ADVERTISEMENT

ಪೀಡನೆಯಿಂದ ಖಿನ್ನತೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಬಾಲ್ಯಾವಸ್ಥೆಯಲ್ಲಿ ನಿಂದನೆ ಅಥವಾ ತಾತ್ಸಾರದಿಂದ ನರಳಿದ ಮಕ್ಕಳು ಹರೆಯಕ್ಕೆ ಬಂದ ಮೇಲೆ ಖಿನ್ನತೆಗೆ ಗುರಿಯಾಗುವ ಸಾಧ್ಯತೆ ಹೆಚ್ಚುತ್ತದೆ ಎಂದು ಸಂಶೋಧನೆಯೊಂದು ವರದಿ ಮಾಡಿದೆ.

ಬಾಲ್ಯಾವಸ್ಥೆಯಲ್ಲಿ ಅನುಭವಿಸಿದ ಹಿಂಸೆ ಅಥವಾ ಪೀಡನೆಯು ಎರಡು ರೀತಿಯ ಅಪಾಯಗಳಿಗೆ ಕಾರಣವಾಗುತ್ತದೆ. ಇದು ಅವರನ್ನು ವಿವಿಧ ಹರವುಗಳುಳ್ಳ ಹಾಗೂ ದೀರ್ಘಕಾಲಿಕ ಖಿನ್ನತೆಗೆ ಗುರಿಮಾಡುತ್ತದೆ. ಸುಮಾರು 23 ಸಾವಿರ ಜನರ ಮೇಲೆ ನಡೆಸಲಾದ ಅಧ್ಯಯನದ ವಿಶ್ಲೇಷಣೆಯಿಂದ ಈ ಸಂಗತಿ ತಿಳಿದು ಬಂದಿದೆ.

ಬ್ರಿಟನ್ (ಯುಕೆ)ನ ಲಂಡನ್ ಇನ್‌ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ ಕಿಂಗ್ ಕಾಲೇಜ್‌ನ ತಂಡ ಈ ಸಂಶೋಧನೆ ಕೈಗೊಂಡಿದ್ದು, ಈ ವರದಿಯು `ಅಮೆರಿಕನ್ ಜರ್ನಲ್ ಆಫ್ ಸೈಕಿಯಾಟ್ರಿ~ಯ ಮುಂದಿನ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿದೆ.

`ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಈ ಸಮಸ್ಯೆಗೆ ಗುರಿಯಾದವರನ್ನು ಗುರುತಿಸುವುದು ಮಹತ್ವದ ಸಂಗತಿ. ಆದರೆ ಅವರು ಔಷಧ- ಉಪಚಾರ ಹಾಗೂ ಕೌನ್ಸೆಲಿಂಗ್ ಒಳಗೊಂಡತೆ ಯಾವ ರೀತಿಯ ಚಿಕಿತ್ಸೆಗೂ ಸರಿಯಾಗಿ ಸ್ಪಂದಿಸುವುದಿಲ್ಲ ಎನ್ನುವುದು ಗಮನಾರ್ಹ~ ಎಂದು ಹಿರಿಯ ಸಂಶೋಧಕ ಆಂಡ್ರೆಯಾ ಡ್ಯಾನೆಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲ್ಯಾವಸ್ಥೆಯ ಪೀಡನೆಯು ದೈಹಿಕ, ಲೈಂಗಿಕ ಅಥವಾ ಮಾನಸಿಕ ಹಿಂಸೆಯನ್ನು ಒಳಗೊಂಡಿರಬಹುದು. ಅಂತಹ ಸ್ಥಿತಿಯಲ್ಲಿರುವ ಮಕ್ಕಳಿಗೆ  ಸಹಾಯ ಮಾಡುವ ಮೂಲಕ ಮುಂದೆ ಅವರು ಖಿನ್ನತೆಗೆ ಗುರಿಯಾಗುವುದನ್ನು ತಪ್ಪಿಸಬಹುದು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

ರೋಗಿಗಳ ಪೀಡನೆಯ ಇತಿಹಾಸವನ್ನು ತಿಳಿದುಕೊಂಡಿರುವುದು ಅವರ ಚಿಕಿತ್ಸೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವೈದ್ಯರಿಗೆ ಸಹಾಯಕವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.