ADVERTISEMENT

ಮಹಾರಾಷ್ಟ್ರದಲ್ಲಿ ಮಹಾ ರಾಜಕಾರಣ | 8 ಗಂಟೆಗೆ ಅಧಿವೇಶನ ಆರಂಭ

ಕೆಲವು ದಿನಗಳಿಂದ ಭಾರಿ ಕುತೂಹಲ ಕೆರಳಿಸುತ್ತಲೇ ಸಾಗಿದ್ದ ಮಹಾರಾಷ್ಟ್ರದ ಸರ್ಕಾರ ರಚನೆ ರಾಜಕಾರಣದ ಮೊದಲ ಹಂತವು ಮುಗಿದು, ಎರಡನೇ ಹಂತ ಆರಂಭವಾಗಿದೆ. ಮುಂಜಾನೆ 8 ಗಂಟೆಗೆ ವಿಧಾನಭವನದಲ್ಲಿ ವಿಶೇಷ ಅಧಿವೇಶನ ಆರಂಭವಾಗಲಿದೆ. ಹಂಗಾಮಿ ಸ್ಪೀಕರ್ ಆಯ್ಕೆ ಮತ್ತು ಶಾಸಕರ ಪ್ರಮಾಣ ವಚನ ಪ್ರಕ್ರಿಯೆಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ.

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 2:31 IST
Last Updated 27 ನವೆಂಬರ್ 2019, 2:31 IST

ಮುಂದೆಯೂ ಎನ್‌ಸಿಪಿಯಲ್ಲಿಯೇ ಇರುವೆ: ಅಜಿತ್ ಪವಾರ್

ಖಾಸಗಿ ಹೊಟೆಲ್‌ನಲ್ಲಿ ತಂಗಿದ್ದ ಎನ್‌ಸಿಪಿ ಶಾಸಕರು ವಿಧಾನ ಭವನದತ್ತ ಹೊರಟಿದ್ದಾರೆ. ನಾನು ಈ ಹಿಂದೆಯೂ ಎನ್‌ಸಿಪಿಯಲ್ಲಿದ್ದೆ, ಈಗಲೂ ಎನ್‌ಸಿಪಿಯಲ್ಲಿದ್ದೇನೆ, ಮುಂದೆಯೂ ಎನ್‌ಸಿಪಿಯಲ್ಲಿಯೇ ಇರುತ್ತೇನೆ ಎಂದು ಅಜಿತ್‌ ಪವಾರ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಮಹಾರಾಷ್ಟ್ರದಲ್ಲಿ ನಾಳೆ ಹೊಸ ಸರ್ಕಾರ ರಚನೆ ಸಾಧ್ಯತೆ: ಕಾಂಗ್ರೆಸ್-ಎನ್‌ಸಿಪಿ-ಶಿವಸೇನಾ ಸಾಮಾನ್ಯ ಕನಿಷ್ಠ ಅಂಶಗಳ ಕಾರ್ಯಸೂಚಿಗೆ ಸೋನಿಯಾ ಗಾಂಧಿ ಒಪ್ಪಿಗೆ

ಕಾಳಿದಾಸ ಕೊಳಂಬ್ಕರ್ ಮಹಾರಾಷ್ಟ್ರ 14ನೇ ವಿಧಾನಸಭೆಯ ಪ್ರೋ-ಟೆಮ್ ಸ್ಪೀಕರ್ ಆಗಿ ನೇಮಕ

ಐದು ವರ್ಷವೂ ಉದ್ಧವ್ ಒಬ್ಬರೇ ಮುಖ್ಯಮಂತ್ರಿ, ರೊಟೇಶನ್ ಇಲ್ಲ: ಶಿವಸೇನಾ

ಸಂಜೆ ನಡೆಯುವ ಕಾಂಗ್ರೆಸ್-ಎನ್‌ಸಿಪಿ-ಶಿವಸೇನಾ ಮೈತ್ರಿ ಶಾಸಕರ ಸಭೆಗೆ ಅಜಿತ್ ಪವಾರ್ (ಈಗಷ್ಟೇ ರಾಜೀನಾಮೆ ನೀಡಿದ ಉಪಮುಖ್ಯಮಂತ್ರಿ, ಎನ್‌ಸಿಪಿ ಮುಖಂಡ) ಕರೆತರಲು ಪ್ರಯತ್ನ ನಡೆಯುತ್ತಿದೆ.

ತಮಗೆ ಮುಖ್ಯಮಂತ್ರಿ ಪಟ್ಟ ಕೊಡುವ ಯಾರ ಜತೆಗಾದರೂ ಕೈಜೋಡಿಸಲು ಸಿದ್ಧ ಎಂದು ಚುನಾವಣಾ ಫಲಿತಾಂಶ ಬರುವ ಮುಂಚೆಯೇ ಶಿವಸೇನೆ ನಮ್ಮಲ್ಲಿ ಹೇಳಿತ್ತು: ದೇವೇಂದ್ರ ಫಡಣವೀಸ್

ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿ ಪದಗ್ರಹಣ ಮಾಡಲು ಕಾರಣವಾದ ಎಲ್ಲ ನಿರ್ಧಾರಗಳನ್ನೂ ಸುಪ್ರೀಂ ಕೋರ್ಟ್ ಗಮನಿಸಬೇಕು. ಈ ವಿದ್ಯಮಾನವು ದೇಶದ ರಾಷ್ಟ್ರಪತಿಯ ಪಾತ್ರವನ್ನೂ ಸಂದೇಹಾಸ್ಪದವಾಗುವಂತೆ ಮಾಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಮೂರು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡಣವೀಸ್ ಅವರು ಮಂಗಳವಾರ ಸಂಜೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಮುಂಬಯಿ ರಾಜಭವನದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದರು. ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ರಾಜಭವನದತ್ತ ಹೊರಟ ದೇವೇಂದ್ರ ಫಡಣವೀಸ್

ಇದು ಸಾಂವಿಧಾನಿಕ ಪ್ರಜಾಪ್ರಭುತ್ವದ ವಿಜಯ. ಕುದುರೆ ವ್ಯಾಪಾರ ಮೂಲಕ ಸರ್ಕಾರ ರಚಿಸಬಹುದೆಂದು ಅವರು ಯೋಚಿಸಿದ್ದರು. ಇದು ದೇವೇಂದ್ರ ಫಡಣವೀಸ್ ಅವರ ವೈಫಲ್ಯವಷ್ಟೇ ಅಲ್ಲ, ದೆಹಲಿಯಲ್ಲಿ ಕುಳಿತಿರುವ ಅವರ ನಾಯಕರ ಮುಖಕ್ಕೆ ಬಿದ್ದ ಹೊಡೆತ ಎಂದು ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯಿಸಿದ್ದಾರೆ.

ಸುಳ್ಳಿನಿಂದಲೇ ರೂಪುಗೊಂಡ ಸರ್ಕಾರ ಈಗ ಇಸ್ಪೀಟೆಲೆಯಂತೆ ಬಿದ್ದು ಹೋಗಿದೆ. ಜನಾದೇಶವನ್ನು ಕಿಡ್ನ್ಯಾಪ್ ಮಾಡಿದವರಿಗೆ ಬಹುಮತದ ಕೊರತೆ ಇದೆಯೆಂಬುದು ಈಗ ಬಯಲಾಗಿದೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲ ಪ್ರತಿಕ್ರಿಯಿಸಿದ್ದಾರೆ.

ಉದ್ಧವ್ ಸಿಎಂ, ತೋರಟ್, ಜಯಂತ್ ಪಾಟೀಲ್ ಇಬ್ಬರು ಡೆಪ್ಯುಟಿ ಸಿಎಂಗಳು: ಶಿವಸೇನಾ

ಶಿವಸೇನಾ ವಿರುದ್ಧ ವಾಗ್ದಾಳಿ ನಡೆಸಿದ ಫಡಣವೀಸ್

ರಾಜೀನಾಮೆ ಸಲ್ಲಿಸುತ್ತೇನೆ: ದೇವೇಂದ್ರ ಫಡಣವೀಸ್

ಉದ್ಧವ್ ಹೊಸ ಮುಖ್ಯಮಂತ್ರಿ, 5 ವರ್ಷವೂ ಅವರೇ: ರಾವುತ್

ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದು, 5 ವರ್ಷಗಳ ಕಾಲವೂ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ. ಕಾಂಗ್ರೆಸ್-ಎನ್‌ಸಿಪಿ-ಶಿವಸೇನಾ ಮಹಾ ಅಘಾಡಿಯಲ್ಲಿ ಮುಖ್ಯಮಂತ್ರಿ ಪದವಿಗೆ ಯಾವುದೇ ರೊಟೇಶನ್ ಇಲ್ಲ ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಘೋಷಿಸಿದರು.

ಈಗ ಶಿವಸೇನಾ ನಮ್ಮೊಡನೆ ಇಲ್ಲ: ಫಡಣವೀಸ್

ಮಹಾರಾಷ್ಟ್ರದಲ್ಲಿ ನಮ್ಮ ಮಿತ್ರಪಕ್ಷದೊಂದಿಗೆ ಸರ್ಕಾರ ರಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆವು. ಅದು ಸಾಧ್ಯವಾಗದಿದ್ದಾಗ ಮಹಾರಾಷ್ಟ್ರಕ್ಕೆ ಒಂದು ಸರ್ಕಾರ ರಚಿಸುವ ಪ್ರಯತ್ನವನ್ನು ನಾವು ಮಾಡಿದೆವು.

ಶಿವಸೇನಾದೊಂದಿಗೆ ಮಾತುಕತೆಗೆ ಅಥವಾ ಅಧಿಕಾರ ಹಂಚಿಕೆಗೆ ನಾವು ಬಾಗಿಲು ಬಂದ್ ಮಾಡಲಿಲ್ಲ. ಅವರೇ ಬಾಗಿಲು ಹಾಕಿಕೊಂಡಿದ್ದರು. ಈಗ ಅವರು ಕಾಂಗ್ರೆಸ್, ಎನ್‌ಸಿಪಿ ಜೊತೆಗೆ ಇದ್ದಾರೆ. ನಮ್ಮ ಜೊತೆಗೆ ಇಲ್ಲ. –ಪಡಣವೀಸ್

ಜನರ ಆಶೋತ್ತರಗಳಿಗೆ ಸ್ಪಂದನೆ: ಫಡಣವೀಸ್

ಜನರ ಆಶೋತ್ತರಗಳು ಮತ್ತು ನಿರೀಕ್ಷೆಗಳನ್ನು ಹೊತ್ತು ನಾವು ಮುಂದೆ ಸಾಗುತ್ತೇವೆ. ಎಂದಿಗೂ ಅದರಿಂದ ಹಿಂದೆ ಸರಿಯುವುದಿಲ್ಲ. –ಫಡಣವೀಸ್

ಜನರ ಪ್ರೀತಿಗೆ ಪುಳಕಿತನಾಗಿದ್ದೇನೆ: ಫಡನವೀಸ್‌

ಕಳೆದ ಐದು ವರ್ಷಗಳಿಂದ ಮಹಾರಾಷ್ಟ್ರದ ಜನತೆ ನಮ್ಮ ಮೇಲೆ ಹರಿಸಿರುವ ಪ್ರೀತಿಯ ಧಾರೆಯಿಂದ ನಾನು ಪುಳಕಿತನಾಗಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಜನರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಪೂರ್ಣ ಪರಿಶ್ರಮದೊಂದಿಗೆ ಅನುಷ್ಠಾನಕ್ಕೆ ತಂದೆವು. ಈ ಎಲ್ಲ ಹಂತಗಳಲ್ಲಿ ನನಗೆ ಮಹಾರಾಷ್ಟ್ರದ ಜನತೆ ಬೆಂಬಲ ಕೊಟ್ಟರು. ಅವರಿಗೆ ನಾನು ಅಭಾರಿ.

ಮಹಾರಾಷ್ಟ್ರದ ಇತಿಹಾಸದಲ್ಲಿಯೇ ಅತಿ ಹೆಚ್ಚು ಪ್ರಮಾಣದ ಕೇಂದ್ರ ಸರ್ಕಾರದ ಯೋಜನೆ ಮತ್ತು ಅನುದಾನ ಕಳೆದ ಐದು ವರ್ಷಗಳಲ್ಲಿ ಹರಿದುಬಂತು. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. –ಫಡಣವೀಸ್

ಏನಾಯ್ತು ಶಿವಸೇನಾದ ಹಿಂದುತ್ವ ಬದ್ಧತೆ: ಫಡಣವೀಸ್ ಪ್ರಶ್ನೆ

ಶಿವಸೇನೆ ತನ್ನನ್ನು ತಾನು ಹಿಂದುತ್ವಕ್ಕೆ ಬದ್ಧ ಎಂದು ಹೇಳಿಕೊಳ್ಳುತ್ತೆ. ಆದರೆ ಈಗ ಅದರ ಸಿದ್ಧಾಂತ ಸೋನಿಯಾ ಪದತಲಕ್ಕೆ ಸಮರ್ಪಣೆಯಾಗಿದೆ.

ನಾಳೆ ವಿಶ್ವಾಸಮತ ಯಾಚನೆ ನಡೆಯಲಿದೆ. ನಮ್ಮ ಬಳಿ ಅಷ್ಟು ಸದಸ್ಯ ಬಲ ಇಲ್ಲ ಎಂದು ಅಜಿತ್ ಪವಾರ್‌ ನನ್ನನ್ನು ಭೇಟಿಯಾಗಿ ಹೇಳಿದರು. ಹೀಗಾಗಿ ನಾನು ರಾಜೀನಾಮೆ ಕೊಡಲು ನಿರ್ಧರಿಸಿದೆ.

ಕುದುರೆ ವ್ಯಾಪಾರವನ್ನು ನಾವು ಒಪ್ಪುವುದೂ ಇಲ್ಲ, ಬೆಂಬಲಿಸುವುದೂ ಇಲ್ಲ. ಹೀಗಾಗಿ ರಾಜೀನಾಮೆ ಕೊಡ್ತೀನಿ. –ಫಡಣವೀಸ್.

ಶಿವಸೇನಾಗೆ ಸಿಎಂ ಸ್ಥಾನದ ಭರವಸೆ ಕೊಟ್ಟಿರಲಿಲ್ಲ

ಶಿವಸೇನಾಗೆ ಮುಖ್ಯಮಂತ್ರಿ ಸ್ಥಾನ ಕೊಡ್ತೀವಿ ಅಂತ ನಾವೆಂದೂ ಮಾತು ಕೊಟ್ಟಿರಲಿಲ್ಲ. ಆದರೆ ಫಲಿತಾಂಶ ಪ್ರಕಟವಾದ ದಿನದಿಂದ ಶಿವಸೇನಾ ಇದೇ ಮಾತು ಆಡುತ್ತಾ ಬಂತು. ಶಿವಸೇನಾ ನಾಯಕರ ‘ಮಾತೋಶ್ರೀ’ ಬಾಗಿಲು ಬಿಜೆಪಿಗೆ ಎಂದೂ ತೆರೆಯಲಿಲ್ಲ. ನಮ್ಮೊಡನೆ ಅವರು ಸರಿಯಾಗಿ ಮಾತನ್ನೂ ಆಡಲಿಲ್ಲ. ಆದರೆ ಕಾಂಗ್ರೆಸ್ ಮತ್ತು ಎನ್‌ಸಿಪಿ ನಾಯಕರ ಜೊತೆಗೆ ತಾವಾಗಿಯೇ ಹೊರಗೆ ಹೋಗಿ ಮಾತನಾಡಿದರು. –ಫಡಣವೀಸ್

ಶಿವಸೇನಾ ಅವಕಾಶವಾದಿ ರಾಜಕಾರಣ

ಬಿಜೆಪಿ–ಶಿವಸೇನಾ ಮೈತ್ರಿಯ ‘ಮಹಾಯುತಿ’ಗೆ ಮಹಾರಾಷ್ಟ್ರದ ಜನರು ಬಹುಮತ ಕೊಟ್ಟಿದ್ದರು. ನಮ್ಮ ಹಿಂದಿನ ಆಡಳಿತ ಮೆಚ್ಚಿ ಜನರು ನಮಗೆ ಜನಾದೇಶ ಕೊಟ್ಟಿದ್ದರು. ಅದಕ್ಕಾಗಿ ಅವರಿಗೆ ನಾವು ಅಭಾರಿಗಳು. ಬಿಜೆಪಿ ಸ್ಪರ್ಧಿಸಿದ್ದ ಶೇ 70 ಸ್ಥಾನಗಳಲ್ಲಿ ಜಯಗಳಿಸಿದೆ. ಆದರೆ ದುರ್ದೈವದಿಂದ ನಂಬರ್‌ ಗೇಂನಲ್ಲಿ ನಮಗೆ ಅಧಿಕಾರ ತಪ್ಪಿತು. ಮುಖ್ಯಮಂತ್ರಿ ಸ್ಥಾನಕ್ಕೆ ಆಸೆಪಟ್ಟು ಶಿವಸೇನಾ ಬೇರೆ ಪಕ್ಷದೊಂದಿಗೆ ಈಗ ಮೈತ್ರಿ ಮಾಡಿಕೊಂಡಿದೆ. –ಫಡಣವೀಸ್

ನನಗೆ ತೃಪ್ತಿ ಇದೆ: ಫಡಣವೀಸ್

ಕಳೆದ ಐದು ವರ್ಷಗಳಲ್ಲಿ ನನ್ನ ಆಡಳಿತ ನನಗೆ ತೃಪ್ತಿ ಕೊಟ್ಟಿದೆ. ರೈತರು, ಗ್ರಾಮೀಣಾಭಿವೃದ್ಧಿ, ನೀರಾವರಿ, ಮುಂಬೈ ಮಹಾನಗರ ಅಭಿವೃದ್ಧಿಯ ವಿಚಾರದಲ್ಲಿ ನಾನು ಮಾಡಿದ ಕೆಲಸ ನನಗೆ ತೃಪ್ತಿ ಕೊಟ್ಟಿದೆ. ನನಗೆ ಅವಕಾಶ ಕೊಟ್ಟಿದ್ದಕ್ಕೆ ಮಹಾರಾಷ್ಟ್ರದ ಜನರಿಗೆ ನಾನು ಅಭಾರಿಯಾಗಿದ್ದೇನೆ. –ಫಡಣವೀಸ್

ಕುದುರೆ ವ್ಯಾಪಾರದಲ್ಲಿ ನನಗೆ ನಂಬಿಕೆಯಿಲ್ಲ: ಫಡಣವೀಸ್

ನಾವೆಂದೂ ಕುದುರೆ ವ್ಯಾಪಾರವನ್ನು ಉತ್ತೇಜಿಸಿಲ್ಲ, ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ನಾನು ಅಧಿಕಾರದಿಂದ ಪಕ್ಕಕ್ಕೆ ಸರಿಯುತ್ತಿದ್ದೇನೆ. ನಾವು ಸರ್ಕಾರ ರಚಿಸುವುದಿಲ್ಲ. ಬೇರೆ ಯಾರು ಬೇಕಾದರೂ ಸರ್ಕಾರ ರಚಿಸಲಿ. ನಾನು ಶುಭ ಕೋರುತ್ತೇನೆ.  ಅವರಿಗೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಷ್ಟೇ ಮುಖ್ಯ. ಆದರೆ ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತೀವಿ. –ಫಡಣವೀಸ್.

ನಾನು ರಾಜೀನಾಮೆ ಕೊಡ್ತೀನಿ

ಅಜಿತ್ ಪವಾರ್ ರಾಜೀನಾಮೆ ಕೊಟ್ಟ ನಂತರ ನಮಗೆ ಬೇರೆ ಮಾರ್ಗವಿಲ್ಲ. ಹೀಗಾಗಿ ನಾನೂ ರಾಜೀನಾಮೆ ಕೊಡುತ್ತಿದ್ದೇನೆ. ಈಗಲೇ ರಾಜ್ಯಪಾಲರ ಬಳಿಗೆ ಹೋಗಿ ರಾಜೀನಾಮೆ ಕೊಡ್ತೀನಿ.

ಇದು ಉಳಿಯುವ ಮೈತ್ರಿ ಅಲ್ಲ

ರಾಜ್ಯಪಾಲರು ಮೊದಲು ನಮಗೆ ಸರ್ಕಾರ ರಚಿಸಲು ಆಹ್ವಾನಿಸಿದರು. ನಂತರ ಶಿವಸೇನಾ, ಎನ್‌ಸಿಪಿಗೆ ಆಹ್ವಾನ ಕೊಟ್ಟರು. ವಿಫಲವಾದ ನಂತರ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದರು. 

ಆ ಮೂರೂ ಪಕ್ಷಗಳು ಪ್ರತ್ಯೇಕ ಸಿದ್ಧಾಂತ ಹೊಂದಿವೆ. ಈಗ ಅವರು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಹೆಸರಿನಲ್ಲಿ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. 

ಇದು ಕನಿಷ್ಠ ಕಾರ್ಯಕ್ರಮವೂ ಅಲ್ಲ, ಗರಿಷ್ಠ ಕಾರ್ಯಕ್ರಮವೂ ಅಲ್ಲ. ಈ ಮೂರು ಪಕ್ಷಗಳು ಒಟ್ಟಿಗೆ ಇರಲು ಸಾಧ್ಯವೂ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಷ್ಟೇ ಅವರ ಉದ್ದೇಶ.

ನಮ್ಮ ಜೊತೆಗೆ ಮಾತನಾಡಲಿಲ್ಲ

ನಾವು ಶಿವಸೇನಾಗೆ ಎಂದಿಗೂ ಮುಖ್ಯಮಂತ್ರಿ ಸ್ಥಾನದ ಭರವಸೆ ಕೊಟ್ಟಿರಲಿಲ್ಲ. ನಾವು ಅತಿದೊಡ್ಡ ಪಕ್ಷವಾಗಿದ್ದೆವು. ನಾವು ಶಿವಸೇನಾ ಜೊತೆಗೆ ಮಾತನಾಡಲು ಯತ್ನಿಸಿದೆವು. ಆದರೆ ಅವರು ನಮ್ಮ ಜೊತೆಗೆ ಮಾತನಾಡುತ್ತಿರಲಿಲ್ಲ. ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಮಾತನಾಡುತ್ತಿದ್ದರು.

ಬಿಜೆಪಿ–ಶಿವಸೇನಾ ಮೈತ್ರಿಗೆ ಜನಾದೇಶ ಸಿಕ್ಕಿತ್ತು

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾಕ್ಕೆ ಮಹಾರಾಷ್ಟ್ರದ ಜನತೆ ಬಹುಮತ ಕೊಟ್ಟಿದ್ದರು. ಜನರ ಆದೇಶದಂತೆ ಸರ್ಕಾರ ರಚಿಸಲು ನಾವು ಪ್ರಯತ್ನಿಸಿದೆವು. ನಾವು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ನಮ್ಮ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು. ಶಿವಸೇನಾ ಅಧಿಕಾರಕ್ಕಾಗಿ ಚೌಕಾಸಿ ಆರಂಭಿಸಿತು.

ಫಡಣವೀಸ್ ಸುದ್ದಿಗೋಷ್ಠಿ ಆರಂಭ

ಫಡಣವೀಸ್ ಸುದ್ದಿಗೋಷ್ಠಿ ಆರಂಭ

ಸುದ್ದಿಗೋಷ್ಠಿಗೆ ಕ್ಷಣಗಣನೆ

ಕಿಕ್ಕಿರಿದು ತುಂಬಿದ ಮಾಧ್ಯಮ ಪ್ರತಿನಿಧಿಗಳು. ಪ್ರಮುಖ ಬಿಜೆಪಿ ನಾಯಕರ ಉಪಸ್ಥಿತಿ. ದೇವೇಂದ್ರ ಫಡಣವೀಸ್ ಆಗಮನಕ್ಕೆ ಕ್ಷಣಗಣನೆ.

3.30ಕ್ಕೆ ಮುಖ್ಯಮಂತ್ರಿ ಫಡಣವೀಸ್ ಪತ್ರಿಕಾಗೋಷ್ಠಿ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮಧ್ಯಾಹ್ನ 3.30ಕ್ಕೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ನಾಳೆಯೇ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದ ನಂತರ ಫಡಣವೀಸ್‌ ಬಿಜೆಪಿಯ ಹಿರಿಯ ನಾಯಕರು ಮತ್ತು ಅಜಿತ್ ಪವಾರ್ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಉದ್ಧವ್ ಠಾಕ್ರೆಯೇ 5 ವರ್ಷ ಮುಖ್ಯಮಂತ್ರಿ: ಸಂಜಯ್ ರಾವುತ್

ಎನ್‌ಸಿಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮುಂದಿನ 5 ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ. ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

ರಾಜಭವನ, ವಿಧಾನಭವನ ಮತ್ತು ಸಚಿವಾಲಯಗಳ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಅಜಿತ್ ಪವಾರ್ ರಾಜೀನಾಮೆ

ಈವರೆಗೆ ಏನೆಲ್ಲಾ ಆಯ್ತು?

ಗೌಪ್ಯ ಮತದಾನಕ್ಕೆ ಅವಕಾಶವಿಲ್ಲ

ಸುಪ್ರೀಂ ಕೋರ್ಟ್ ಹೇಳಿದ್ದೇನು?

ಸಂಜೆ 5ರ ನಂತರ ವಿಶ್ವಾಸಮತ

ಸಂಜೆ 5ರವರೆಗೆ ಹಂಗಾಮಿ ಸ್ಪೀಕರ್‌ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿ. ನಂತರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ವಿಶ್ವಾಸಮತ ಯಾಚನೆ ಪ್ರಕ್ರಿಯೆ ನೇರ ಪ್ರಸಾರವಾಗಲಿ

ನಾಳೆ (ನ.27) ಸಂಜೆ 5 ಗಂಟೆಯ ಒಳಗೆ ವಿಶ್ವಾಸಮತ ಯಾಚಿಸಬೇಕು. ಬಹುಮತ ಯಾಚನೆ ಪ್ರಕ್ರಿಯೆ ಸಂಪೂರ್ಣವಾಗಿ ವಿಡಿಯೊ ಚಿತ್ರಣವಾಗಬೇಕು, ನೇರ ಪ್ರಸಾರವಾಗಬೇಕು. ಗುಪ್ತ ಮತದಾನವಾಗಬಾರದು ಎಂದು ನ್ಯಾಯಪೀಠ ಸೂಚನೆ.

ಹಿಂದಿನ ತೀರ್ಪು ಉಲ್ಲೇಖ

ಬಿಹಾರ ಮತ್ತು ಉತ್ತರಾಖಂಡ ತೀರ್ಪು ಉಲ್ಲೇಖಿಸಿದ ನ್ಯಾಯಮೂರ್ತಿ.

ತೀರ್ಪು ಓದುತ್ತಿರುವ ನ್ಯಾಯಮೂರ್ತಿ ರಮಣ

ಮಹಾರಾಷ್ಟ್ರ ಸರ್ಕಾರ ರಚನೆ ಸಂಬಂಧ ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿ ಎನ್‌.ವಿ. ರಮಣ. ‘ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು’ ಎಂಬುದು ತೀರ್ಪಿನ ಮೊದಲ ವಾಕ್ಯ.

ಘಟಾನುಘಟಿ ವಕೀಲರು

ಮಹಾರಾಷ್ಟ್ರ ರಾಜ್ಯಪಾಲರ ಕಾರ್ಯದರ್ಶಿ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೇವೇಂದ್ರ ಫಡಣವೀಸ್ ಪರವಾಗಿ ವಕೀಲ ಮುಕುಲ್ ರೋಹಟಗಿ, ಅಜಿತ್ ಪವಾರ್ ಪರವಾಗಿ ವಕೀಲ ಮಣಿಂದರ್ ಸಿಂಗ್, ಕಾಂಗ್ರೆಸ್ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.

ನ್ಯಾಯಾಧೀಶರು

ನ್ಯಾಯಮೂರ್ತಿಗಳಾದ ಎನ್‌.ವಿ.ರಮಣ, ಅಶೋಕ್ ಭೂಷಣ್ ಮತ್ತು ಸಜೀವ್ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠವು ಮಹಾರಾಷ್ಟ್ರ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನಾ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿತು.

ಅಜಿತ್ ಪವಾರ್ ವಿರುದ್ಧ ಪ್ರಕರಣ ರದ್ದು: ಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧಾರ

ನೀರಾವರಿ ಇಲಾಖೆಯ 9 ಹಗರಣಗಳಲ್ಲಿ ಅಜಿತ್ ಪವಾರ್ ಅವರ ಹೆಸರು ಕೈಬಿಟ್ಟ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ನಿರ್ಧರಿಸಿವೆ.

ಈ ಎಲ್ಲ 9 ಹಗರಣಗಳಲ್ಲಿ ಒಟ್ಟು ₹ 70 ಸಾವಿರ ಅಕ್ರಮ ಎಸಗಿದ ಆರೋಪ ಅಜಿತ್ ಪವಾರ್ ಅವರ ಮೇಲಿತ್ತು.

ತನಿಖೆ ಪೂರ್ಣಗೊಂಡಿರುವ 9 ಪ್ರಕರಣಗಳಿಗೂ ಅಜಿತ್ ಪವಾರ್‌ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಭ್ರಷ್ಟಾಚಾರ ತಡೆ ಘಟಕ (ಎಸಿಬಿ) ಸ್ಪಷ್ಟಪಡಿಸಿತ್ತು.

ದೇವೇಂದ್ರ ಫಡಣವೀಸ್‌ ನೇತೃತ್ವದ ಸರ್ಕಾರ ಇನ್ನೂ ಬಹುಮತ ಸಾಬೀತುಪಡಿಸಿಲ್ಲ. ಹೀಗಾಗಿ ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ಮೂರೂ ವಿರೋಧ ಪಕ್ಷಗಳು ಆಕ್ಷೇಪಿಸಿವೆ.

ಎಸಿಬಿ ಕ್ರಮಕ್ಕೆ ತಡೆ ಕೋರುವುದರ ಜೊತೆಗೆ ಫಡಣವೀಸ್ ನೇತೃತ್ವದ ಸರ್ಕಾರಕ್ಕೆ ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳದಂತೆ ನಿರ್ಬಂಧ ವಿಧಿಸಬೇಕು ಎಂದು ವಿರೋಧಪಕ್ಷಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ವಿನಂತಿಸಿವೆ.

ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕ ಯಾರು?

ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಜಯಂತ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವ ಪತ್ರವನ್ನು ವಿಧಾನಸಭೆ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಸ್ವೀಕರಿಸಿದ್ದಾರೆ. ಆದರೆ ಸೂಕ್ತ ನಿರ್ಧಾರವನ್ನು ಸ್ಪೀಕರ್ ತೆಗೆದುಕೊಳ್ಳಬೇಕಿದೆ. ಈವರೆಗೆ ಈ ವಿಚಾರ ಅಂತಿಮಗೊಂಡಿಲ್ಲ ಎಂದು ಭಾಗವತ್ ಹೇಳಿದ್ದಾರೆ.

ರಾಜ್ಯಪಾಲರಿಗೆ ಕಾಂಗ್ರೆಸ್‌, ಎನ್‌ಸಿಪಿ, ಶಿವಸೇನಾ ಪತ್ರ

ಸರ್ಕಾರ ರಚನೆಗೆ ಹಕ್ಕು ಮಂಡಿಸಿ ಮಹಾರಾಷ್ಟ್ರ ರಾಜ್ಯಪಾಲರ ಕಚೇರಿಗೆ ಪತ್ರ ಕೊಟ್ಟ ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿ.

ಶಿವಸೇನಾ ವಕ್ತಾರ ಸಂಜಯ್‌ ರಾವುತ್‌ ಕುತೂಹಲಕಾರಿ ಟ್ವೀಟ್‌

ಸುಪ್ರೀಂ ಕೋರ್ಟ್‌ನಲ್ಲಿ ಇಂದು ಮಹಾ ತೀರ್ಪು

ಸೋನಿಯಾ ಗಾಂಧಿ ಭೇಟಿಯಾದ ಮಹಾರಾಷ್ಟ್ರದ ಮೂರು ಪಕ್ಷಗಳ ಪ್ರಮುಖ ನಾಯಕರು

ಸೇನಾ, ಎನ್‌ಸಿಪಿ, ಕಾಂಗ್ರೆಸ್‌ ಮೈತ್ರಿಕೂಟ ಬೆಂಬಲಿಸಿದ ಅಖಿಲೇಶ್‌ ಯಾದವ್‌ ಸಮಾಜವಾದಿ ಪಕ್ಷ

ಇದು ಶಾಸಕರಿಗೆ ಆದ ಅಪಮಾನ

ನಾವು ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂದು ಪ್ರಮಾಣ ಮಾಡಿದ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್‌ ಶಾಸಕರು

ಮೀಮ್ ಲೋಕದಲ್ಲಿ ಮಹಾರಾಷ್ಟ್ರ ಪ್ರಹಸನ

ಪಂಚ ತಾರಾ ಬಲ ಪ್ರದರ್ಶನ

ಮಂಗಳವಾರ ಆದೇಶ

ನ.26ರ (ಮಂಗಳವಾರ) ಬೆಳಿಗ್ಗೆ 10.30ಕ್ಕೆ ಆದೇಶ ಹೊರಡಿಸುವಾಗಿ ನ್ಯಾಯಪೀಠ ಹೇಳಿದೆ.

ಕಾಲಾವಕಾಶ ಕೋರಿದ ಮೆಹ್ತಾ

ಇನ್ನಷ್ಟು ಸಮಯಾವಕಾಶ ಬೇಕು ಎಂದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ. ‘ನನ್ನ ಬಳಿ ಇನ್ನಷ್ಟು ದಾಖಲೆಗಳಿವೆ. ಅವೆಲ್ಲವನ್ನೂ ಮಂಡಿಸಲು ಸಮಯ ಬೇಕು’ ಎಂದು ವಿನಂತಿಸಿದ ಮೆಹ್ತಾ.

ಎಂಥ ಸ್ಪೀಕರ್ ಬೇಕು? ಸಿಬಲ್, ಸಿಂಘ್ವಿ, ರೋಹಟಗಿ ಜಿದ್ದಾಜಿದ್ದಿ ವಾದ

ಕಪಿಲ್ ಸಿಬಲ್: ಸ್ಪೀಕರ್‌ಗೆ ಸದನದಲ್ಲಿರುವ ಎಲ್ಲರ ವಿಶ್ವಾಸ ಸಿಗಬೇಕು ಎನ್ನುವ ಕಾರಣಕ್ಕೇ ತಮ್ಮ ವಿವೇಚನಾಧಿಕಾರವಾದ ‘ಎ 142’ರ ಅನ್ವಯ ಆದೇಶ ಹೊರಡಿಸಬೇಕು ಎಂದು ಕೋರುವೆ.

ಸಿಂಘ್ವಿ: ರೆಗ್ಯುಲರ್‌ ಸ್ಪೀಕರ್ ಬೇಕೆಂದು ರೋಹಟಗಿ ಏಕೆ ಒತ್ತಾಯಿಸುತ್ತಿದ್ದಾರೆ ಎಂದು ಪ್ರಶ್ನಿಸಬೇಕಿದೆ?

ರೋಹಟಗಿ: ಯಾಕಂದ್ರೆ ಸಂವಿಧಾನದಲ್ಲಿ ಅದಕ್ಕೆ ಅವಕಾಶವಿದೆ.

212ನೇ ವಿಧಿಯ ಜಿಜ್ಞಾಸೆ

ಕಪಿಲ್ ಸಿಬಲ್: ಸದನದ ವಿಶ್ವಾಸವನ್ನು ಸ್ಪೀಕರ್ ಒಮ್ಮೆ ಗಳಿಸಿದ ಮೇಲೆ ಶಾಸಕಾಂಗ ಪ್ರಕ್ರಿಯೆಗಳು ಆರಂಭವಾಗುತ್ತವೆ. ಅನಂತರವಷ್ಟೇ ಸಂವಿಧಾನದ 212ನೇ ವಿಧಿ ಊರ್ಜಿತವಾಗುತ್ತದೆ.

ನಾಳೆ–ನಾಡಿದ್ದು ಸಾಧ್ಯವಿಲ್ಲ: ರೋಹಟಗಿ

ರೋಹಟಗಿ: ಶಿಷ್ಟಾಚಾರಗಳ ಪಾಲನೆ ಸರಿಯಾಗಿ ಆಗಬೇಕು. ಹೀಗಾಗಿ ವಿಶ್ವಾಸಮತ ಯಾಚನೆಯು ಸ್ಪೀಕರ್‌ ಆಯ್ಕೆಯ ನಂತರವೇ ನಡೆಯಬೇಕು. ಇದು ನಾಳೆ ಆಥವಾ ನಾಡಿದ್ದು ನಡೆಯಲು ಸಾಧ್ಯವಿಲ್ಲ. ಸರಿಯಾದ ಕ್ರಮವನ್ನೇ ಜರುಗಿಸಬೇಕಿದೆ.

ಆದ್ಯತೆಗಳನ್ನು ವಿವರಿಸಿದ ರೋಹಟಗಿ

ಮುಕುಲ್ ರೋಹಟಗಿ: ಈಗ ಆಗಬೇಕಿರುವ ಮುಖ್ಯ ಕೆಲಸಗಳು.

1) ಹಂಗಾಮಿ ಸ್ಪೀಕರ್ ನೇಮಕ
2) ಪ್ರತಿಜ್ಞಾ ವಿಧಿ
3) ಸ್ಪೀಕರ್ ಚುನಾವಣೆ
4) ಅಜೆಂಡಾ

ನ್ಯಾಯಾಲಯ ಹೇಗೆ ಮಧ್ಯ ಪ್ರವೇಶಿಸಲು ಸಾಧ್ಯ?

ರೋಹಟಗಿ: ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ 14 ದಿನಗಳ ಅವಕಾಶ ನೀಡಿದ್ದಾರೆ. ಯಾವುದೇ ಅಕ್ರಮಗಳು ನಡೆಯದಿದ್ದಾಗ, ಅದನ್ನು ನ್ಯಾಯಾಲಯವು ಮೂರ್ನಾಲ್ಕು ದಿನಗಳಿಗೆ ಇಳಿಸಲು ಸಾಧ್ಯವೇ? ಸಂವಿಧಾನದ 212ನೇ ವಿಧಿಗೆ ಇದು ವಿರುದ್ಧವಲ್ಲವೇ? (ಸಂವಿಧಾನದ 212ನೇ ವಿಧಿಯ ಪ್ರಕಾರ ನ್ಯಾಯಾಲಯಗಳು ಶಾಸಕಾಂಗದ ಕಲಾಪಗಳ ವಿಚಾರಣೆ ನಡೆಸುವಂತಿಲ್ಲ).

ಸಂವಿಧಾನ ರೂಪಿಸಿರುವ ನಿಯಮಗಳು

ರೋಹಟಗಿ ಪೂರಕ ವಾದ ಮಂಡನೆ ಆರಂಭ. ವಿಧಾನಸಭೆಯ ನಿಯಮಗಳನ್ನು ಸಂವಿಧಾನವೇ ರೂಪಿಸಿದೆ.

24 ತಾಸುಗಳಲ್ಲಿ ವಿಶ್ವಾಸಮತ –ಸಿಂಘ್ವಿ ವಿನಂತಿ

ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ಕಾಪಾಡುವ ಉದ್ದೇಶದಿಂದ ನ್ಯಾಯಾಲಯವು ಈ ಹಿಂದೆ ಹಲವು ತೀರ್ಪುಗಳನ್ನು ನೀಡಿದೆ. ಅದರಂತೆ ವಿಶ್ವಾಸಮತ ಯಾಚನೆಯು 24 ಗಂಟೆಗಳ ಒಳಗೆ ನಡೆಬೇಕು. –ಸಿಂಘ್ವಿ.

ತಕ್ಷಣ ವಿಶ್ವಾಸಮತ ಯಾಚಿಸಲಿ

ಹೇಗೆ ಸದನದಲ್ಲಿ ಬಹುಮತ ಪರೀಕ್ಷೆ ನಡೆಯಲಿದೆ ಎನ್ನುವುದು ಈಗ ಬಹಳ ಮುಖ್ಯವಾಗುತ್ತೆ. ಯಾವ ಪಕ್ಷ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳದೇ, ಸದನದ ಅತಿ ಹಿರಿಯ ಸದಸ್ಯರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಬೇಕು. ಅದಾದ ನಂತರ ತಕ್ಷಣ ವಿಶ್ವಾಸಮತ ಯಾಚನೆ ಕಲಾಪ ನಡೆಯಬೇಕು. ‘ತಕ್ಷಣ’ ಎನ್ನುವುದು ಬಹುಮುಖ್ಯ. –ಅಭಿಷೇಕ್ ಮನು ಸಿಂಘ್ವಿ

ಪ್ರಜಾಪ್ರಭುತ್ವದ ಕಗ್ಗೊಲೆ

ಎನ್‌ಸಿಪಿ ಪರ ವಾದ ಮಂಡನೆ ಆರಂಭಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ. 

ಎನ್‌ಸಿಪಿಯ 54 ಶಾಸಕರ ಸಹಿಯ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಆದರೆ ಏತಕ್ಕೆ ಸಹಿ ಮಾಡುತ್ತಿದ್ದೇವೆ ಎನ್ನುವ ವಿಚಾರವನ್ನು ಶಾಸಕರಿಂದ ಮುಚ್ಚಿಟ್ಟಿರಬಹುದು. ಇದು ಪ್ರಜಾಪ್ರಭುತ್ವದ ಕಗ್ಗೊಲೆ.

ಬಹುಮತ ಸಾಬೀತುಪಡಿಸಲಿ

ಬಿಜೆಪಿ ಮತ್ತು ಶಿವಸೇನಾ ನಡುವಣ ಚುನಾವಣಾ ಪೂರ್ವ ಮೈತ್ರಿ ಮುರಿದ ನಂತರವೇ ನಾವು ಸರ್ಕಾರ ರಚನೆಗೆ ಪರ್ಯಾಯ ಪ್ರಯತ್ನ ಆರಂಭಿಸಿದ್ದು. ಇಂದು ಅಜಿತ್ ಪವಾರ್ ತಮಗೆ 54 ಎನ್‌ಸಿಪಿ ಶಾಸಕರ ಬೆಂಬಲ ಇದೆ ಎಂದು ಹೇಳುತ್ತಿದ್ದಾರೆ. ಆದರೆ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಗಿದೆ. ಅವರಿಗೆ ಬಹುಮತವಿದ್ದರೆ ಅದನ್ನು ಸದನದಲ್ಲಿ ಸಾಬೀತುಪಡಿಸಲಿ. –ಕಪಿಲ್ ಸಿಬಲ್

ಮೈತ್ರಿ ಮುರಿಯಲು ನಾವು ಕಾರಣವಲ್ಲ

ಪರಸ್ಪರ ವಿಶ್ವಾಸ ಮತ್ತು ಭರವಸೆಗಳು ಉಳಿಯದ ಕಾರಣ ಬಿಜೆಪಿ–ಶಿವಸೇನಾ ಮೈತ್ರಿ ಮುರಿಯಿತು. ಅದಕ್ಕೂ ಎನ್‌ಸಿಪಿ ಅಥವಾ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. –ಕಪಿಲ್ ಸಿಬಲ್.

ಮೈತ್ರಿಕೂಟ ದೂರ ಇಡುವ ಸಂಚು

ಶುಕ್ರವಾರ ರಾತ್ರಿ 7ರಿಂದ ಶನಿವಾರ ನಸುಕಿನ 5 ಗಂಟೆಯ ನಡುವೆ ಎಲ್ಲವೂ ನಡೆದುಹೋಯಿತು. ಮೂರು ಪಕ್ಷಗಳ ಮೈತ್ರಿಕೂಟ (ಎನ್‌ಸಿಪಿ, ಕಾಂಗ್ರೆಸ್, ಶಿವಸೇನಾ) ಅಧಿಕಾರಕ್ಕೆ ಬರುವುದನ್ನು ತಡೆಯಲೆಂದು ಇಷ್ಟೆಲ್ಲಾ ಆಯಿತು. –ಕಪಿಲ್ ಸಿಬಲ್.

ರಾಜ್ಯಪಾಲರ ತರಾತುರಿ

ಅಷ್ಟೊಂದು ಕಾದಿದ್ದ ರಾಜ್ಯಪಾಲರಿಗೆ ಶನಿವಾರ ಮುಂಜಾನೆ 5.47ಕ್ಕೆ ರಾಷ್ಟ್ರಪತಿ ಆಡಳಿತ ತೆಗೆದುಹಾಕಲು ಆತುರವೇನಿತ್ತು. ಅಷ್ಟೆಲ್ಲಾ ತರಾತುರಿಯಿಂದ ಹೊಸ ಸರ್ಕಾರಕ್ಕೆ ಅಧಿಕಾರ ಏಕೆ ಕೊಡಬೇಕಿತ್ತು? –ಕಪಿಲ್ ಸಿಬಲ್.

ಕಾಂಗ್ರೆಸ್ ಪಾಳಯದಲ್ಲಿ ಏನೆಲ್ಲಾ ಆಯ್ತು?

ಶುಕ್ರವಾರ ಮತ್ತು ಶನಿವಾರ ನಡೆದ ಘಟನಾವಳಿಗಳನ್ನು ವಿವರಿಸಿದ ಅಘಾಡಿ ಪರ ವಕೀಲ ಕಪಿಲ್ ಸಿಬಲ್. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಘೋಷಣೆ ಮತ್ತು ಪ್ರಮಾಣ ವಚನದ ವಿಚಾರವನ್ನೂ ಪ್ರಸ್ತಾಪಿಸಿದ ಕಪಿಲ್ ಸಿಬಲ್.

ನಿರ್ದೇಶನ ನೀಡಬಹುದೇ?

‘ನ್ಯಾಯಾಲಯವು ರಾಜ್ಯಪಾಲರಿಗೆ ನಿರ್ದೇಶನ ನೀಡಬಹುದೇ?’ ಮುಕುಲ್ ರೋಹಟಗಿ ಪ್ರಶ್ನೆ.

ಸಮರ್ಪಕ ದಾಖಲೆ

ಸಮರ್ಪಕ ದಾಖಲೆಗಳನ್ನು ಸಲ್ಲಿಸಿದ ನಂತರವೂ (54 ಎನ್‌ಸಿಪಿ ಶಾಸಕರ ಸಹಿ) ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆಯೇ? ಈ ದಾಖಲೆಗಳನ್ನು ಪ್ರಶ್ನಿಸುವ ಯಾವುದೇ ದಾಖಲೆಗಳು ಸಲ್ಲಿಕೆಯಾಗಿಲ್ಲ. –ಮಣಿಂದರ್ ಸಿಂಗ್ (ಅಜಿತ್ ಪವಾರ್)

ಕರ್ತವ್ಯ ನಿರ್ವಹಣೆ

ನಾನು (ಅಜಿತ್ ಪವಾರ್) ಎನ್‌ಸಿಪಿ ನಾಯಕನಾಗಿ ನನ್ನ ಕರ್ತವ್ಯ ನಿರ್ವಹಿಸಿದೆ. ನ.22ರಂದು ನಾನು ಎನ್‌ಸಿಪಿ ನಾಯಕನಾಗಿರಲಿಲ್ಲ ಎಂದು ಹೇಳಲು ಯಾವುದೇ ದಾಖಲೆಗಳಿಲ್ಲ. –ಮಣಿಂದರ್ ಸಿಂಗ್

ಅಜಿತ್ ಪವಾರ್ ಪರ ವಾದ

ಅಜಿತ್ ಪವಾರ್ ಪರವಾಗಿ ವಕೀಲ ಮಣಿಂದರ್ ಸಿಂಗ್ ವಾದ ಮಂಡನೆ.

ಬಹುಮತದ ವಿಚಾರ

‘ನಾವೂ ಹೇಗೋ ಬಹುಮತ ಒಟ್ಟು ಮಾಡಿಬಿಟ್ಟಿದ್ದೇವೆ, 24 ಗಂಟೆಗಳ ಒಳಗೆ ಬಹುಮತ ಸಾಬೀತುಪಡಿಸದಿದ್ದರೆ ಅವರೆಲ್ಲಾ ದೂರಾಗುತ್ತಾರೆ ಎಂದು ಯಾರಾದರೂ ಹೇಳಲು ಸಾಧ್ಯವೇ?’ –ತುಷಾರ್ ಮೆಹ್ತಾ ವಾದ.

ಇಷ್ಟೆಲ್ಲಾ ಆಗಬೇಕಿದೆ –ರೋಹಟಗಿ

ಬಹುಮತ ಸಾಬೀತಿಗೆ ಮೊದಲು ಹಂಗಾಮಿ ಸ್ಪೀಕರ್‌ ಆಯ್ಕೆಯಾಗಬೇಕು. ಅವರು ಶಾಸಕರಿಗೆ ಪ್ರತಿಜ್ಞಾ ವಿಧಿ ಬೋಧಿಸಬೇಕು. ನಂತರ ಸ್ಪೀಕರ್‌ ಚುನಾವಣೆ ನಡೆಯಬೇಕು. ಅವರು ಬಹುಮತ ಸಾಬೀತು ಪಡಿಸಲು ದಿನಾಂಕ ನಿಗದಿಪಡಿಸಬೇಕು. –ರೋಹಟಗಿ

ರಾಜ್ಯಪಾಲರ ನಡೆ ಸರಿಯಾಗಿದೆ: ರೋಹಟಗಿ

ಬೆಂಬಲ ನೀಡಿರುವ ಶಾಸಕರ ಪತ್ರದೊಂದಿಗೆ ಫಡಣವೀಸ್ ರಾಜ್ಯಪಾಲರನ್ನು ಭೇಟಿಯಾಗಿದ್ದರು. ತಮ್ಮ ಎದುರು ಇದ್ದ ದಾಖಲೆಯನ್ನು ಆಧರಿಸಿ ರಾಜ್ಯಪಾಲರು ತೀರ್ಮಾನ ತೆಗೆದುಕೊಂಡಿದ್ದಾರೆ. ನಿನ್ನೆ ಇಲ್ಲಿ ‘ರಾಜ್ಯಪಾಲರು ಹೀಗೆ ಹೇಗೆ ನಡೆದುಕೊಳ್ಳಲು ಸಾಧ್ಯ’ ಎಂಬ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಈಗ ಉತ್ತರ ಸಿಕ್ಕಿರಬಹುದು. –ಮುಕುಲ್ ರೋಹಟಗಿ

ಫಡಣವೀಸ್ ಪರ ರೋಹಟಗಿ ವಾದ ಮಂಡನೆ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡನೆ ಅರಂಭ.

ಎಂದು ಯಾಚಿಸಬೇಕು ಬಹುಮತ?

ಮಹಾರಾಷ್ಟ್ರ ರಾಜ್ಯಪಾಲರು ಬಿಜೆಪಿ ಸರ್ಕಾರ ರಚಿಸಲು ಅವಕಾಶ ಕೊಟ್ಟು, ಬಹುಮತ ಸಾಬೀತಿಗೆ ನವೆಂಬರ್ 30ರವರೆಗೆ ಗಡುವು ನೀಡಿದ್ದಾರೆ. ಆದರೆ ಈಗ ಕೇವಲ 24 ಗಂಟೆಗಳಲ್ಲಿ ಬಹುಮತ ಯಾಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. –ತುಷಾರ್ ಮೆಹ್ತಾ

ಫಡಣವೀಸ್ ಪತ್ರ ಓದಿದ ಮೆಹ್ತಾ

ಸರ್ಕಾರ ರಚನೆಗೆ ಹಕ್ಕು ಮಂಡಿಸಿ ದೇವೇಂದ್ರ ಫಡಣವೀಸ್ ರಾಜ್ಯಪಾಲರಿಗೆ ನೀಡಿದ ಪತ್ರವನ್ನು ನ್ಯಾಯಾಲಯದಲ್ಲಿ ಓದಿದ ತುಷಾರ್ ಮೆಹ್ತಾ. ಬಿಜೆಪಿಗೆ ಬೆಂಬಲ ಘೋಷಿಸಿದ ಎನ್‌ಸಿಪಿಯ 54 ಶಾಸಕರ ಉಲ್ಲೇಖವೂ ಪತ್ರದಲ್ಲಿದೆ.

ಎನ್‌ಸಿಪಿ ಬೆಂಬಲ

ಅಜಿತ್ ಪವಾರ್‌ರನ್ನು ಎನ್‌ಸಿಪಿ ನಾಯಕರಾಗಿ ಆಯ್ಕೆ ಮಾಡಿದ ಎನ್‌ಸಿಪಿಯ 54 ಚುನಾಯಿತ ಶಾಸಕರ ಹೆಸರಿರುವ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ತುಷಾರ್ ಮೆಹ್ತಾ. ಬಿಜೆಪಿಗೆ ಎನ್‌ಸಿಪಿ ಬೆಂಬಲ ಘೋಷಿಸಿದೆ ಎಂದು ವಾದ ಮಂಡನೆ.

ಕಾರ್ಯದರ್ಶಿ ಪರ ವಾದ

‘ಮಹಾರಾಷ್ಟ್ರ ರಾಜ್ಯಪಾಲರ ಕಾರ್ಯದರ್ಶಿ ಪರವಾಗಿ ನಾನು ವಾದ ಮಂಡಿಸುತ್ತಿದ್ದೇನೆ’ –ತುಷಾರ್ ಮೆಹ್ತಾ

‘ಅಜಿತ್ ಪವಾರ್ ಪತ್ರ ಕೊಟ್ಟಿದ್ದಾರೆ’

ನವೆಂಬರ್ 22ರಂದು ಅಜಿತ್‌ ಪವಾರ್‌ ಬಿಜೆಪಿ ಬೆಂಬಲಿಸಿ ಪತ್ರ ನೀಡಿದ್ದಾರೆ. ಈ ಪತ್ರದಲ್ಲಿ ಚುನಾಯಿತ ಎನ್‌ಸಿಪಿ ಶಾಸಕರು ನನ್ನನ್ನು ಎನ್‌ಸಿಪಿ ಮುಖ್ಯಸ್ಥನನ್ನಾಗಿ ಆರಿಸಿದ್ದಾರೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.

ಬಿಜೆಪಿ ಪರ ವಾದ ಮಂಡನೆ

ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ವಾದ ಮಂಡನೆ ಆರಂಭ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೂ ಮುನ್ನ ನಡೆದ ಘಟನಾವಳಿಗಳ ವಿವರಣೆ.

ಘಟಾನುಘಟಿ ವಕೀಲರು

ಕಾಂಗ್ರೆಸ್, ಶಿವಸೇನಾ ಮತ್ತು ಎನ್‌ಸಿಪಿ ರಚಿಸಿಕೊಂಡಿರುವ ಮಹಾ ಅಘಾಡಿ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ. ಬಿಜೆಪಿ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಉಪಸ್ಥಿತಿ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಉಪಸ್ಥಿತಿ.

ನ್ಯಾಯಾಲಯ ಕಲಾಪ ಆರಂಭ

ನ್ಯಾಯಮೂರ್ತಿ ಎನ್‌.ವಿ.ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್‌ ಖನ್ನಾ ಅವರಿದ್ದ ನ್ಯಾಯಪೀಠ ವಿಚಾರಣೆ ಅರಂಭಿಸಿದೆ. ನ್ಯಾಯಮೂರ್ತಿ ಎನ್‌.ವಿ.ರಮಣ ಪೀಠದ ಮುಖ್ಯಸ್ಥರಾಗಿದ್ದಾರೆ.

ಸುಪ್ರೀಂ ಕೋರ್ಟ್‌ ಕಲಾಪ ಆರಂಭ

ನ್ಯಾಯಾಲಯಕ್ಕೆ ನ್ಯಾಯಮೂರ್ತಿಗಳು ಮತ್ತು ವಕೀಲರ ಆಗಮನ. ಕಲಾಪ ಆರಂಭ.

ಆಹ್ವಾನಪತ್ರ ಸಲ್ಲಿಸಲು ಸೂಚನೆ

ಸರ್ಕಾರ ರಚಿಸಲು ಬೇಕಾದಷ್ಟು ಶಾಸಕರ ಬೆಂಬಲ ಇದೆ ಎಂದು ಫಡಣವೀಸ್‌ ಅವರು ರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ ಅವರಿಗೆ ಸಲ್ಲಿಸಿದ್ದ ಪತ್ರ ಮತ್ತು ಸರ್ಕಾರ ರಚನೆಗೆ ಫಡಣವೀಸ್‌ ಅವರಿಗೆ ರಾಜ್ಯಪಾಲರು ನೀಡಿದ್ದ ಅಹ್ವಾನಪತ್ರಗಳನ್ನು ಸೋಮವಾರ ಬೆಳಿಗ್ಗೆ 10.30ರೊಳಗೆ ಸಲ್ಲಿಸುವಂತೆ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠವು ಭಾನುವಾರ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.