ADVERTISEMENT

ವೈಭವದ ಭೋಗೇಶ್ವರ ಜಾತ್ರೆ

ರಮೇಶ ಎಸ್.ಕತ್ತಿ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST
ದೇವರ ವೆುರವಣಿಗೆ
ದೇವರ ವೆುರವಣಿಗೆ   

ವಿಜಾಪುರ ಜಿಲ್ಲೆಯ ಕಡಣಿ ಗ್ರಾಮದ ಗ್ರಾಮ ದೇವರಾದ ಶ್ರೀ ಭೋಗೇಶ್ವರ ಜಾತ್ರೆಯು ಇದೇ ಏಪ್ರಿಲ್ 18ರಿಂದ 20ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು, ರಥೋತ್ಸವ, ಪಲ್ಲಕ್ಕಿ ಮೆರವಣಿಗೆ, ಕುಂಭ, ಹೀಗೆ ಹಲವು ಕಾರ್ಯಕ್ರಮಗಳು ಜರುಗಲಿವೆ.

18ರಂದು ಕುಂಭಾಭೀಷೇಕ, ಸಹಸ್ರ ಬಿಲ್ವಾರ್ಚನೆ, ಅನ್ನ ಸಂತರ್ಪಣೆ; 19ರ ರಾತ್ರಿ ಭೋಗೇಶ್ವರ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಜಾತ್ರೆಯ ವಿಶೇಷ. ಗುಲಬರ್ಗಾ ಜಿಲ್ಲೆಯ ಕೆಂಬಾವಿಯಲ್ಲಿ 12ನೇ ಶತಮಾನದಲ್ಲಿ ಬ್ರಾಹ್ಮಣ ಮನೆತನದಲ್ಲಿ ಜನಿಸಿದ್ದವರು ಶರಣ ಭೋಗಣ್ಣ. ಜಾತಿ, ಕಂದಾಚಾರ, ಮೂಢನಂಬಿಕೆಯನ್ನು ಮೀರಿ ನಿಂತ ಪರಿಣಾಮ ಇವರನ್ನು ರಾಜ ಗಡಿಪಾರು ಮಾಡುತ್ತಾನೆ.

ಕೆಂಬಾವಿ ತೊರೆದು ವಿಜಾಪುರ ಜಿಲ್ಲೆಯ ಭೀಮಾ ತೀರದ ತಟದ ಕಡಣಿಯಲ್ಲಿ ಬಂದು ನೆಲೆಸುತ್ತಾರೆ ಭೋಗಣ್ಣ. ಅದೇ ಸಮಯಕ್ಕೆ ಕೆಂಬಾವಿಯಲ್ಲಿ ಭೀಕರ ಬರಗಾಲ ಎದುರಾಗುತ್ತದೆ. ಕೆರೆ, ಬಾವಿ, ನೀರಿನ ಸೆಲೆಗಳು ಬತ್ತುತ್ತವೆ. ಇಡೀ ರಾಜ್ಯವೇ ಇದರಿಂದ ತತ್ತರಿಸಿದ ನಂತರ ರಾಜನಿಗೆ ತನ್ನ ತಪ್ಪಿನ ಅರಿವಾಗಿ ಪುನಃ ಕರೆಸಿ ರಾಜ ಮರ್ಯಾದೆಯನ್ನು ಮಾಡಿದನೆಂದು ತಿಳಿದುಬಂದಿದೆ.

ಕೊನೆ ದಿನಗಳನ್ನು ಭೋಗಣ್ಣ ಕಡಣಿಯ ಭೀಮಾ ತೀರದ ತಟದಲ್ಲಿ (ಕಡಣಿಯಿಂದ 1ಕಿಮೀ ದೂರ) ಕಳೆದಿದ್ದು ಅಲ್ಲಿ ದೇವಾಲಯ ನಿರ್ಮಿಸಲಾಗಿದೆ ಎನ್ನುತ್ತದೆ ಇತಿಹಾಸ. ಇದೇ ಕಾರಣಕ್ಕೆ ಪ್ರತಿ ವರ್ಷ ಯುಗಾದಿ ಅಮವಾಸ್ಯೆಯ ನಂತರದ ಏಳನೇ ದಿನದಿಂದ ಹಳೇ ಕಡಣಿಯಿಂದ ಶ್ರೀ ಭೋಗೇಶ್ವರ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆ ಮೂಲಕ ತಂದು ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನಂತರ ಭೀಮಾ ದಡದಲ್ಲಿನ ಮೂಲ ದೇವಸ್ಥಾನದಲ್ಲಿ ನೆಲೆಯಿರುತ್ತದೆ. ವರ್ಷಕ್ಕೆ ಒಂದು ಬಾರಿ ಜಾತ್ರೆಯ ನಿಮಿತ್ತ ಗ್ರಾಮ ದೇವತೆ  ಭೋಗೇಶ್ವರ ಗ್ರಾಮಕ್ಕೆ ಆಗಮಿಸುವುದರಿಂದ ಗ್ರಾಮದಲ್ಲಿ ಈಗ ಹಬ್ಬದ ಕಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT