‘ಚಂದನವನ’ದ ಹಾರರ್ ಸಿನಿಮಾಗಳ ಪಟ್ಟಿಗೆ ಹೊಸದೊಂದು ಸಿನಿಮಾ ಸೇರ್ಪಡೆ ಆಗಿದೆ. ಈ ಚಿತ್ರದ ಹೆಸರು ‘ಆಜೀವ’. ಈ ಚಿತ್ರದ ಬಹುತೇಕ ಕಲಾವಿದರು ಹೊಸಬರು. ಹೊಸಬರ ಚಿತ್ರಗಳನ್ನು ಕನ್ನಡದ ಸಿನಿಮಾ ವೀಕ್ಷಕರು ಗೆಲ್ಲಿಸುತ್ತಿರುವ ಕಾರಣ, ‘ಆಜೀವ’ ಚಿತ್ರತಂಡ ಹೊಸಬರನ್ನು ನೆಚ್ಚಿಕೊಂಡಿದೆಯಂತೆ.
ಕಾಲೇಜಿನಲ್ಲಿ ಓದುವ ಐದು ಜನ ಹುಡುಗರು ಒಂದು ಸಿನಿಮಾ ಮಾಡಬೇಕು ಎಂದು ತೀರ್ಮಾನಿಸುತ್ತಾರೆ. ಅದಕ್ಕೆ ಬೇಕಿರುವ ಕಥೆ ಸಿದ್ಧಪಡಿಸಲು ಅವರು ಒಂದು ಬಂಗಲೆಗೆ ಹೋಗುತ್ತಾರೆ. ಆಗ, ಅಲ್ಲಿ ಅಗೋಚರ ಶಕ್ತಿಯೊಂದು ಈ ಹುಡುಗರನ್ನು ಕಾಡುತ್ತದೆ. ಆ ಶಕ್ತಿಯನ್ನು ಐದು ಜನ ಹುಡುಗರು ಹೇಗೆ ಎದುರಿಸುತ್ತಾರೆ ಎನ್ನುವುದು ಚಿತ್ರದ ಕಥೆಯ ಹೂರಣ ಎಂದು ತಂಡ ಹೇಳಿಕೊಂಡಿದೆ.
ಬೆಂಗಳೂರಿನ ಜಿ.ವಿ. ಅಯ್ಯರ್ ಸ್ಟುಡಿಯೊ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಚಿತ್ರೀಕರಣ ನಡೆದಿದೆ. ಚಿತ್ರದ ಮೂರು ಹಾಡುಗಳಿಗೆ ಶ್ರೀಹರ್ಷ ಸಂಗೀತ ಸಂಯೋಜಿಸಿದ್ದಾರೆ.
ಜೆ.ಎಂ.ರಾಜು ನಾಯಕನಾಗಿ, ರಮ್ಯಾ ಮತ್ತು ಗಾಯತ್ರಿ ನಾಯಕಿಯರಾಗಿ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಕೆ.ಜಿ.ಎಂ.ಮಹದೇವ್ ಅವರು ಚಿತ್ರದ ನಿರ್ದೇಶನದ ನೊಗ ಹೊತ್ತಿದ್ದಾರೆ. ಸಿನಿಮಾದ ಹಾಡುಗಳ ಸಿ.ಡಿ.ಯನ್ನು ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.