ADVERTISEMENT

ಭಾವೈಕ್ಯದ ನೆಲೆವೀಡು

ಎನ್.ಡಿ.ಹೆಗಡೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST
ಭಾವೈಕ್ಯ ಸಾರುವ ಗಣೇಶ ದೇಗುಳ
ಭಾವೈಕ್ಯ ಸಾರುವ ಗಣೇಶ ದೇಗುಳ   

ಒಂದು ಪಕ್ಕದಲ್ಲಿ ಗಣೇಶ ದೇವಾಲಯ, ಇನ್ನೊಂದು ಪಕ್ಕದಲ್ಲಿ ಮಸೀದಿ. ಹೀಗೆ ಭಾವೈಕ್ಯದ ಮನೋಭಾವ ಸ್ಫುರಿಸುವಂತೆ ತಲೆ ಎತ್ತಿ ನಿಂತಿದೆ ಎರಡು ಧರ್ಮದ ಪ್ರಾರ್ಥನಾ ಮಂದಿರ. ಅಪರೂಪ ಎನ್ನಬಹುದಾದ, ಏಕತೆಯನ್ನು ಸಾರುವ ಇಂಥ ಅಪೂರ್ವ ದೇವಮಂದಿರ ಇರುವುದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ.

1635ರ ಸುಮಾರಿನಲ್ಲಿ ವಿಜಾಪುರದ ಆದಿಲ್ ಷಾಹಿಗಳು ದಾಳಿ ನಡೆಸಿದ ಪರಿಣಾಮವಾಗಿ ದೇಗುಲದ ಪಕ್ಕದಲ್ಲೇ ಮಸೀದಿ ನಿರ್ಮಾಣವಾಗಲು ಕಾರಣವಾಯಿತು. ಬೇರೆ ಬೇರೆ ಸಂದರ್ಭದಲ್ಲಿ ದೇಶದ ನಾನಾ ಕಡೆ ಕೋಮು ಗಲಭೆಗಳು ತಾಂಡವವಾಡಿ ಶಾಂತಿ ಸೌಹಾರ್ದತೆ ಕದಡಿದ್ದರೂ ಸಹ ಇಲ್ಲಿ ಮಾತ್ರ ಯಾವುದೇ ಹಿಂಸೆ ನಡೆಯದಿರುವುದು ಗಮನಾರ್ಹ.

ಪೌರಾಣಿಕ ಹಿನ್ನೆಲೆ
ಕೆಳದಿ ರಾಜ ಮನೆತನದ ಅರಸ ವೆಂಕಟಪ್ಪ ನಾಯಕ ತನ್ನ ತಂದೆ ಸದಾಶಿವ ನಾಯಕನ ಹೆಸರಿನಲ್ಲಿ ಇಕ್ಕೇರಿ, ಸಿರಿವಂತೆ, ಯಲಗಳಲೆ ಮತ್ತು ಕೆಳದಿ ಸೀಮೆಗಳ ಮಧ್ಯ ಭಾಗದಲ್ಲಿ ಪಟ್ಟಣವನ್ನು ನಿರ್ಮಿಸಿ ಅದಕ್ಕೆ ಸದಾಶಿವ ಸಾಗರ ಎಂದು ಹೆಸರಿಸಿದ. ಅದೇ ಈಗಿನ ಸಾಗರ ನಗರ. ಈ ಪಟ್ಟಣದಲ್ಲಿ ರಾಮೇಶ್ವರ, ಅಮೃತೇಶ್ವರ, ಮಲ್ಲಿಕಾರ್ಜುನ ಮತ್ತು ಶಕ್ತಿಗಣಪತಿ ದೇಗುಲ ಕಟ್ಟಿಸಿದ. ಆ ಶಕ್ತಿ ಗಣಪತಿ ದೇಗುಲವೇ ಈ ಗಣಾಧೀಶ್ವರ ದೇವಾಲಯ.

ಈ ದೇವಾಲಯದ ಬಲ ಭಾಗದ ವಿಶಾಲವಾದ ಕೆರೆಯನ್ನು ಮತ್ತು ಉಪ್ಪರಿಗೆಯ ಅರಮನೆಯನ್ನು ವೆಂಕಟಪ್ಪ ನಾಯಕ ಕಟ್ಟಿಸಿದ. ಈ ಕ್ರಿ.ಶ.1545ರಲ್ಲಿ ಈ ಪಟ್ಟಣವನ್ನು ಕೇವಲ ಮೂರು ತಿಂಗಳಲ್ಲಿ ನಿರ್ಮಿಸಲಾಯಿತು ಎಂದು ಸಾಗರ ಸೀಮೆಯ ಕೈಪಿಯತ್ತುಗಳು ಎಂಬ ಗ್ರಂಥದಲ್ಲಿ ಉಲ್ಲೇಖವಿದೆ. ಕೆಳದಿ ಅರಸರು ಯುದ್ಧ, ವಿವಾಹ ಸಂಬಂಧ, ಹೊಸ ಕಟ್ಟಡ ನಿರ್ಮಾಣ ಮೊದಲಾದ ಪ್ರಮುಖ ಕಾರ್ಯಗಳಿಗೆ ಮುನ್ನ ಈ ದೇವರಿಗೆ ಪೂಜೆ ಸಲ್ಲಿಸಿಯೇ ಕಾರ್ಯ ಆರಂಭಿಸುತ್ತಿದ್ದರು ಎನ್ನುತ್ತಾರೆ ಕೆಳದಿ ಪ್ರಾಚ್ಯವಸ್ತು ಸಂಶೋಧನಾ ಕೇಂದ್ರದ ಜಿ.ವಿ.ಕಲ್ಲಾಪೂರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.