ADVERTISEMENT

ಸಿರಿಧಾನ್ಯಗಳಲ್ಲಿ ರುಚಿಕರ ಖಾದ್ಯಗಳು

ಸರಸ್ವತಿ ಎಸ್.ಭಟ್ಟ
Published 17 ಸೆಪ್ಟೆಂಬರ್ 2018, 12:03 IST
Last Updated 17 ಸೆಪ್ಟೆಂಬರ್ 2018, 12:03 IST
ಸಿರಿಧಾನ್ಯ ಕಿಚಡಿ
ಸಿರಿಧಾನ್ಯ ಕಿಚಡಿ   

ಸಿರಿಧಾನ್ಯಗಳಲ್ಲಿ ನಾರಿನಾಂಶ ಹೆಚ್ಚಿದ್ದು, ಇವುಗಳಿಂದ ಮಾಡಿದ ಆಹಾರಗಳ ಸೇವನೆಯಿಂದ ಸಕ್ಕರೆ ಕಾಯಿಲೆ, ಸ್ಥೂಲಕಾಯವನ್ನು ದೂರವಿಡಬಹುದು. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ದೆಹಕ್ಕೆ ಅವಶ್ಯವಿರುವ ಪ್ರೋಟೀನ್, ಖನಿಜಾಂಶ ಹಾಗೂ ನಾರಿನಾಂಶ ಒದಗಿಸುತ್ತದೆ.

ಸಿರಿಧಾನ್ಯ ಕಿಚಡಿ
ಬೇಕಾಗುವ ವಸ್ತುಗಳು : 1 ಕಪ್ ಸಾಮೆ ಅಕ್ಕಿ. 2 ಚಮಚ ಎಣ್ಣೆ, ½ ಚಮಚ ಸಾಸಿವೆ, ½ ಚಮಚ ಜೀರಿಗೆ, 1 ಎಸಳು ಕರಿ ಬೇವು, ¼ ಇಂಚು ಉದ್ದದ ಶುಂಠಿ, 1 ಈರುಳ್ಳಿ, 1 ಕ್ಯಾರೆಟ್, 5-6 ಬೀನ್ಸ್, 1 ಕಪ್ ಹಾಲು, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ನಿಂಬೆರಸ.

ಮಾಡುವ ವಿಧಾನ : ಸಿರಿಧಾನ್ಯ ಸಾಮೆ ಅಕ್ಕಿಯನ್ನು 3 ಕಪ್ ನೀರು ಹಾಕಿ ಬೇಯಿಸಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ, ಜೀರಿಗೆ, ಕರಿಬೇವು, ಶುಂಠಿ ಚೂರು, ಈರುಳ್ಳಿ ಚೂರು, ಹಾಕಿ ಸ್ವಲ್ಪ ಹುರಿದು, ಬೇಯಿಸಿದ ಕ್ಯಾರೆಟ್, ಬೀನ್ಸ್ ಹಾಕಿ ಹುರಿಯಿರಿ ನಂತರ ಹಾಲು, ಬೇಯಿಸಿದ ಸಾಮೆ ಅಕ್ಕಿ, ಉಪ್ಪು, ನಿಂಬೆರಸ ಹಾಕಿ ಸರಿಯಾಗಿ ತೊಳಸಿ. ಈಗ ರುಚಿಯಾದ ಪೌಷ್ಟಿಕ ಸಿರಿಧಾನ್ಯ ಕಿಚಡಿ ಸವಿಯಲು ಸಿದ್ಧ.

ADVERTISEMENT

ನವಣೆ ಕ್ಷೀರ
ಬೇಕಾಗುವ ವಸ್ತುಗಳು : 1 ಕಪ್ ನವಣೆ, ½ ಕಪ್ ನೀರು, 1 ಕಪ್ ಹಾಲು, 1 ಕಪ್ ಸಕ್ಕರೆ, 7-8 ಗೋಡಂಬಿ, 7-8 ಒಣದ್ರಾಕ್ಷೆ, ½ ಕಪ್ ತುಪ್ಪ, ½ ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ : ತೊಳೆದ ನವಣೆ ಒಣಗಿಸಿ ಮಿಕ್ಸಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿ. ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಗೋಡಂಬಿ, ದ್ರಾಕ್ಷೆ ಹಾಕಿ ಹುರಿದು ಕೆಳಗಿಳಿಸಿ. ನಂತರ ನವಣೆ, ರವೆ ಹಾಕಿ ಹುರಿದು ಕೆಳಗಿಳಿಸಿ. ನಂತರ ಬಾಣಲೆಗೆ ನೀರು, ಹಾಲು ಹಾಕಿ. ಕುದಿಯುವಾಗ ಹುರಿದ ನವಣೆ ರವೆ ಹಾಕಿ. ಬೆಂದ ಮೇಲೆ ಸಕ್ಕರೆ ಹಾಕಿ. ಕರಗಿ ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ತುಪ್ಪ ಸೇರಿಸಿ. ಮಿಶ್ರಣ ಎಲ್ಲಾ ಹೊಂದಿಕೊಂಡಾಗ ತುಪ್ಪದಲ್ಲಿ ಹುರಿದ ದ್ರಾಕ್ಷೆ, ಗೋಂಡಂಬಿ, ಏಲಕ್ಕಿ ಪುಡಿ ಹಾಕಿ ಸರಿಯಾಗಿ ಮಗುಚಿ ಒಲೆಯಿಂದ ಕೆಳಗಿಳಿಸಿ, ತುಪ್ಪ ಸವರಿದ ತಟ್ಟೆಗೆ ಹಾಕಿ. ಈಗ ರುಚಿಯಾದ ಪೌಷ್ಟಿಕ ನವಣೆ ಕ್ಷೀರ ತಿನ್ನಲು ಸಿದ್ಧ.

ಬೀಟ್ರೂಟ್ ಸಾಮೆ ಪಾಯಸ
ಬೇಕಾಗುವ ವಸ್ತುಗಳು : ½ ಕಪ್ ಸಾಮೆ ಅಕ್ಕಿ, ½ ಕಪ್ ಬೀಟ್ರೂಟ್ ತುರಿ, 1½ ಕಪ್ ತೆಂಗಿನ ತುರಿ, ¾ ಕಪ್ ಬೆಲ್ಲ, ¼ ಚಮಚ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷೆ ಸ್ವಲ್ಪ.
ಮಾಡುವ ವಿಧಾನ : 3-4 ಗಂಟೆ ಸಾಮೆ ಅಕ್ಕಿಯನ್ನು ನೆನೆಸಿ. ನಂತರ ಚೆನ್ನಾಗಿ ತೊಳೆದು, ತುರಿದ ಬೀಟ್ರೂಟ್ ಸೇರಿಸಿ ಸ್ವಲ್ಪ ನೀರು ಹಾಕಿ ಕುಕ್ಕರಿನಲ್ಲಿಟ್ಟು 2-3 ವಿಸಿಲ್ ಕೂಗಿಸಿ. ನಂತರ ತೆಂಗಿನತುರಿ ಸ್ವಲ್ಪ ನೀರು ಸೇರಿಸಿ ರುಬ್ಬಿ ಹಾಲು ತೆಗೆದಿಡಿ. ಬೇಯಿಸಿದ ಸಾಮೆ ಬೀಟ್ರೂಟ್ ಬೆಲ್ಲ ಹಾಕಿ ಒಲೆಯ ಮೇಲಿಟ್ಟು ತೊಳಸಿ. ತೆಂಗಿನ ಹಾಲು ಸೇರಿಸಿ ಕುದಿಸಿ. ನಂತರ ಹುರಿದ ದ್ರಾಕ್ಷೆ, ಗೋಡಂಬಿ, ಏಲಕ್ಕಿ ಪುಡಿ ಸೇರಿಸಿ ತೊಳಸಿ ಒಲೆಯಿಂದ ಕೆಳಗಿಳಿಸಿ. ಈಗ ಪೌಷ್ಟಿಕ ಬೀಟ್ರೂಟ್ ಸಾಮೆ ಪಾಯಸ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.