ADVERTISEMENT

ಚಿಕ್ಕಕಲ್ಲಸಂದ್ರದ ಗರುಡಗಂಬ

ರಮೇಶ ಕೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಸುಮಾರು 250 ವರ್ಷಗಳ ಹಿಂದೆ ಪ್ರತಿಷ್ಠಾಪಿಸಿದ ಗರುಡ ಕಂಬದ ಸುತ್ತ ಈಗ ಸುಂದರ ದೇವಾಲಯ ನಿರ್ಮಾಣವಾಗಿದೆ. ಇದೇನು ಉದ್ಭವವಾದ ಗುಡಿಯಲ್ಲ. ಸ್ಥಳೀಯ ಭಕ್ತಾದಿಗಳು ಸ್ವಂತ ಖರ್ಚಿನಲ್ಲಿ ಕಟ್ಟಿಸಿದ ಸುಂದರ ದೇವಾಲಯ.

ಬೆಂಗಳೂರಿನ ಚಿಕ್ಕಕಲ್ಲಸಂದ್ರದಲ್ಲಿ ಮಾ.29ರಂದು ಪ್ರಸನ್ನ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಅದಕ್ಕಾಗಿ ಗ್ರಾಮಸ್ಥರೇ ಸೇರಿ ಐವತ್ತು ಲಕ್ಷ ರೂ ವೆಚ್ಚದಲ್ಲಿ ಕಟ್ಟಿಸಿರುವ ಸುಂದರ ದೇವಾಲಯ ಉದ್ಘಾಟನೆಗೆ ಸಿದ್ಧವಾಗಿದೆ.

ದೇವಾಲಯ ನಿರ್ಮಾಣಕ್ಕೆ ಒಂದು ಹಿನ್ನೆಲೆ ಇದೆ. 250 ವರ್ಷಗಳ ಹಿಂದೆ ಜಮೀನ್ದಾರರಾಗಿದ್ದ ಅಪ್ಪಯ್ಯಣ್ಣ, ಹನುಮಂತೇಗೌಡ ಹಾಗೂ ಜೋಗೇ ಗೌಡರು ಆಂಜನೇಯನ ಪ್ರತಿಕೃತಿಯನ್ನು ಒಳಗೊಂಡ ಗರುಡ ಕಂಬವನ್ನು ಪ್ರತಿಷ್ಠಾಪಿಸಿದ್ದರು. ಅಂದಿನಿಂದ ಆ ಗರುಡ ಕಂಬಕ್ಕೆ ನಿತ್ಯ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ ಅಲ್ಲಿ ಯಾವ ದೇವಸ್ಥಾನವೂ ಇರಲಿಲ್ಲ. ಇಂದು ಈ ಸ್ಥಳ ಚಿಕ್ಕಕಲ್ಲಸಂದ್ರ ಬೆಂಗಳೂರು ಎಂಬ ಮಹಾನಗರಿಯಲ್ಲಿ ಬಡಾವಣೆಯಾಗಿ ಹೆಸರಾಗಿದೆ.

ಇಲ್ಲಿನ ಗ್ರಾಮಸ್ಥರು ಶ್ರೀ ಆಂಜನೇಯ ದೇವರ ದರ್ಶನಕ್ಕಾಗಿ ಸುತ್ತಮುತ್ತಲಿನ ಬಡಾವಣೆಗಳಿಗೆ ಹೋಗಬೇಕಾದ ಅನಿವಾರ್ಯವಾಗಿತ್ತು. ಈ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ಚಿಕ್ಕಕಲ್ಲಸಂದ್ರದ ಗ್ರಾಮಸ್ಥರೆಲ್ಲಾ ಒಟ್ಟಾಗಿ ಗರುಡ ಕಂಬವಿದ್ದ ಪವಿತ್ರ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡುವ ಕೈಂಕರ್ಯಕ್ಕೆ ಮುಂದಾದರು. ಈಗ ದೇವಾಲಯ ಸಿದ್ಧವಾಗಿದೆ.

ದೇವಸ್ಥಾನದ ಗೋಪುರ ಕೆಲಸವನ್ನು ತಮಿಳುನಾಡಿನ ಕಲಾವಿದರು ಪೂರೈಸಿದ್ದಾರೆ. 29ರಂದು ಪ್ರತಿಷ್ಠಾಪಿಸಲಿರುವ ನಾಲ್ಕುವರೆ ಅಡಿ ಎತ್ತರದ ಶ್ರೀ ಆಂಜನೇಯ ವಿಗ್ರಹವನ್ನು ಕಂಚಿಯಿಂದ ತರಿಸಲಾಗುತ್ತಿದೆ. ಜತೆಗೆ ಆಂಜನೇಯನ ವಿಗ್ರಹದ ಬಲಭಾಗಕ್ಕೆ ಗಣೇಶ ಹಾಗೂ ಎಡಬದಿಗೆ ಸತ್ಯನಾರಾಯಣ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ  ಎನ್ನುತ್ತಾರೆ ಚಿಕ್ಕಕಲ್ಲಸಂದ್ರದ ಚಿಕ್ಕರಾಮು.

ಎರಡು ತಲೆಮಾರುಗಳಿಗಿಂತಲೂ ಹಿಂದೆ ಪ್ರತಿಷ್ಠಾಪಿಸಿದ್ದ ಗರುಡಕಂಬದ ಎದರು ಇಂದು ಸುಂದರ ದೇವಾಲಯ ನಿರ್ಮಾಣವಾಗಿದೆ.

29ರಂದು ಪ್ರತಿಷ್ಠಾಪನೆ
ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ಕಟ್ಟಡ, ವಿಮಾನ ಗೋಪುರ ಉದ್ಘಾಟನೆ, ಕುಂಭಾಭಿಷೇಕ ಮಹೋತ್ಸವ.

ಮಂಗಳವಾರ (ಮಾ.27) ದಿಂದ ಗುರುವಾರ (ಮಾ.29)ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಗುರುವಾರ (ಮಾ.29) ಬೆಳಿಗ್ಗೆ 7.30ರಿಂದ ಪ್ರಸನ್ನ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ಆರಂಭವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.