ADVERTISEMENT

ಚೆಲುವಿನ ಬತೇರಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2012, 19:30 IST
Last Updated 2 ಜೂನ್ 2012, 19:30 IST
ಚೆಲುವಿನ ಬತೇರಿ
ಚೆಲುವಿನ ಬತೇರಿ   

ಮೈಮನಸ್ಸನ್ನು ಅರಳಿಸುವ ತಂಗಾಳಿ, ಕಣ್ಣನ್ನು ತಂಪು ಮಾಡುವ ಹಸಿರು ವನರಾಶಿ ಆ ಊರಿನ ವೈಶಿಷ್ಟ್ಯ. ಅದು ಸುಲ್ತಾನ್ ಬತೇರಿ!ಕೇರಳ ರಾಜ್ಯಕ್ಕೆ ಸೇರಿದ ವೈನಾಡು ಜಿಲ್ಲೆಯಲ್ಲಿ ಬರುವ ಸುಲ್ತಾನ್ ಬತೇರಿ ಸಮುದ್ರ ಮಟ್ಟದಿಂದ 930 ಮೀಟರ್ ಎತ್ತದಲ್ಲಿದೆ. ಅದಕ್ಕೆ ಅಲ್ಲಿ ತಂಪು ತಂಪು ವಾತಾವರಣ ಇರುವುದು. ಆರೋಗ್ಯಕರ ಹವಾಮಾನಕ್ಕೆ ಹೆಸರಾದ ಈ ಊರಿಗೆ ಸುಲ್ತಾನ್ ಬತೇರಿ ಎಂಬ ಹೆಸರು ಬರಲು ಒಂದು ಸ್ವಾರಸ್ಯಕರವಾದ ಕಾರಣವಿದೆ.

18ನೇ ಶತಮಾನದಲ್ಲಿ ಮೈಸೂರು ರಾಜ್ಯವನ್ನು ಆಳುತ್ತಿದ್ದ ಟಿಪ್ಪು ಸುಲ್ತಾನ ಇಲ್ಲೊಂದು ಫಿರಂಗಿ ಪಡೆಯನ್ನು ಇಟ್ಟಿದ್ದ. ಅಲ್ಲಿರುವ ಜೈನ ದೇವಾಲಯವನ್ನು ತನ್ನ ಫಿರಂಗಿ ಪಡೆಗಾಗಿ ಬಳಸಿಕೊಳ್ಳುತ್ತಿದ್ದ. ಇಂಗ್ಲಿಷ್‌ನಲ್ಲಿ ಫಿರಂಗಿ ಪಡೆಗೆ ಬ್ಯಾಟರಿ ಎಂಬ ಹೆಸರಿದೆ. ಅದರಿಂದ ಆ ಪ್ರದೇಶಕ್ಕೆ ಸುಲ್ತಾನ್ ಬ್ಯಾಟರಿ ಎಂಬ ಹೆಸರು ಬಂತು. ಅದೇ ಜನರ ಬಾಯಲ್ಲಿ ಅಪಭ್ರಂಶವಾಗಿ `ಸುಲ್ತಾನ್ ಬತೇರಿ~ ಆಯಿತು. ಮೈಸೂರು ಮತ್ತು ಕ್ಯಾಲಿಕಟ್ ನಗರದ ಮಧ್ಯಭಾಗದಲ್ಲಿ ಇರುವ ಈ ಊರು ದೊಡ್ಡ ಪಟ್ಟಣವಾಗಿ ಇಂದು ಬೆಳೆದಿದೆ.

ಕೇರಳದ ಪ್ರಮುಖ ವ್ಯಾಪಾರಿ ಸ್ಥಳವಾಗಿ ಅಭಿವೃದ್ಧಿಯಾಗಿರುವ ಸುಲ್ತಾನ್ ಬತೇರಿಯಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯವರೂ ಬಂದು ನೆಲೆಸಿದ್ದಾರೆ. ಅಷ್ಟು ಸಮೃದ್ಧವಾದ ನೆಲ ಇದಾಗಿದ್ದು, ಅದಕ್ಕೆ ತಕ್ಕಂಥ ಪ್ರಶಾಂತ ವಾತಾವರಣವೂ ಅಲ್ಲಿದೆ. ಅದರಿಂದ ಸಾಕಷ್ಟು ವಸತಿಗೃಹಗಳು ತಲೆ ಎತ್ತಿವೆ. ಪ್ರವಾಸಿಗರ ಸಂಖ್ಯೆಯೂ ಜಾಸ್ತಿಯಾಗಿದೆ. ಈ ತಾಣದ ವೈಶಿಷ್ಟ್ಯ ಎಂದರೆ ಗಿರಿಧಾಮದ ಸೊಗಸು ಮತ್ತು ಬಯಲು ಸೀಮೆಯ ಸೊಬಗು ಎರಡನ್ನೂ ಇಲ್ಲಿ ಕಾಣಬಹುದು. ಬೆಟ್ಟಗಳ ನಡುವೆ ನುಸುಳುವ ನದಿ, ತೊರೆಗಳಂತೂ ಹಸಿರು ಬೆಟ್ಟಗಳ ನಡುವೆ ಕಂಗೊಳಿಸುತ್ತವೆ.

ಹಸಿರು ಬೆಟ್ಟಗಳ ಸಾಲುಗಳು ಕಣ್ಣಿಗೆ ಹಬ್ಬ ನೀಡುತ್ತವೆ. ಈ ಊರಿನಲ್ಲಿ ಕಡಂಗನ ಹೆಸರಿನ ಬುಡುಕಟ್ಟು ಜನರೂ ವಾಸಿಸುತ್ತಾರೆ. ಇದು ಮೈಸೂರಿನಿಂದ 115 ಕಿ.ಮೀ, ಕೋಝಿಕೋಡ್‌ನಿಂದ 98 ಕಿ.ಮೀ, ಊಟಿಯಿಂದ 100 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.