ADVERTISEMENT

ಅಯೋಧ್ಯೆ ತೀರ್ಪು: ವಿವಾದಿತ ಭೂಮಿಯಲ್ಲಿ ರಾಮ ಮಂದಿರ; ಮಸೀದಿಗೆ ಪರ್ಯಾಯ ಜಮೀನು

ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ–ಬಾಬರಿ ಮಸೀದಿಗೆ ಸಂಬಂಧಿಸಿದ ಬಹುಕಾಲದ ಅನಿಶ್ಚಿತ ಸ್ಥಿತಿ ಕೊನೆಯಾಗಿದೆ. ಭಾರಿ ಕುತೂಹಲಕ್ಕೆ ಕಾರಣವಾಗಿರುವ ನಿವೇಶನ ವಿವಾದದ ತೀರ್ಪನ್ನು ಸುಪ್ರೀಂ ಕೋರ್ಟ್‌ ಶನಿವಾರ ಪ್ರಕಟಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಸಂವಿಧಾನ ಪೀಠವು ಪ್ರಕರಣದ ವಿಚಾರಣೆಯನ್ನು ಸತತ 40 ದಿನ ನಡೆಸಿ, ಅಕ್ಟೋಬರ್‌ 16ರಂದು ತೀರ್ಪು ಕಾಯ್ದಿರಿಸಿತ್ತು. ತೀರ್ಪಿನಲ್ಲೇನಿತ್ತು? ಶನಿವಾರದ ಬೆಳವಣಿಗೆಗಳೇನು ಎಂಬ ಮಾಹಿತಿ ಇಲ್ಲಿದೆ.

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 10:55 IST
Last Updated 9 ನವೆಂಬರ್ 2019, 10:55 IST

ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಒಪ್ಪಿಗೆ ಸೂಚಿಸಿರುವುದು ಸಂತಸ ತಂದಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ತೃಪ್ತಿಕರವಾಗಿಲ್ಲ ಎಂದು ಎಐಎಂಐಎಂ ವರಿಷ್ಠ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಅಯೋಧ್ಯೆ ವಿವಾದಿತ ಜಾಗ ಬಿಟ್ಟು ಬೇರೆ ಕಡೆ ನೀಡುವ ಜಮೀನು ನಮಗೆ ಬೇಕಾಗಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. 

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಅಯೋಧ್ಯೆ ತೀರ್ಪನ್ನು ದೇಶದ ಎಲ್ಲರೂ ಸ್ವಾಗತಿಸಬೇಕು ಎಂದು ಕಾಂಗ್ರೆಸ್‌ ಪ್ರಧಾನಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದ್ದಾರೆ.

ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಬೆಂಗಳೂರು ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

ರಾಮ ಜನ್ಮ ಭೂ ವಿವಾದದ ತೀರ್ಪನ್ನು ಎಲ್ಲರೂ ಗೌರವಿಸೋಣ. ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಈ ದೇಶದ ಸಿದ್ಧಾಂತವನ್ನು ಪಾಲಿಸೋಣ.  ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ ಎಂದು ಜೆಡಿಎಸ್‌ ವರಿಷ್ಠ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ. 

ಸುಪ್ರೀಂ ಕೋರ್ಟ್‌ ಹೊರ ಆವರಣದಲ್ಲಿನರೆದಿರುವ ಜನರು ಮತ್ತು ವಕೀಲರು

ಸುಪ್ರೀಂ ಕೋರ್ಟ್‌ ತೀರ್ಪನ್ನು ನಾವು ಸ್ವಾಗತಿಸುತ್ತೇವೆ, ಈ ತೀರ್ಪು ಯಾರಿಗೋ ಸಂದ ಜಯವಲ್ಲ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ ಎಂದು ಅಯೋಧ್ಯೆ ತೀರ್ಪಿನ ಬಗ್ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರತಿಕ್ರಿಯೆ ನೀಡಿದ್ದಾರೆ.

ಅಯೋಧ್ಯೆಯ ರಾಮ ಮಂದಿರ ಹಾಗೂ ಬಾಬರಿ ಮಸೀದಿ ಜಮೀನಿನ ಒಡೆತನದ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲ ಮುಸ್ಲಿಮರೂ ಗೌರವಿಸುತ್ತಾರೆ, ಮರುಪರಿಶೀಲನೆಗೆ ಅರ್ಜಿ ಹಾಕುವುದಿಲ್ಲ ಎಂದು ಈ ವ್ಯಾಜ್ಯದಲ್ಲಿ ಬಾಬರಿ ಮಸೀದಿ ಪರ ವಾದಿಗಳಾದ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

ಸುನ್ನಿ ವಕ್ಫ್‌ ಬೋರ್ಡ್‌ ಮಂಡಳಿ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪನ್ನು ನಾವು ಗೌರವಿಸುತ್ತೇವೆ, ಈ ತೀರ್ಪು ನಮಗೆ ತೃಪ್ತಿ ತಂದಿಲ್ಲ, ನಮ್ಮ ನಡೆಯನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಸುನ್ನಿ ವಕ್ಪ್‌ ಬೋರ್ಡ್‌ನ ವಕೀಲ ಝಾಫರ್‌ಆಯಾಬ್‌ ಜಿಲಾನಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಆವರಣದಲ್ಲಿ ಕೆಲವು ವಕೀಲರು ಜೈಶ್ರೀರಾಮ್‌ ಎಂದು ಕೂಗಿದರು

ಇದು ಐತಿಹಾಸಿಕ ತೀರ್ಪು ಎಂದು ಹಿಂದೂಮಹಾಸಭಾದ ವಕೀಲರು...

ಟ್ರಸ್ಟ್‌ ರಚಿಸಲು, ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮತ್ತು ಮಸೀದಿಗೆ ಪರ್ಯಾಯ ಭೂಮಿ ನೀಡಲು ಸರ್ಕಾರಕ್ಕೆ 3–4 ತಿಂಗಳ ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಸರ್ಕಾರ ವಿಶೇಷ ಅಧಿಕಾರ ಬಳಸಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಮೀನು ನೀಡಬೇಕು. ಹಾಗೂ ರಾಮಮಂದಿರಾ ಜಮೀನನ್ನು ಟ್ರಸ್ಟ್‌ಗೆ ನೀಡಬೇಕು. ಇದರ ಹೊಣೆ ಸರ್ಕಾರದ್ದು ಎಂದು ಐವರು ಸದಸ್ಯರ ನ್ಯಾಯಾಪೀಠ ಹೇಳಿದೆ. 

ಮಸೀದಿಗೆ ಪರ್ಯಾಯ ಜಮೀನು, ವಿವಾದಿತ ಭೂಮಿ ರಾಮಮಂದಿರಕ್ಕೆ

ರಾಮಜನ್ಮಭೂಮಿ: ಮೂರು ಭಾಗ ಮಾಡಿರೋದು ಸರಿ ಎಂದು ಯಾರು ಕೂಡ ಒಪ್ಪುತ್ತಿಲ್ಲ, ಅಲಹಬಾದ್‌ ಮೂರು ಭಾಗ ಮಾಡಿರುವುದು ತಾರ್ಕಿಕವಾಗಿಲ್ಲ ಎಂದು ನ್ಯಾಯಪೀಠ

ಮಂದಿರವನ್ನು ಧ್ವಂಸ ಮಾಡಿರುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಪುರಾತತ್ವ ಇಲಾಖೆಯ ಶೋಧನೆಯನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ

ಮಂದಿರವನ್ನು ಧ್ವಂಸ ಮಾಡಿರುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಪುರಾತತ್ವ ಇಲಾಖೆಯ ಶೋಧನೆಯನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ

ಬಾಬರಿ ಮಸೀದಿಯನ್ನು ಖಾಲಿ ಜಮೀನಿನಲ್ಲಿ ನಿರ್ಮಿಸಿದ್ದಲ್ಲ, ಅಲ್ಲಿ ದೊಡ್ಡ ಕಟ್ಟಡವಿತ್ತು, ಆ ಕಟ್ಟಡವು ಇಸ್ಲಾಮಿಕ್ ಮೂಲದ್ದಲ್ಲ ಅಂತ ಪುರಾತತ್ವ ಇಲಾಖೆ ಹೇಳಿದೆ. ಬಾಬರಿ ಕಟ್ಟಡದ ಅಡಿಯಲ್ಲಿ ಇಸ್ಲಾಮೇತರ ಕಟ್ಟಡದ ಅವಶೇಷವಿತ್ತು.

ಕಾನೂನಿನ ಸಾಕ್ಷ್ಯದ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತಿದೆ.

ರಾಮ ಅಯೋಧ್ಯೆಯಲ್ಲಿ ಹುಟ್ಟಿದ ಎಂಬುದಕ್ಕೆ ಯಾವುದೇ ವಿವಾದ ಇಲ್ಲ, ಹಾಗೇ ವಿವಾದಿತ ಜಾಗದಲ್ಲೇ ಹಿಂದೂಗಳು ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಮಸೀದಿಯ ಗುಂಬಜನ್ನು ರಾಮಜನ್ಮ ಭೂಮಿಯ ಸ್ಥಳ ಎಂದು ಜನರು ನಂಬುತ್ತಾರೆ. ಪುರಾಣಗಳಲ್ಲೂ ಸಹ ರಾಮಲಲ್ಲ ಬಗ್ಗೆ ಉಲ್ಲೇಖವಿದೆ. ಈ ಪ್ರದೇಶವನ್ನು ಹಿಂದೂಗಳ ಪರಿಕ್ರಮ ಮಾಡುತ್ತಿದ್ದರು

ಬಾಬರಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣವಾಗಿರಲಿಲ್ಲ, ಅಲಹಾಬಾದ್‌ ಹೈಕೋರ್ಟ್‌ ತೀರ್ಪನ್ನು ವಜಾ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ.

ಪುರಾತತ್ವ ಇಲಾಖೆಯ ಸಾಕ್ಷ್ಯಗಳನ್ನು ತೀರ್ಪಿನಲ್ಲಿ ಪರಿಶೀಲನೆ ಮಾಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ. 

ರಾಮಲಲ್ಲಾ ಮುಖ್ಯ ಅರ್ಜಿದಾರ ಎಂದು ಹೇಳಿದ ಸುಪ್ರೀಂ ಕೋರ್ಟ್‌ 

ಶಿಯಾ ವಕ್ಪ್‌ ಮಂಡಳಿ, ನಿರ್ಮೋಹಿ ಅಖಾಡದ ಅರ್ಜಿಯನ್ನು ಸಂವಿಧಾನ ಪೀಠ ವಜಾಮಾಡಿದೆ.

ಐವರು ನ್ಯಾಯಮೂರ್ತಿಗಳ ಸರ್ವಾನುಮತದ ತೀರ್ಪು ಎಂದು ರಂಜನ್‌ ಗೋಗಯ್‌ ಹೇಳಿದರು.

ಕೋರ್ಟ್‌ ಹಾಲ್‌ಗೆ ಆಗಮಿಸಿದ ನ್ಯಾಯಮೂರ್ತಿಗಳು ಎಲ್ಲರೂ ಮೌನವಾಗಿರುವಂತೆ ಸೂಚಿಸಿ, ಶಾಂತಿ ಕಪಾಡುವಂತೆ ಮನವಿ ಮಾಡಿದರು.

ತೀರ್ಪಿನ ಪ್ರತಿಗಳನ್ನು ಕೋರ್ಟ್‌ ಹಾಲ್‌ಗೆ ತಂದ ಸಿಬ್ಬಂದಿಗಳು. ನ್ಯಾಯಾಲಯದ ಮುಕ್ತ ಆವರಣದಲ್ಲಿ ಐವರು ನ್ಯಾಯಮೂರ್ತಿಗಳು ತೀರ್ಪು ಓದಲಿದ್ದಾರೆ.

ರಾಮ ಜನ್ಮಭೂಮಿ ತೀರ್ಪು ಹಿನ್ನೆಲೆಯಲ್ಲಿ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೊವೆಲ್‌ , ಗುಪ್ತಚರ ವಿಭಾಗದ ಮುಖ್ಯಸ್ಥ ಅರವಿಂದ್‌ ಕುಮಾರ್‌, ರಾ ಮುಖ್ಯಸ್ಥ ಸಮಂತ್‌ ಗೋಯಲ್ ಜತೆಯಲ್ಲಿ ಸಭೆ ನಡೆಸುತ್ತಿದ್ದಾರೆ.

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ದಾವಣಗೆರೆಯ ಕೆಟಿಜೆನಗರದ 8ನೇ ಕ್ರಾಸ್‌ನ ಸೂಕ್ಷ್ಮ ಪ್ರದೇಶವಾದ ಮಸೀದಿ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಪೊಲೀಸ್‌ ಮೀಸಲು ಪಡೆಯ ತುಕಡಿಯನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ.

 ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಕೋರ್ಟ್‌ಗೆ ಆಗಮಿಸಿದರು

ವಿವಾದಿತ ರಾಮ ಜನ್ಮಭೂಮಿ ತೀರ್ಪು ಹೊರಬರುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, 24 ಗಂಟೆಗಳ ಕಾಲ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಜೈಪುರ ಪೊಲೀಸ್‌ ಆಯುಕ್ತರು ಈ ಬಗ್ಗೆ ಸ್ಪಷ್ಟಣೆ ನೀಡಿದ್ದಾರೆ.

ರಾಮಜನ್ಮಭೂಮಿ-ಬಾಬರಿ ಮಸೀದಿಯ ತೀರ್ಪು ಹೊರ ಬೀಳಲಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಹಾಲ್‌ 1 ರಲ್ಲಿ ತೀರ್ಪು ಪ್ರಕಟವಾಗಲಿದೆ.

ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವ್ಯಾಜ್ಯದ ಸುಪ್ರೀಮ್ ಕೋರ್ಟ್ ತೀರ್ಪನ್ನು ಗೌರವಿಸೋಣ. ಪ್ರಜಾಪ್ರಭುತ್ವದ ಧರ್ಮವಾದ ಸಂವಿಧಾನದ ಮೇಲೆ ಭರವಸೆ ಇಡೋಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಅಯೋಧ್ಯೆ ತೀರ್ಪಿನ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಮೈಸೂರು: ಅಯೋಧ್ಯೆ ವಿವಾದದ ಅಂತಿಮ ತೀರ್ಪು ಶನಿವಾರ ಹೊರಬೀಳುವುದರಿಂದ ನಗರದೆಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಎಲ್ಲಾ ದೇವಸ್ಥಾನಗಳು, ಮಸೀದಿಗಳು, ಪ್ರಾರ್ಥನಾ ಮಂದಿರಗಳು ಸೇರಿದಂತೆ ಪೂಜಾ ಸ್ಥಳಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ಶತಮಾನದಷ್ಟು ಹಳೆಯದಾದ ಅಯೋಧ್ಯೆ ವಿವಾದ ಕುರಿತು, ಸುಪ್ರೀಮ್ ಕೋರ್ಟ್ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಲಿದೆ. ತೀರ್ಪು ಯಾರ ಪರವೇ ಬರಲಿ ಯಾರೂ ಭಾವೋದ್ವೇಗಕ್ಕೆ ಒಳಗಾಗಬಾರದು. ಕೋಮು ಸೌಹಾರ್ದ ಕದಡದೆ, ಶಾಂತಿ ಕಾಪಾಡಿಕೊಳ್ಳಬೇಕಾಗಿ ವಿನಂತಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.

ಅಯೋಧ್ಯೆಯ ವಿವಾದಿತ ರಾಮಮಂದಿರದ ಸುತ್ತ ಮುತ್ತ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಬೆಳಗ್ಗೆ 10.30ರ ಸುಮಾರಿಗೆ ತೀರ್ಪು ಪ್ರಕಟವಾಗುವ ಸಾಧ್ಯತೆಗಳಿವೆ.

ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದ್ದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಸಂವಿಧಾನ ಪೀಠ ತೀರ್ಪು ಪ್ರಕಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.