ನಾಲತವಾಡ(ವಿಯಜಪುರ ಜಿಲ್ಲೆ):ಪಟ್ಟಣದ ಗಣಪತಿ ಚೌಕ್ನಲ್ಲಿ ನಿತ್ಯವೂ ಸರತಿ ಸಾಲು. ಸಾತೀರವ್ವನ ಬಜಿ ಅಂಗಡಿಯಲ್ಲಿ ಬಿಸಿ ಬಿಸಿ ಮಿರ್ಚಿ, ಈರುಳ್ಳಿ ಗುಂಡು ಬಜಿ ಖರೀದಿಗೆ ಮುಗಿಬೀಳುವವರೇ ಹೆಚ್ಚು.
ಮನ ತೃಪ್ತಿಯಾಗುವಷ್ಟು ಸವಿದು ಮನೆಗೂ ಕೊಂಡೊಯ್ದು ತಿನ್ನೋದು ಸಹಜ. ಆಗಾಗ್ಗೆ ಇಲ್ಲಿನ ಭಜ್ಜಿ ಸವಿಯದವರಿಲ್ಲ. ರುಚಿಗೆ ಮನಸೋತವರು ಬಹುತೇಕರು.
ಪಟ್ಟಣದ ಹಲವರ ಮನೆಗಳಲ್ಲಿ ಊಟದ ಜತೆ ಸಾತೀರವ್ವನ ಅಂಗಡಿ ಭಜ್ಜಿಗೆ ಕಾಯಂ ಸ್ಥಾನವಿದೆ. ಎಲ್ಲಾ ವಯೋಮಾನದವರ ಅಚ್ಚುಮೆಚ್ಚಿನ ತಿನಿಸು ಇದಾಗಿದೆ.
ಸಾತೀರಮ್ಮಜ್ಜಿ ಗತಿಸಿ ಹಲ ದಶಕಗಳೇ ಸಂದಿವೆ. ಆದರೆ ಆಕೆ ತಯಾರಿಸುತ್ತಿದ್ದ ಭಜಿಯ ಸ್ವಾದ, ರುಚಿ ಇಂದಿಗೂ ಅದೇ ಇರುವುದರಿಂದ ಮೂರನೇ ತಲೆಮಾರು ಇದೇ ಕಾಯಕ ಮುಂದುವರೆಸಿದೆ. ಭಜಿ ಪ್ರಿಯರು ಅಂದಿನಂತೆ ಇಂದೂ ಸರತಿ ಸಾಲು ನಿಲ್ಲುವುದು ಇಲ್ಲಿನ ವಿಶೇಷವಾಗಿದೆ.
ಇದೀಗ ರುದ್ರಪ್ಪ ಮದರಿ, ಇವರ ಮಗ ಇಬ್ಬರೂ ಪಾಳಿ ಪ್ರಕಾರ ಅಂಗಡಿ ನಡೆಸುತ್ತಾರೆ. ಮಿರ್ಚಿ, ಗುಂಡು ಈರುಳ್ಳಿ ಬಜಿ ಮಾಡುವಲ್ಲಿ ನಿಸ್ಸೀಮರು. ನಿತ್ಯ ಕನಿಷ್ಠ 40ರಿಂದ 50ಕೆ.ಜಿ. ಕಡಲೆ ಹಿಟ್ಟಿನಲ್ಲಿ ಬಜಿ ತಯಾರಿಸುತ್ತಾರೆ.
ಕಡಲೆಹಿಟ್ಟನ್ನು ಹದವಾಗಿ ಕಲಸೋದೆ ಇವರಿಗೆ ಕಲೆ. ರುಚಿಗೆ ತಕ್ಕಷ್ಟು ಉಪ್ಪು, ಅಜವಾನ, ಹವಿಜ, ಕಾಯ್ದ ಎಣ್ಣೆ ಹಾಕಿ, ಇದರೊಟ್ಟಿಗೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ–ಕರಿಬೇವು ಹಾಕಿ ಮಿಶ್ರ ಮಾಡ್ತ್ವಾರೆ. ಎಲ್ಲವೂಗಳಿಂದ ಸಮರಸಗೊಂಡ ಹಿಟ್ಟನ್ನು ಕೆಲ ಹೊತ್ತು ನೆನೆಯಲು ಬಿಟ್ಟು, ನಂತರ ಕಾಯ್ದ ಎಣ್ಣೆಗೆ ನಿರ್ದಿಷ್ಟ ಅಳತೆಯಲ್ಲಿ ಬಾಣಲೆಯೊಳಗೆ ಬಜಿ ಬಿಡಲಾರಂಭಿಸುತ್ತಿದೆ ಹೊರಹೊಮ್ಮುವ ಸುವಾಸನೆಗೆ ಮನಸೋಲದವರಿಲ್ಲ. ಅತ್ತ ದೌಡ್ ಹೆಜ್ಜೆ ಹಾಕದವರಿಲ್ಲ.
ನಾಲತವಾಡದ ಜತೆ ಸುತ್ತಮುತ್ತಲ ಹಳ್ಳಿಗಳ ಜನರಿಗೂ ಇಲ್ಲಿನ ಬಜಿ ಪಂಚಪ್ರಾಣ. ಬಜಿಯೊಂದಿಗೆ ಆರಂಭಗೊಂಡಿದ್ದ ಅಂಗಡಿಯಲ್ಲಿ ಇದೀಗ ತರಹೇವಾರಿ ಖಾದ್ಯ ಶುಚಿ–ರುಚಿಯಾಗಿ ಲಭ್ಯ. ಮದುವೆ, ಸೀಮಂತದ ಔತಣಕೂಟಕ್ಕೂ ಅಡುಗೆ ಮಾಡುತ್ತಾರೆ. ಇವರ ಕೈರುಚಿಯ ಅಡುಗೆಯೂ ಭಾಳ ಫೇಮಸ್ಸು. ಜಾತ್ರೆ, ಉತ್ಸವಗಳಲ್ಲೂ ಇವರ ಮಿಠಾಯಿ ಅಂಗಡಿ ಎಲ್ಲರನ್ನೂ ಆಕರ್ಷಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.