ಮನುಷ್ಯನಿಗೆ ಹಲವಾರು ರೀತಿಯ ಕಾಯಿಲೆಗಳು ಬರುತ್ತವೆ. ಅವುಗಳಲ್ಲಿ ಅತಿ ಸುಲಭವಾದ ಕಾಯಿಲೆ ಯಾವುದು ಎಂಬ ಪ್ರಶ್ನೆಗೆ ನನ್ನ ಉತ್ತರ `ಸಕ್ಕರೆ ಕಾಯಿಲೆ~. ಏಕೆಂದರೆ ಇದನ್ನು ಸುಲಭವಾಗಿ ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬಹುದು. ಸೂಕ್ತ ವಿಧಾನದಲ್ಲಿ ನಿಯಂತ್ರಿಸಿಕೊಂಡರೆ `ಸಕ್ಕರೆ ಕಾಯಿಲೆಯಂತಹ ಸುಖವಾದ ಕಾಯಿಲೆ ಇನ್ನೊಂದಿಲ್ಲ~. ಹೀಗಾಗಿ ಇಂದು ನಮ್ಮ ಎದುರು ಸಕ್ಕರೆ ಕಾಯಿಲೆ ಇರುವ 85 ವರ್ಷ ದಾಟಿದ ಅನೇಕ ವಯೋವೃದ್ಧರು ಯುವಕರೂ ನಾಚುವಷ್ಟು ಆರೋಗ್ಯದಿಂದಿದ್ದಾರೆ!
ಅತ್ಯಂತ ಕೆಟ್ಟ ಕಾಯಿಲೆ ಯಾವುದು ಎಂಬ ಪ್ರಶ್ನೆಗೂ ನನ್ನ ಉತ್ತರ ಸಕ್ಕರೆ ಕಾಯಿಲೆಯೇ. ಏಕೆಂದರೆ ಸೂಕ್ತವಾಗಿ ನಿಭಾಯಿಸದಿದ್ದರೆ ಸಕ್ಕರೆ ಕಾಯಿಲೆ ಯಂತಹ ಕೆಟ್ಟ ಕಾಯಿಲೆ ಮತ್ತೊಂದಿಲ್ಲ. ಇದಕ್ಕೆ ಸಾಕ್ಷಿಯಾಗಿ ಈ ಕಾಯಿಲೆಯಿಂದ ಕಾಲು ಕಳೆದುಕೊಂಡ, ದೃಷ್ಟಿ ಕಳೆದುಕೊಂಡ, ಲಕ್ವ ಹೊಡೆಸಿಕೊಂಡ, ಹೃದಯಾಘಾತಕ್ಕೆ ಒಳಗಾದ, ಕಿಡ್ನಿ ವೈಫಲ್ಯಕ್ಕೆ ತುತ್ತಾದ, ಪ್ರಾಣ ಕಳೆದುಕೊಂಡ, ಬದುಕಿದ್ದೂ ಅನೇಕ ತೊಂದರೆಗಳಿಂದ ಯಮಯಾತನೆ ಪಡುತ್ತಿರುವ ಸಾವಿರ ಸಾವಿರ ಜನರ ದೃಷ್ಟಾಂತವೂ ನಮ್ಮ ಮುಂದೆಯೇ ಇದೆ.
ಭಾರತೀಯರಿಗೆ ಸಕ್ಕರೆ ಕಾಯಿಲೆಯ `ಜೀನ್~ ಆನುವಂಶೀಯವಾಗಿಯೇ ಬಂದಿರುವಂತಹದ್ದು. ಜೊತೆಗೆ ನಗರೀಕರಣ, ಔದ್ಯೋಗೀಕರಣ, ಆಹಾರ ಮತ್ತು ಜೀವನ ಶೈಲಿಯಲ್ಲಿ ತ್ವರಿತ ಬದಲಾವಣೆ, ಜೀವಿತಾವಧಿಯ ಹೆಚ್ಚಳ, ಯಾಂತ್ರಿಕ ಬದುಕು, ಮಾನಸಿಕ ಒತ್ತಡ ಮುಂತಾದ ಕಾರಣಗಳು ನಮ್ಮ ಸಕ್ಕರೆ ಕಾಯಿಲೆ ಹೆಚ್ಚಳಕ್ಕೆ ಕುಮ್ಮಕ್ಕು ನೀಡುತ್ತಿವೆ. ಸಕ್ಕರೆ ಕಾಯಿಲೆಯಿಂದ ಸಾವು- ನೋವು ಅಷ್ಟೇ ಅಲ್ಲ, ಮಾನವನ ಅತ್ಯಮೂಲ್ಯ ಆರೋಗ್ಯ ಪೂರ್ಣ ದುಡಿಮೆಯ ವರ್ಷಗಳೂ ನಾಶವಾಗಿ ಹೋಗುತ್ತಿವೆ. ಇದರಿಂದ ದೇಶದ ಆರೋಗ್ಯ ಮತ್ತು ಆರ್ಥಿಕತೆಯೂ ಕುಗ್ಗುತ್ತದೆ.
ಸಕ್ಕರೆ ಕಾಯಿಲೆಯಿಂದ ಅಪಾಯ ಉಂಟಾಗುವುದು ಕೇವಲ ಎರಡು ಗುಂಪಿನ ಜನರಿಗೆ ಮಾತ್ರ, ಅವರೆಂದರೆ:
1) ಸಕ್ಕರೆ ಕಾಯಿಲೆ ಇದ್ದೂ ಪತ್ತೆ ಮಾಡಿಸಿ ಕೊಂಡಿರದವರು
2) ಸಕ್ಕರೆ ಕಾಯಿಲೆ ಇದೆ ಎಂದು ಗೊತ್ತಾದ ನಂತರವೂ ಸರಿಯಾಗಿ ಚಿಕಿತ್ಸೆಗೆ ಒಳಗಾಗದವರು
ಸಕ್ಕರೆ ಕಾಯಿಲೆ ಬಹಳಷ್ಟು ಜನರಲ್ಲಿ, ಇರುವ ಸುಳಿವನ್ನೇ ನೀಡದೆ ನೇಪಥ್ಯದಲ್ಲೇ ಇದ್ದುಕೊಂಡು ಒಳಗೊಳಗೇ ಮತ್ತಷ್ಟು ಹೆಚ್ಚುತ್ತಾ ಹೋಗುತ್ತದೆ. ಹೀಗಾಗಿ ಈ ಕಾಯಿಲೆಯನ್ನು `ನಿಶ್ಶಬ್ದ ಹಂತಕ~ ಎನ್ನುತ್ತಾರೆ. ಇದನ್ನು ಗೆದ್ದಲು ಹತ್ತಿದ ಮರಕ್ಕೂ ಹೋಲಿಸಬಹುದು. ಸಕ್ಕರೆ ಕಾಯಿಲೆ ಇದೆ ಎಂದು ಗೊತ್ತಾದ ಮೇಲೂ ಬಹಳಷ್ಟು ಜನ ಚಿಕಿತ್ಸೆಯನ್ನು ನಿರ್ಲಕ್ಷಿಸುತ್ತಾರೆ. ಅನೇಕರು ಕೇವಲ ಔಷಧಿಯನ್ನೇ ಪೂರ್ಣವಾಗಿ ನೆಚ್ಚಿಕೊಂಡು ಉಳಿದ ಅಂಶಗಳನ್ನು ಅಲಕ್ಷಿಸುತ್ತಾರೆ. ಇನ್ನೂ ಅನೇಕರು ಜಾಹೀರಾತಿನ ಆಮಿಷಕ್ಕೆ ಒಳಗಾಗುತ್ತಿದ್ದಾರೆ.
ಆಯುರ್ವೇದ, ಸಿದ್ಧ, ಯುನಾನಿ, ನಾಟಿ ಹೀಗೆ ವಿಧವಿಧದ ಔಷಧಿಗಳಿಂದ ಗೊಂದಲಗೊಂಡಿದ್ದಾರೆ. ವಾಸ್ತವವಾಗಿ ಸಕ್ಕರೆ ಕಾಯಿಲೆ ನಿರ್ವಹಣೆಗೆ ಕೇವಲ ಔಷಧಿ- ಇಂಜೆಕ್ಷನ್ ಎಂದೆಂದಿಗೂ ಪೂರ್ಣ ಸಹಕಾರ ಅಲ್ಲವೇ ಅಲ್ಲ.
ಸಕ್ಕರೆ ಕಾಯಿಲೆಯ ಸವಾಲುಗಳನ್ನು ವ್ಯವಸ್ಥಿತ ಹಾಗೂ ವೈಜ್ಞಾನಿಕವಾಗಿ ಎದುರಿಸಲು ನಾಲ್ಕು ಮುಖ್ಯ ರಾಜ ಮಾರ್ಗಗಳಿವೆ. ಇವನ್ನು ಕಟ್ಟಡದ ಆಧಾರ ಸ್ತಂಭಕ್ಕೆ ಹೋಲಿಸಬಹುದು. ಅವುಗಳೆಂದರೆ:
1. ಆಹಾರ ಪಥ್ಯ
2. ವ್ಯಾಯಾಮ
3. ಕಾಯಿಲೆ ಬಗ್ಗೆ ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆ/ ಕಾಯಿಲೆ ಬಗ್ಗೆ ತಿಳಿವಳಿಕೆ
4. ಔಷಧಿಗಳು
ಈ ನಾಲ್ಕು ಅಂಶಗಳೂ ಅತಿ ಮುಖ್ಯ. ಇವೆಲ್ಲವೂ ಒಂದಕ್ಕೊಂದು ಪೂರಕ. ಹೀಗಾಗಿ ಈ ಅಂಶಗಳನ್ನು ಜೀವನಪರ್ಯಂತ ಅನುಷ್ಠಾನ ಗೊಳಿಸಿಕೊಳ್ಳಬೇಕು. ಎಲ್ಲವನ್ನೂ ಕಡೆಗಣಿಸಿ ಕೇವಲ ಔಷಧಿಯಿಂದಲೇ ಕಾಯಿಲೆಯನ್ನು ನಿಭಾಯಿಸಿಕೊಳ್ಳಲು ಸಾಧ್ಯವೇ ಇಲ್ಲ.
ಕೆಲವರಂತೂ ಪೂರ್ವಿಕರಿಂದ ತಮಗೆ ಸಕ್ಕರೆ ಕಾಯಿಲೆ ಬಂದಿದೆ ಎಂದು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾ ಇರುತ್ತಾರೆ. ಇದು ತಪ್ಪು. ಸಕ್ಕರೆ ಕಾಯಿಲೆಯ ಜೀನ್ ನಮಗೆ ಆನುವಂಶೀಯವಾಗಿಯೇ ಬಂದಿದ್ದರೂ ಅದು ಸುಪ್ತಾವಸ್ಥೆಯಲ್ಲಿ ಹೊಂಚುಹಾಕಿ ಕೊಂಡಿರುತ್ತದೆ. ಮಾನಸಿಕ ಒತ್ತಡ, ಸೋಂಬೇರಿತನ, ಅತಿಯಾಗಿ ತಿನ್ನುವುದು, ಬೊಜ್ಜು ಬೆಳೆಸಿಕೊಳ್ಳುವುದು... ಇಂತಹ ನೆಪಗಳು ಸಿಕ್ಕಿದೊಡನೆಯೇ ಪ್ರತ್ಯಕ್ಷವಾಗಿ ಬಿಡುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಸಕ್ಕರೆ ಕಾಯಿಲೆ ನಮ್ಮ ತಪ್ಪು ಜೀವನ ಶೈಲಿಯಿಂದ ಉದ್ಭವಿಸುವ ಕಾಯಿಲೆ. ಇದನ್ನು ಗೆಲ್ಲಲು ಇರುವುದೊಂದೇ ಅಸ್ತ್ರ. ನಾವು ನಮ್ಮ ಜೀವನ ಶೈಲಿಯನ್ನು ಮಾರ್ಪಡಿಸಿಕೊಳ್ಳುವುದು.
ಹದ್ದುಬಸ್ತಿನಲ್ಲಿ ಇರಿಸಿಕೊಂಡರೆ ಸಕ್ಕರೆ ಕಾಯಿಲೆ ಹಲ್ಲು ತೆಗೆದ ಹಾವಾಗುತ್ತದೆ, ಪಳಗಿಸಿದ ಸಾಧು ಹಸುವಿನಂತೆ ಆಗಿ ಬಿಡುತ್ತದೆ. ಆದರೆ ಸಕ್ಕರೆ ಕಾಯಿಲೆ ತನ್ನನ್ನು ಉಪೇಕ್ಷಿಸಿಸುವವರನ್ನು ಮಾತ್ರ ಜೀವನದುದ್ದಕ್ಕೂ ಹಿಂಡಿ ಹಿಪ್ಪೆ ಮಾಡುತ್ತದೆ. ಕೆರಳಿದ ಗೂಳಿಯಂತೆ, ಹೆಡೆ ಎತ್ತಿದ ಹಾವಿನಂತೆ ಕಾಡುತ್ತದೆ. ಮಾರಣಾಂತಿಕ ವೇದನೆಗಳನ್ನು ತಂದಿಕ್ಕುತ್ತದೆ. ಸಾವು ಬದುಕಿನ ಅಂತರವನ್ನು ಉಡುಗಿಸುತ್ತದೆ. ಬದುಕನ್ನು ಯಾತನಾಮಯ ಆಗಿಸುತ್ತದೆ. ಅದಕ್ಕೇ ಸಕ್ಕರೆ ಕಾಯಿಲೆಗೆ ಅತಿ ಕೆಟ್ಟ ಕಾಯಿಲೆ ಎಂಬ ಕುಖ್ಯಾತಿಯೂ ಇದೆ.
ಹೀಗಾಗಿ ಸಕ್ಕರೆ ಕಾಯಿಲೆಯನ್ನು ಸ್ನೇಹಿತನನ್ನಾಗಿ ಮಾಡಿಕೊಳ್ಳುವ, ಇಲ್ಲವೇ ವೈರಿಯನ್ನಾಗಿಸಿಕೊಳ್ಳುವ ರಿಮೋಟ್ ಕಂಟ್ರೋಲ್ ನಿಮ್ಮ ಕೈಯಲ್ಲೇ ಇದೆ.
ದಿನಾಚರಣೆ ಯಾಕೆ?
ನವೆಂಬರ್ 14 ಮಧುಮೇಹಕ್ಕೆ ಸಂಜೀವಿನಿಯಾದ ಇನ್ಸುಲಿನ್ ಅನ್ನು ಕಂಡುಹಿಡಿದ ಕೆನಡಾದ ಫ್ರೆಡರಿಕ್ ಬ್ಯಾಂಟಿಂಗ್ನ ಜನ್ಮದಿನ. ಹೀಗಾಗಿ ಈ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ ಮೇರೆಗೆ `ವಿಶ್ವ ಮಧುಮೇಹ ದಿನ~ವನ್ನಾಗಿ ಆಚರಿಸಲಾಗುತ್ತಿದೆ.
ಲಕ್ಷಣಗಳು ಹೀಗಿರಬಹುದು
ವಿಪರೀತ ಸುಸ್ತಾಗುವುದು
ಅತಿಯಾದ ಬಾಯಾರಿಕೆ
ಪದೇ ಪದೇ ಮೂತ್ರ ವಿಸರ್ಜನೆ
ಮತ್ತೆ ಮತ್ತೆ ಹಸಿವಾಗುವುದು
ದೇಹದ ತೂಕ ಗಣನೀಯವಾಗಿ ಇಳಿಯುವುದು
ಮತ್ತೆ ಮತ್ತೆ ಮೂತ್ರ ಮಾಡಲು ಹೋಗುವುದು
ಆದ ಗಾಯಗಳು ಬೇಗ ಮಾಯದಿರುವುದು
ಮಧುಮೇಹದಿಂದ ಬಳಲುತ್ತಿರುವವರಿಗೆ ಇಂತಹ ಅನೇಕ ಚಿಹ್ನೆಗಳು ಕಾಣಿಸಿಕೊಳ್ಳಬಹುದು. ಆದರೆ ಈ ಎಲ್ಲ ಚಿಹ್ನೆಗಳು ಎಲ್ಲರಲ್ಲೂ ಕಾಣಿಸಿಕೊಳ್ಳದೆಯೂ ಇರಬಹುದು. ಕೇವಲ ಒಂದೋ ಎರಡೋ ಚಿಹ್ನೆಗಳು ಕಾಣಿಸಿಕೊಂಡರೂ ಅವರಿಗೆ ಮಧುಮೇಹ ಇದೆಯೋ ಇಲ್ಲವೋ ಎಂದು ಪರೀಕ್ಷಿಸಬೇಕಾಗುತ್ತದೆ. ತೂಕದ ಇಳಿಯುವಿಕೆಯನ್ನು `ಏನೋ ಜ್ವರ ಬಂದಿತ್ತು~, `ಈ ವಾರ ಊಟ ಸೇರಲಿಲ್ಲ ಅಷ್ಟೆ~, `ಸ್ವಲ್ಪ ಜಾಸ್ತಿ ಕೆಲಸ ಮಾಡಿದ್ನಲ್ಲಾ~ ಎಂಬಂತಹ ನೆಪಗಳಿಂದ /ನಿಮ್ಮನ್ನಷ್ಟೇ ಸಮಾಧಾನಗೊಳಿಸಬಲ್ಲ ತಪ್ಪು ಕಾರಣಗಳಿಂದ ನಿರ್ಲಕ್ಷಿಸಬೇಡಿ.
ಮಧುಮೇಹ ಬಾರದಿರಲು...
ನಡಿಗೆ, ಜಾಗಿಂಗ್, ಯೋಗಾಸನದಂತಹ ನಿಯಮಿತ ವ್ಯಾಯಾಮ
ಜಂಕ್ ಫುಡ್, ಕೊಬ್ಬು- ಸಕ್ಕರೆ ಅಂಶ ಹೆಚ್ಚಿರುವ, ಕಡಿಮೆ ಶಕ್ತಿ ನೀಡುವ ಆಹಾರ ತ್ಯಜಿಸಿ
ನಿಮ್ಮ ತೂಕ ಮತ್ತು ಸೊಂಟ, ಹೊಟ್ಟೆಯ ಸುತ್ತಳತೆ ಪರೀಕ್ಷಿಸಿಕೊಳ್ಳಿ
35 ವರ್ಷದ ಮೇಲೆ ವರ್ಷಕ್ಕೊಮ್ಮೆ ವೈದ್ಯರಿಂದ ತಪಾಸಣೆ, ರಕ್ತಪರೀಕ್ಷೆ ಮಾಡಿಸಿ
ದೂರ ಇರಿ
ಮಧುಮೇಹಿಗಳು ದೂರ ಇರಿಸಬೇಕಾದ ಆಹಾರ ಪದಾರ್ಥಗಳು: ಸಕ್ಕರೆ, ಬೆಲ್ಲ, ಗ್ಲೂಕೋಸ್, ಜೇನುತುಪ್ಪ, ಸಿಹಿ ತಿಂಡಿ, ಸಿಹಿ ಊಟ, ಚಾಕೊಲೇಟ್, ಸಿಹಿ ಬಿಸ್ಕತ್, ಸಕ್ಕರೆ ಅಥವಾ ಬೆಲ್ಲದಿಂದ ತಯಾರಿಸಿದ ಚಹಾ, ಕಾಫಿ , ಜಾಮ್, ಜೆಲ್ಲಿ, ಕೇಕ್, ಐಸ್ಕ್ರೀಮ್, ಬಾಟಲಿಯಲ್ಲಿ ದೊರೆಯುವ ಸಿಹಿ ಪೇಯಗಳು.
ಮಿತಿ ಇರಲಿ
ಅಕ್ಕಿ, ರಾಗಿ, ಜೋಳ, ಗೋಧಿ, ನವಣೆ ಮತ್ತಿತರ ಧಾನ್ಯಗಳು
ಎಲ್ಲ ರೀತಿಯ ಬೇಳೆ ಕಾಳುಗಳು
ಎಣ್ಣೆ, ಬೆಣ್ಣೆ, ತುಪ್ಪ, ಕೊಬ್ಬು
ಹಾಲು, ಮಾಂಸ, ಮೊಟ್ಟೆ, ಮೀನು
ಆಲೂಗೆಡ್ಡೆ, ಒಣಕೊಬ್ಬರಿ, ಶೇಂಗಾ, ಗೆಣಸು
ಬಾಳೆಹಣ್ಣು, ದಾಳಿಂಬೆ, ಮಾವು, ಸಪೋಟ, ಹಲಸು ಮುಂತಾದ ಹೆಚ್ಚು ಸಿಹಿಯ ಹಣ್ಣುಗಳು
ಕುರುಕಲು ತಿಂಡಿ ತಿನಿಸು (ಕರಿದ ಪದಾರ್ಥಗಳು)
ದ್ರಾಕ್ಷಿ ಗೋಡಂಬಿ, ಉತ್ತುತ್ತೆ, ಖರ್ಜೂರ ಮುಂತಾದ ಒಣ ಹಣ್ಣುಗಳು
ಧಾರಾಳವಾಗಿ ಸೇವಿಸಿ
ಸೊಪ್ಪು, ತರಕಾರಿ, ಮೊಳಕೆ ಕಾಳುಗಳು, ನಿಂಬೆ ಹಣ್ಣಿನ ರಸ, ನೀರು ಮಜ್ಜಿಗೆ, ನೀರು ಹಾಲು, ಸಕ್ಕರೆ ರಹಿತ ಕಾಫಿ , ಚಹಾ.
ಮಧುಮೇಹಿಗಳು ದೂರ ಇರಿಸಬೇಕಾದ ಆಹಾರ ಪದಾರ್ಥಗಳು: ಸಕ್ಕರೆ, ಬೆಲ್ಲ, ಗ್ಲೂಕೋಸ್, ಜೇನುತುಪ್ಪ, ಸಿಹಿ ತಿಂಡಿ, ಸಿಹಿ ಊಟ, ಚಾಕೊಲೇಟ್, ಸಿಹಿ ಬಿಸ್ಕತ್, ಸಕ್ಕರೆ ಅಥವಾ ಬೆಲ್ಲದಿಂದ ತಯಾರಿಸಿದ ಚಹಾ, ಕಾಫಿ , ಜಾಮ್, ಜೆಲ್ಲಿ, ಕೇಕ್, ಐಸ್ಕ್ರೀಮ್, ಬಾಟಲಿಯಲ್ಲಿ ದೊರೆಯುವ ಸಿಹಿ ಪೇಯಗಳು.
ನಾವು ಸೇವಿಸುವ ಎಲ್ಲ ರೀತಿಯ ಆಹಾರವೂ ರಕ್ತದ ಸಕ್ಕರೆ ಪ್ರಮಾಣವನ್ನು ಏರಿಸುತ್ತದೆ. ಆದರೆ, ಸಂಸ್ಕರಿತ ಆಹಾರಕ್ಕಿಂತ ನಾರಿನ ಅಂಶವಿರುವ ನೈಸರ್ಗಿಕ ಆಹಾರ, ದ್ರವರೂಪದ ಆಹಾರಕ್ಕಿಂತ ಘನರೂಪದ ಆಹಾರ, ಬೇಯಿಸಿದ ಆಹಾರಕ್ಕಿಂತ ಬೇಯಿಸದ ಪದಾರ್ಥ ರಕ್ತದ ಸಕ್ಕರೆಯನ್ನು ನಿಧಾನವಾಗಿ ಏರಿಸುತ್ತದೆ.
ಇಗೊಳ್ಳಿ ಒಂದಷ್ಟು ಟಿಪ್ಪಣಿ
1. ಒಮ್ಮೆ ಇನ್ಸುಲಿನ್ ತೆಗೆದುಕೊಂಡರೆ ಆಜೀವ ಪರ್ಯಂತ ಅದನ್ನು ತೆಗೆದುಕೊಳ್ಳಲೇಬೇಕು ಎಂಬ ಅಭಿಪ್ರಾಯ ಹಲವರಲ್ಲಿದೆ. ಎಷ್ಟೋ ಸಂದರ್ಭಗಳಲ್ಲಿ ರೋಗಿಗೆ ಇನ್ಸುಲಿನ್ ಅನ್ನು ಮಧ್ಯದಲ್ಲೇ ನಿಲ್ಲಿಸಬಹುದು
2. ಇನ್ಸುಲಿನ್ ತೆಗೆದುಕೊಂಡರೆ ಅದು ರೋಗದ ಕೊನೇ ಹಂತ ಎಂದುಕೊಳ್ಳುತ್ತಾರೆ. ಆದರೆ ರೋಗಕ್ಕೆ ಅನುಸಾರವಾಗಿ ವೈದ್ಯರು ಇನ್ಸುಲಿನ್ ನೀಡುತ್ತಾರೆ. ಆದ್ದರಿಂದ ಅದು ಖಂಡಿತಾ ಕೊನೆಯ ಹಂತವಲ್ಲ
3. ಮಧುಮೇಹದವರು ಅನ್ನ ಸೇವಿಸಲೇಬಾರದು ಎಂಬುದು ಕೂಡ ತಪ್ಪು ಕಲ್ಪನೆ. ನಿಯಮಿತವಾಗಿ ಅನ್ನವನ್ನು ಸೇವಿಸಬಹುದು
4. ಸಕ್ಕರೆ ಮತ್ತು ಬೆಲ್ಲ ಎರಡರಲ್ಲೂ ಸಿಹಿ ಅಂಶ ಇರುವುದರಿಂದ ಎರಡರ ಸೇವನೆಯೂ
ನಿಷಿದ್ಧ
5. ಜೇನುತುಪ್ಪವನ್ನು ಮಧುಮೇಹಿಗಳು ಸೇವಿಸಬಾರದು
6. ಬೆಳಿಗ್ಗೆ ಎದ್ದ ಕೂಡಲೇ ತಲೆನೋವು ಕಾಣಿಸಿಕೊಂಡರೆ ಕೆಲ ಸಂದರ್ಭಗಳಲ್ಲಿ ಅದು ಲೋ ಬ್ಲಡ್ ಶುಗರ್ ಚಿಹ್ನೆ ಆಗಿರಬಹುದು
7. ಮೆಂತ್ಯ, ಗೋರಿಕಾಯಿ, ಹಾಗಲಕಾಯಿ ಮುಂತಾದವುಗಳ ಸೇವನೆ ಒಳ್ಳೆಯದು
8. ಮನೆಯ ಹೊರಗೆ ಬರಿಗಾಲಿನಲ್ಲಿ ಎಂದೂ ನಡೆದಾಡಬಾರದು. ಪಾದ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕು
9. ಒಮ್ಮೆ ವೈದ್ಯರು ಬರೆದುಕೊಟ್ಟ ಮಾತ್ರೆಗಳನ್ನು ಕೆಲ ದಿನಗಳ ನಂತರ ಮತ್ತೆ ವೈದ್ಯರ ಸಲಹೆ ಪಡೆದು ಬದಲಿಸಿದರೆ ಒಳಿತು
10. ರಕ್ತಪರೀಕ್ಷೆಯ ದಿನವೂ ಎಂದಿನಂತೆ ಮಧುಮೇಹದ ಔಷಧಗಳನ್ನು ಸೇವಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.