ADVERTISEMENT

ಅಂಚೆ ಚೀಟಿಯಲ್ಲಿ ಬೀದರ್ ಗುರುದ್ವಾರ

ಎನ್.ಜಗನ್ನಾಥ ಪ್ರಕಾಶ್
Published 6 ಜನವರಿ 2020, 19:30 IST
Last Updated 6 ಜನವರಿ 2020, 19:30 IST
ಬೀದರ್ ಗುರುದ್ವಾರದ ಚಿತ್ರ ಇರುವ ಅಂಚೆಚೀಟಿ
ಬೀದರ್ ಗುರುದ್ವಾರದ ಚಿತ್ರ ಇರುವ ಅಂಚೆಚೀಟಿ   

ಕರ್ನಾಟಕ ದರ್ಶನ ಸಂಚಿಕೆಯಲ್ಲಿ ಈ ಹಿಂದೆ ’ಕರುನಾಡ ಅಂಚೆ ಚೀಟಿಗಳು’ ಎಂಬ ಶೀರ್ಷಿಕೆಯಡಿ ಲೇಖನ ಪ್ರಕಟವಾಗಿತ್ತು. ಆ ಲೇಖನದಲ್ಲಿ ಯಾವ್ಯಾವ ಸ್ಮಾರಕಗಳು ತಾಣಗಳು, ವ್ಯಕ್ತಿಗಳ ನೆನಪಿನಲ್ಲಿ ಅಂಚೆ ಚೀಟಿ ಬಿಡುಗಡೆಯಾಗಿದೆ ಎಂಬುದನ್ನು ಸಂಕ್ಷಿಪ್ತವಾಗಿ ಉಲ್ಲೇಖಿಸಲಾಗಿತ್ತು. ಈಗ ಅಂತ ಸ್ಮರಣಿಕೆಯ ಸಾಲಿಗೆ ಈಗ ಬೀದರ್‌ನ ಗುರುದ್ವಾರವೂ ಸೇರಿಕೊಂಡಿದೆ.

ಗುರುನಾನಕ್ ಅವರ 550ನೇ ಜನ್ಮ ವರ್ಷಾಚರಣೆ ಅಂಗವಾಗಿ ಭಾರತೀಯ ಅಂಚೆ ಇಲಾಖೆ ಹೊರತಂದ ಆಕರ್ಷಕ ಆಂಚೆ ಚೀಟಿ ಸಂಕಲನದಲ್ಲಿ ಬೀದರ್‌ನ ಗುರದ್ವಾರ ಕೂಡ ಸ್ಥಾನ ಪಡೆದುಕೊಂಡಿದೆ.

ಬೀದರ್ ಎಂದರೆ, ಚಾರಿತ್ರಿಕ ಹಾಗೂ ಆಧುನಿಕತೆಯನ್ನು ಮೈಗೂಡಿಸಿಕೊಂಡ ನಗರ. ಬಿದರೂರು ಪುರವೆಂದೂ ಕರೆಯುತ್ತಿದ್ದ ಬೀದರ್, ಬಿದ್ರಿ ಕುರಕುಶಲಕಲೆಯಿಂದಲೂ ಹೆಸರುವಾಸಿ.

ADVERTISEMENT

ಇಂಥ ಐತಿಹಾಸಿಕ ತಾಣದಲ್ಲಿ ಅಪರೂಪದ ಹಾಗೂ ವಿಶಿಷ್ಟ ವಿನ್ಯಾಸದ ಗುರುದ್ವಾರವೂ ಇದೆ. ಭಾರತದುದ್ದಕ್ಕೂ ಸುತ್ತಾಡಿದ ಗುರುನಾನಕರು, ದೇಶದ ಹಲವು ತಾಣಗಳಿಗೆ ಭೇಟಿ ನೀಡಿ ಅಲ್ಲಲ್ಲೇ ತಂಗಿದ್ದರು. ಅಂಥ ಸ್ಥಳಗಳಲ್ಲಿ ಬೀದರ್‌ ಕೂಡ ಒಂದು. ಆ ನೆನಪಿಗಾಗಿ 1948ರಲ್ಲಿ ಇಲ್ಲೊಂದು ಗುರುದ್ವಾರ ಸ್ಥಾಪನೆಯಿಯಿತು. ಈಗ ಅದು ಭಾರತದ ಪ್ರಸಿದ್ಧ ಸಿಖ್ ಯಾತ್ರಾ ಸ್ಥಳ.

ಮೂರು ಗುಡ್ಡಗಳಿಂದ ಆವೃತವಾಗಿದ್ದು ತಿಳಿನೀರುಕೊಳ, ಆಕರ್ಷಕ ವಾಸ್ತು ಶಿಲ್ಪವನ್ನು ಹೊಂದಿದೆ. ಈ ಗುರುದ್ವಾರ ಸದಾಕಾಲ ಸಿಹಿನೀರು ಹೊಂದಿರುವ ಕೊಳದಿಂದಾಗಿ ‘ನಾನಕ್ ಝರ’ ಎಂದೂ ಖ್ಯಾತಿ ಗಳಿಸಿದೆ.

ಇತ್ತೀಚೆಗೆ ಸಿಖ್ ಧರ್ಮ ಸ್ಥಾಪಕ ಗುರುನಾನಕ್ ಅವರ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಅವರ ನೆನಪಿನ ಗುರುದ್ವಾರವಿರುವ ಪಾಕಿಸ್ತಾನದ ಕರ್ತಾರ್‌ಪುರಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣವಾಯಿತು. ಈ ಸಮಯದಲ್ಲಿ ಬೀದರ್‌ನ ಗುರುದ್ವಾರ ಕೂಡ ಸುದ್ದಿಯಲ್ಲಿತ್ತು. ಅಂಚೆ ಇಲಾಖೆ ಇದೇ ವೇಳೆ ಆಕರ್ಷಕ ಆಂಚೆ ಚೀಟಿ ಸಂಕಲನ ಹೊರತಂದಿತು. ಅದರಲ್ಲಿ ನೀಲಿ ಬಣ್ಣದ ಹಿನ್ನೆಲೆಯಲ್ಲಿ ಮೈದೆಳದಿರುವ ಹಾಲು ಬಣ್ಣದ ಬೀದರ್‌ನ ಗುರುದ್ವಾರ ಕಟ್ಟಡವಿರುವ ಅಂಚೆಚೀಟಿಯೂ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.