ADVERTISEMENT

ಮುತ್ಯಾಲ ಮಡು

ಕೆ.ಶಿವಣ್ಣ
Published 25 ಮೇ 2011, 19:30 IST
Last Updated 25 ಮೇ 2011, 19:30 IST

ಆನೇಕಲ್‌ನಿಂದ ಮೂರು ಕಿ.ಮೀ. ದೂರದಲ್ಲಿರುವ ಮುತ್ಯಾಲ ಮಡು(ವು) ಸುಂದರ ನಿಸರ್ಗ ತಾಣ. ಪ್ರವಾಸೋದ್ಯಮ ಇಲಾಖೆಯ ಉಪೇಕ್ಷೆಯಿಂದಾಗಿ ಇಂದಿಗೂ ತೆರೆಮರೆಯಲ್ಲೇ ಉಳಿದಿದೆ.

300 ಅಡಿಗಳ ಎತ್ತರದಿಂದ ಬೀಳುವ ಜಲಪಾತ ಇಲ್ಲಿನ ಆಕರ್ಷಣೆ. ಹಸಿರು ರಾಶಿಯ ನಡುವಿನ ಕಣಿವೆಯಲ್ಲಿರುವ ಈ ಸ್ಥಳ ನಯನ ಮನೋಹರ. ಟಿಪ್ಪುಸುಲ್ತಾನ್ ಕಾಲದಲ್ಲಿ ನಿರ್ಮಿಸಲಾದ ವ್ಯೆ ಪಾಯಿಂಟ್ ಮೂಲಕ ವೀಕ್ಷಿಸಿದರೆ ಕಣಿವೆ ಅದ್ಭುತವಾಗಿ ಕಾಣುತ್ತದೆ. ಈ ವ್ಯೆ ಪಾಯಿಂಟ್ ಸಹ ಈಗ ಶಿಥಿಲವಾಗಿದೆ.

 ಕುರುಚಲು ಅರಣ್ಯದ ನಡುವೆ ಇರುವ ಈ ತಾಣಕ್ಕೆ ಮೆಟ್ಟಿಲು ಇಳಿದು ಹೋಗಬೇಕು. ಇಲ್ಲಿ ನಡೆಯುವುದು ಮನಸ್ಸಿಗೆ ಮುದ ನೀಡುತ್ತದೆ. ಜಲಪಾತದ ಬಳಿ ಸಾಗುತ್ತಿದ್ದಂತೆ ಪನ್ನೀರಿನಂತೆ ಬೀಳುವ ನೀರಿನ ಹನಿಗಳು ಮೇಲಿನಿಂದ ಇಳಿದುಬಂದ  ಆಯಾಸವನ್ನು ಮರೆಸುತ್ತವೆ.

ಮಳೆಗಾಲದಲ್ಲಿ ಜಲಪಾತ ಭೋರ್ಗರೆಯುತ್ತದೆ. ಉಳಿದಂತೆ ಸಣ್ಣ ತೊರೆಯಂತೆ ಕಾಣುತ್ತದೆ. ಮುತ್ತಿನೋಪಾದಿಯಲ್ಲಿ ನೀರ ಹನಿಗಳು ಧುಮ್ಮಿಕ್ಕಿ ಮಡು ಸೃಷ್ಟಿಯಾಗಿರುವುದರಿಂದ ಇದಕ್ಕೆ ಮುತ್ಯಾಲ ಮಡು ಎಂಬ ಹೆಸರು ಬಂದಿದೆ. ಇಲ್ಲಿಂದ ಸ್ವಲ್ಪದೂರ ಕಣಿವೆಯಲ್ಲಿ ಸಾಗಿದರೆ ಶಂಖಚಕ್ರದ ಜಲಪಾತ ಸಹ ನೋಡಬಹುದು.

ಪ್ರವಾಸೋದ್ಯಮ ಇಲಾಖೆ ಮುತ್ಯಾಲ ಮಡು ಅಭಿವೃದ್ಧಿಗಾಗಿ 5 ಕೋಟಿ ರೂ ವೆಚ್ಚದ ಮಾಸ್ಟರ್‌ಪ್ಲಾನ್ ರೂಪಿಸಿದೆ. ಇಲ್ಲಿ ಸುಂದರ ಉದ್ಯಾನ, ಪುಟಾಣಿ ರೈಲು, ಕಾರಂಜಿ ಮತ್ತಿತರ ಸೌಲಭ್ಯ ಕಲ್ಪಿಸಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಯೋಜನೆ ಇದೆ. ಮುತ್ಯಾಲ ಮಡು ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.