷೆ ಮೀರಿದ ಸಾಧನೆ ಖುಷಿ ನೀಡಿದೆ.
ಬ್ಯಾಡ್ಮಿಂಟನ್ ಕ್ರೀಡೆಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ?
ಬ್ಯಾಡ್ಮಿಂಟನ್ ಅಂತ ಮಾತ್ರವಲ್ಲ. ಯಾವ ಕ್ರೀಡೆಯಲ್ಲಾದರೂ ಸರಿ. ಮೊದಲು ನನ್ನನ್ನು ನಾನು ತೊಡಗಿಸಿಕೊಳ್ಳಬೇಕು ಎನ್ನುವ ಗುರಿಯಿತ್ತು. ದೇಹದ ಬಲಭಾಗ ಊನವಾಗಿದ್ದರಿಂದ ಕೆಲವರು ಕರುಣೆ ತೋರಿಸುತ್ತಿದ್ದರು. ಇನ್ನೂ ಕೆಲವರು ಕೊಂಕು ನುಡಿಯುತ್ತಿದ್ದರು. ಆದರೆ, ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಈ ವೈಕಲ್ಯ ನನ್ನ ಬದುಕಿಗೆ ಅಡ್ಡಿಯಾಗಬಾರದು ಎನ್ನುವ ಛಲವಿತ್ತು.
ಅಥ್ಲೆಟಿಕ್ಸ್ನಲ್ಲಿಯೂ ಆಸಕ್ತಿ ಬೆಳೆಯಲು ಕಾರಣ?
ಬ್ಯಾಡ್ಮಿಂಟನ್ ಅಭ್ಯಾಸ ಶುರು ಮಾಡುವ ಮುನ್ನ ಕೊಂಚ ಲಘು ವ್ಯಾಯಾಮ ಮಾಡುತ್ತೇನೆ. ಆದ್ದರಿಂದ ಆಗಾಗ್ಗೆ 200, 400 ಮೀಟರ್ ದೂರ ಓಡುವುದನ್ನು ರೂಢಿಸಿಕೊಂಡಿದ್ದೆ. ಇದೇ ವರ್ಷದ ಏಪ್ರಿಲ್ನಲ್ಲಿ ಪ್ಯಾರಾಲಿಂಪಿಕ್ ಅಥ್ಲೆಟಿಕ್ ಚಾಂಪಿಯನ್ಷಿಪ್ ನಡೆದಾಗ ಅಭ್ಯಾಸಕ್ಕೆಂದು ಓಡಿದೆ. ಅದೃಷ್ಟಕ್ಕೆ ಎರಡು ಪದಕ ಬಂದವು. ಈ ಆಕಸ್ಮಿಕ ಸಾಧನೆ ಭವಿಷ್ಯದಲ್ಲಿ ಹಲವು ಭರವಸೆಗಳನ್ನು ಹುಟ್ಟು ಹಾಕಿದೆ.
ಏನು ಆ ಭರವಸೆ?
2016ರ ವೇಳೆಗೆ ಪ್ಯಾರಾಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ಸೇರ್ಪಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಬ್ಯಾಡ್ಮಿಂಟನ್ ಸೇರ್ಪಡೆಯಾದರೆ ಅದರಲ್ಲಿಯೇ ಪದಕ ಗೆಲ್ಲಬೇಕು ಎನ್ನುವ ಗುರಿಯಿದೆ. ಒಂದು ವೇಳೆ ಮುಂದಿನ ಪ್ಯಾರಾಲಿಂಪಿಕ್ಸ್ನಲ್ಲಿ ಈ ಕ್ರೀಡೆ ಸೇರ್ಪಡೆಯಾಗದಿದ್ದರೆ, ಅಥ್ಲೆಟಿಕ್ಸ್ನಲ್ಲಿ ಸಾಧನೆ ಮಾಡುವ ಆಸೆಯಿದೆ.
ಯಾವ ಟೂರ್ನಿಗೆ ಸಜ್ಜುಗೊಳ್ಳುತ್ತಿದ್ದೀರಿ? ಜರ್ಮನ್ನಲ್ಲಿ ಈ ವರ್ಷದ ಅಂತ್ಯದಲ್ಲಿ ವಿಶ್ವ ಪ್ಯಾರಾಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಜರುಗಲಿದೆ. ಪ್ಯಾರಾಬ್ಯಾಡ್ಮಿಂಟನ್ಗಳ ಪಾಲಿಗೆ ಈ ಟೂರ್ನಿಯೇ ಒಲಿಂಪಿಕ್ಸ್. ಆದ್ದರಿಂದ ಇಲ್ಲಿ ಪದಕ ಗೆಲ್ಲಬೇಕು ಎನ್ನುವ ಗುರಿಯಿದೆ.
ಈ ಸಾಧನೆಗೆ ಸ್ಫೂರ್ತಿ ಯಾರು?
ಕಿವುಡು ಮತ್ತು ಕುರುಡುತನದದಿಂದ ಬಳಲುತ್ತಿದ್ದ ಪ್ಯಾರಾಬ್ಯಾಡ್ಮಿಂಟನ್ ಆಟಗಾರ ರಂಜನಿ ರಾಮಾನುಜಂ ಅವರೇ ಈ ಸಾಧನೆಗೆ ಪ್ರೇರಣೆ.
ಕುಟುಂಬದಿಂದ ಹೇಗೆ ಪ್ರೋತ್ಸಾಹ ಲಭಿಸುತ್ತಿದೆ?
ಬ್ಯಾಡ್ಮಿಂಟನ್ ಆಡುವುದನ್ನು ಮನೆಯಲ್ಲಿ ಮೊದಮೊದಲು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಜಯಿಸಿದಾಗ ಮನೆಯವರ ಬೆಂಬಲವೂ ಲಭಿಸಿತು. ಅಪ್ಪ ಬೋರೆಗೌಡ ಮತ್ತು ಪತ್ನಿ ಭಾಗ್ಯಲಕ್ಷ್ಮಿ ಅವರ ಬೆಂಬಲ ಇಲ್ಲದೇ ಹೋಗಿದ್ದರೆ ಇಷ್ಟೆಲ್ಲಾ ಸಾಧನೆ ಕೇವಲ ಕನಸಾಗಿರುತ್ತಿತ್ತು. ಆದರೆ, ಇದನ್ನೆಲ್ಲಾ ನೋಡಲು ಅಮ್ಮ ಇಲ್ಲವೆಂಬ ಬೇಸರ ಕಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.