ಹಕೀಂ ಅಜ್ಮಲ್ ಖಾನ್ ಅವರ 151ನೇ ಜನ್ಮದಿನಾಚರಣೆ ಅಂಗವಾಗಿ ನಗರದಲ್ಲಿ ಫೆ.10 ಮತ್ತು 11ರಂದು ಯುನಾನಿ ಉತ್ಸವ ಸಂಘಟಿಸಲಾಗಿದೆ. ಸುಮಾರು 4,750 ವರ್ಷಗಳಿಂದ ಜಗತ್ತಿನೆಲ್ಲೆಡೆ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿರುವ ಪದ್ಧತಿ ಇದು.
ಗ್ರೀಸ್ ದೇಶದಲ್ಲಿ ಆರಂಭವಾದ ಚಿಕಿತ್ಸಾ ಪದ್ಧತಿ ಇದಾಗಿದ್ದು, ಮನುಷ್ಯನ ವಾತ, ಪಿತ್ಥ, ಕಫ ಮತ್ತು ರಕ್ತವನ್ನು ಗಮನಿಸಿ ದೇಹವನ್ನು ಸಮಗ್ರವಾಗಿ ಪರಿಗಣಿಸಿ ಇಲ್ಲಿ ಔಷಧಿ ಕೊಡಲಾಗುತ್ತದೆ ಎಂಬ ವಿವರಣೆ ನಗರದ ಸರ್ಕಾರಿ
ಯುನಾನಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಜೀಲಾನಿ ಅವರದು. ದೀರ್ಘ ಕಾಲೀನ ವ್ಯಾಧಿಗಳು, ನರರೋಗಗಳು, ವೃದ್ಧಾಪ್ಯದಲ್ಲಿ ಬರುವ ರೋಗಗಳು, ಆಟೊ ಇಮ್ಯೂನ್ ರೋಗಗಳು, ಚರ್ಮ ರೋಗ ಇದ್ದಾಗ ಅತ್ಯುತ್ತಮ ಚಿಕಿತ್ಸೆ ಇಲ್ಲಿ ಲಭಿಸುತ್ತದೆ ಎನ್ನುತ್ತಾರೆ ಇದೇ ಕಾಲೇಜಿನ ಡಾ.ನೈಲಾ.
ರೋಗಿಯ ರೋಗಗ್ರಸ್ತ ಭಾಗವನ್ನಷ್ಟೇ ಪರಿಗಣಿಸದೆ ದೇಹ, ಆತ್ಮ ಮತ್ತು ಮನಸ್ಸಿನ ಸ್ಥಿತಿಗತಿಗೆ ಅನುಗುಣವಾಗಿ ಚಿಕಿತ್ಸೆ ಕೊಡುವ ವಿಭಿನ್ನ ಪದ್ಧತಿ ಇದು ಎನ್ನುತ್ತಾರೆ ಪ್ರೊ.ಫಯಾಜ್ ಅಹ್ಮದ್ ಷರೀಫ್. ರೋಗಿಯ ಪ್ರಕೃತಿ ಸ್ವಭಾವ (ಮಿಜಾಜ್), ರೋಗ ನಿರೋಧಕ ಶಕ್ತಿ (ತಬಿಯತ್), ರೋಗ ಪರೀಕ್ಷೆ (ಮರ್ಜ್) ಮೊದಲಾದವುಗಳನ್ನು ಪರಿಗಣಿಸಿ ಸಸ್ಯೌಷಧಿ, ಖನಿಜಯುಕ್ತ ಔಷಧಿ ಅಥವಾ ಕನಿಷ್ಠ ಸಂದರ್ಭದಲ್ಲಿ ಪ್ರಾಣಿಜನ್ಯ ಔಷಧಿ ಕೊಡಲಾಗುತ್ತದೆ ಎಂದು ಪ್ರೊ.ಸಯೀದ್ ವಿವರಣೆ.
ಇಲ್ಲಿ ನಾನಾ ವಿಧದ ಚಿಕಿತ್ಸಾ ಕ್ರಮಗಳಿವೆ. ಇಲಾಜ್–ಬಿತ್–ತದ್ಬೀರ್ (ಪಥ್ಯ ಕ್ರಮ), ಇಲಾಜ್– ಬಿದ್–ದವಾ (ಔಷಧ ಕ್ರಮ) ಇವು ಪ್ರಮುಖವಾದವು ಎಂದು ಇದೇ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಮಲ್ಲೇಶ್ ಗೌಡ ತಿಳಿಸುತ್ತಾರೆ.
ಉತ್ಸವದ ಸ್ಥಳ ಮತ್ತು ದಿನಾಂಕ ಫೆ.10 ಮತ್ತು 11 (ಬೆಳಿಗ್ಗೆ 10ರಿಂದ 5)
ಜ್ಞಾನ ಜ್ಯೋತಿ ಸಭಾಂಗಣ ಸೆಂಟ್ರಲ್ ಕಾಲೇಜು ಆವರಣ ಗಾಂಧಿನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.