ADVERTISEMENT

ಕೊಲ್ಲೂರು ದಾರಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 12:50 IST
Last Updated 19 ಜನವರಿ 2011, 12:50 IST

ಕೊಲ್ಲೂರು ಉಡುಪಿಯಿಂದ 81 ಕಿಮೀ ದೂರದಲ್ಲಿದೆ. ಮಂಗಳೂರಿನಿಂದ ರೈಲು ಮೂಲಕ ಬರುವವರು ಬೈಂದೂರು ನಿಲ್ದಾಣದಲ್ಲಿ ಇಳಿದು ಬಸ್ಸಿನಲ್ಲಿ ಕೊಲ್ಲೂರಿಗೆ ಹೋಗಬಹುದು. ರಾಜ್ಯ ಸಾರಿಗೆ ಸಂಸ್ಥೆಯ ಮತ್ತು ಖಾಸಗಿ ಬಸ್‌ಗಳ ಸೌಲಭ್ಯವಿದೆ.ಉಡುಪಿ ಸರ್ವಿಸ್ ಬಸ್ ನಿಲ್ದಾಣ, ಕುಂದಾಪುರ ಬಸ್ ನಿಲ್ದಾಣಗಳಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಕೊಲ್ಲೂರಿಗೆ ಬಸ್ಸುಗಳಿವೆ. ಮಂಗಳೂರು, ಉಡುಪಿ
ಗಳಿಂದ ಟ್ಯಾಕ್ಸಿ ಸೌಲಭ್ಯವಿದೆ.  

ದೇವಸ್ಥಾನದಲ್ಲಿ ನಿತ್ಯ ನಾಲ್ಕು ಪೂಜೆಗಳು ನಡೆಯುತ್ತವೆ. ಪ್ರದೋಷ ಕಾಲದಲ್ಲಿ ಮಾಡುವ ಪೂಜೆಗೆ ‘ಸಲಾಂ ಮಂಗಳಾರತಿ’ ಎಂಬ ಹೆಸರಿದೆ.ನವರಾತ್ರಿ ಸಂದರ್ಭದಲ್ಲಿ ಒಂಬತ್ತು ದಿನಗಳೂ ದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ಕೊಲ್ಲೂರಿಗೆ ಬರುವವರ ಸಂಖ್ಯೆ ಹೆಚ್ಚು. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ  ವಾರ್ಷಿಕ ಉತ್ಸವ ನಡೆಯುತ್ತದೆ. ಹತ್ತನೆಯ ದಿನ ಬ್ರಹ್ಮ ರಥೋತ್ಸವ ನಡೆಯುತ್ತದೆ.ಕೊಲ್ಲೂರಿಗೆ ಬರುವ ಭಕ್ತರಿಗೆ ದೇವಸ್ಥಾನದ ವತಿಯಿಂದ ಉಚಿತ ಊಟದ ವ್ಯವಸ್ಥೆ ಇದೆ. ಈ ವ್ಯವಸ್ಥೆ ದಾನಿಗಳು ಮತ್ತು ಭಕ್ತರ ನೆರವಿನಿಂದ ನಡೆಯುತ್ತದೆ.
 
ಒಂದು ಹೊತ್ತಿನ ಅನ್ನ ಸಂತರ್ಪಣೆಗೆ ಹದಿನೈದು ಸಾವಿರ ರೂಪಾಯಿ ಕೊಡಬೇಕು. ಅನೇಕ ಭಕ್ತರು ಅನ್ನ ಸಂತರ್ಪಣೆ ಸೇವೆ ಮಾಡಿಸುತ್ತಾರೆ.ಉಳಿದಂತೆ ಐದು ರೂಪಾಯಿಗಳ ಕರ್ಪೂರದ ಅರ್ಚನೆಯಿಂದ ಹಿಡಿದು ಸುಮಾರು 52 ಸೇವೆಗಳು ಇಲ್ಲಿ ನಡೆಯುತ್ತವೆ.ಈ ಸೇವೆಗೆ ನೀಡಬೇಕಾದ ಶುಲ್ಕ ಮತ್ತಿತರ ಮಾಹಿತಿಗಳನ್ನು ದೇವಸ್ಥಾನದ ಕಚೇರಿಯಲ್ಲಿ ಪಡೆಯಬಹುದು.

ವಿಶೇಷ ಪೂಜೆಗಳು: ದೇವಸ್ಥಾನ ಬೆಳಿಗ್ಗೆ 5 ಗಂಟೆಗೆ ತೆರೆಯುತ್ತದೆ. ನಂತರ ನಿರ್ಮಾಲ್ಯ ಪೂಜೆ, ಅಭಿಷೇಕ, ಹೂವಿನ ಅಲಂಕಾರ, ಮಹಾಪೂಜೆ ಇತ್ಯಾದಿ ಸೇವೆಗಳು ನಡೆಯುತ್ತವೆ. ಬೆಳಿಗ್ಗೆ 11ಕ್ಕೆ ಪೂಜೆ ಮುಕ್ತಾಯವಾಗುತ್ತದೆ. ಮಧ್ಯಾಹ್ನ 1 ಗಂಟೆಗೆ ಮಹಾ ಮಂಗಳಾರತಿ. 1.30ರ ನಂತರ 3 ಗಂಟೆವರೆಗೆ ಗರ್ಭಗುಡಿ ಬಾಗಿಲು ಮುಚ್ಚುತ್ತಾರೆ. ಸಂಜೆ 6 ಗಂಟೆಯಿಂದ ಮತ್ತೆ ಪೂಜಾ ಕೈಂಕರ್ಯಗಳು ಪ್ರಾರಂಭ. 7 ಗಂಟೆಗೆ ಪ್ರದೋಷ ಪೂಜೆ ನಡೆಯುತ್ತದೆ. ರಾತ್ರಿ 9ಕ್ಕೆ ದೇವರ ದರ್ಶನಕ್ಕೆ ತೆರೆ ಬೀಳುತ್ತದೆ.

ಚಂಡಿಕಾ ಹೋಮ ಮಾಡಿಸುವವರು ಮೊದಲೇ ದಿನ ನಿಗದಿ ಮಾಡಿಕೊಳ್ಳಬೇಕು. ಇದಕ್ಕೆ ಮೂರು ಸಾವಿರ ರೂಪಾಯಿ ಶುಲ್ಕವಿದೆ. ಚಂಡಿಕಾ ಹೋಮ ಮಾಡಿಸುವವರು ದೇವಸ್ಥಾನದ ಕಚೇರಿಯಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಪ್ರಸಾದ ವಿತರಣೆ  
ಮಹಾ ಮಂಗಳಾರತಿ ಮುಗಿದ ನಂತರ ದೇವಸ್ಥಾನದ ಪ್ರಸಾದ ನಿಲಯದಲ್ಲಿ 2.30ರವರೆಗೆ ಮತ್ತು ರಾತ್ರಿ 7.30ರಿಂದ 9.30ರವರೆಗೂ ಭೋಜನ ವ್ಯವಸ್ಥೆ ಇದೆ.

ವಸತಿ ಸೌಕರ್ಯ
ತಂಗಲು ಲಲಿತಾಂಬ, ಸೌಪರ್ಣಿಕಾ ಇತ್ಯಾದಿ ದೇವಸ್ಥಾನದ ವಸತಿ ಗೃಹಗಳಿವೆ. ಅಲ್ಲದೆ ಸ್ವರ್ಣಾಂಬಿಕಾ ಛತ್ರ ಹಾಗೂ ಹಲವು ಖಾಸಗಿ ವಸತಿ ಗೃಹಗಳಿವೆ. ಮಾತಾ ಛತ್ರ (ಮಠದ ಗೆಸ್ಟ್‌ಹೌಸ್)ಗಳಿಗೆ ಸಂಪರ್ಕಿಸಬೇಕಾದ ದೂರವಾಣಿ 08254- 258328/89. ಕೊಲ್ಲೂರಿನಲ್ಲಿ ಕೆಲವು ಸಣ್ಣ ಪುಟ್ಟ ಸಸ್ಯಾಹಾರಿ ಹೋಟೆಲ್‌ಗಳಿವೆ.

ಅಮ್ಮನ ಸನ್ನಿಧಿಯಲ್ಲಿ ಮದುವೆ
ಮೂಕಾಂಬಿಕಾ ಅಮ್ಮನ ಸನ್ನಿಧಿಯಲ್ಲಿಯೇ ಮಕ್ಕಳ ಮದುವೆ ಮಾಡಬೇಕು ಎಂಬ ಸಂಕಲ್ಪ ಮಾಡಿಕೊಂಡವರಿಗೆ ದೇವಸ್ಥಾನದಲ್ಲಿ ಮದುವೆಗೆ ಅವಕಾಶವಿದೆ. ಕೊಲ್ಲೂರಿನಲ್ಲಿ ಲಭ್ಯವಿರುವ ಪುರೋಹಿತರಿಂದ ಮದುವೆಗೆ ವ್ಯವಸ್ಥೆ ಮಾಡಿಸಿಕೊಳ್ಳಬೇಕು.ಗರ್ಭ ಗುಡಿಎದುರು ಮಾಂಗಲ್ಯ ಧಾರಣೆಗೆ ಅವಕಾಶವಿದೆ. ಮದುವೆಯ ಉಳಿದ ಶಾಸ್ತ್ರಗಳನ್ನು ಮಾಡಲು ಬಯಸುವವರಿಗೆ ಎರಡು ಕಲ್ಯಾಣ ಮಂಟಪಗಳಿವೆ.ಮೂಕಾಂಬಿಕಾ ಸಭಾ (ಕಲ್ಯಾಣ ಮಂಟಪ) ಭವನಕ್ಕೆ ರೂ 10 ಸಾವಿರ ಬಾಡಿಗೆ ಹಾಗೂ ಸರ್ವಮಂಗಳ ಕಲ್ಯಾಣ ಮಂಟಪಕ್ಕೆ ಮೂರು ಸಾವಿರ ಬಾಡಿಗೆ ಇದೆ.

ಮೂಕಾಂಬಿಕಾ ದೇವಸ್ಥಾನದ ದೂರವಾಣಿ ಸಂಖ್ಯೆ: 08254- 258521/ 258221/258328/89/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.