ADVERTISEMENT

ಆವಲಹಳ್ಳಿಯಲ್ಲಿ ಜಾತ್ರೆ

ಶ್ರೀಮುನೇಶ್ವರ ಸ್ವಾಮಿಯ 218ನೇ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST
ಮುನೇಶ್ವರಸ್ವಾಮಿ, ಜಾತ್ರೆಯ ನೋಟ
ಮುನೇಶ್ವರಸ್ವಾಮಿ, ಜಾತ್ರೆಯ ನೋಟ   

ಆವಲಹಳ್ಳಿಯ ಪುರಾತನ ಪ್ರಸಿದ್ಧ ಶ್ರೀಮುನೇಶ್ವರ ಸ್ವಾಮಿಯ 218ನೇ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು ಇದೇ 12ರವರೆಗೂ (ಸೋಮವಾರ) ವಿಶೇಷಾ ಪೂಜಾ ಕಾರ್ಯಗಳು ನಡೆಯಲಿವೆ.

ಬೆಂಗಳೂರು ಪೂರ್ವ ತಾಲ್ಲೂಕು ಬಿದರಹಳ್ಳಿ ಹೋಬಳಿ ಆವಲಹಳ್ಳಿ ಗ್ರಾಮದಲ್ಲಿರುವ ಮುನೇಶ್ವರ ದೇವಸ್ಥಾನ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಜಿಗಣಿ ಹೋಬಳಿ ಕಂದಾಯ ಅಧಿಕಾರಿ ಆಗಿದ್ದ ಮಂಡೂರು ಗ್ರಾಮದ ಹನುಮಂತೇಗೌಡ ಅವರು 1802ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದರು. ಅಂದಿನಿಂದ ಇಲ್ಲಿಯವರೆಗೆ ಮುನೇಶ್ವರ ಸ್ವಾಮಿಗೆ ನಿತ್ಯ ಪೂಜಾ ಕೈಂಕರ್ಯ ನಡೆದುಕೊಂಡು ಬಂದಿದೆ.

218ನೇ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ನಾಲ್ಕು ದಿನಗಳ ಜಾತ್ರೆ ನಡೆಯಲಿದೆ. ಸೋಮವಾರ ರಾತ್ರಿ ನಡೆದ ಕರಗ ಮಹೋತ್ಸವದಲ್ಲಿ ಹೂವಿನ ಕರಗವನ್ನು ವೆಂಕಟೇಶ್ವರಿ ಪೂಜಾರಿ ಹೋರಿದ್ದರು. ಶ್ರೀಗಣಪತಿ, ಶ್ರೀ ಕಾಟೇರಮ್ಮ, ಶ್ರೀ ಶನೇಶ್ವರ ಸ್ವಾಮಿ, ಬಸವೇಶ್ವರ ಸ್ವಾಮಿ, ಶ್ರೀ ಸೂರಮ್ಮ ಕೈವಾರ ಯೋಗಿ ನಾರಾಯಣಸ್ವಾಮಿ ದೇವರಿಗೆ ವಿಶೇಷ ಹೂವಿನ ಮತ್ತು ದೀಪದ ಅಲಂಕಾರ ಮಾಡಲಾಗಿದೆ.

ADVERTISEMENT

ಮಂಗಳವಾರ ಮುನೇಶ್ವರಸ್ವಾಮಿ, ದೊಡ್ಡಮ್ಮ, ಸಪ್ಪಲಮ್ಮ, ಕಾಡೇರಮ್ಮ, ರೇಣುಕಾಯಲ್ಲಮ್ಮ ದೇವರುಗಳಿಗೆ, ಆವಲಹಳ್ಳಿ, ಮಂಡೂರು, ವೀರೇನಹಳ್ಳಿ, ಚೀಮಸಂದ್ರ, ಮೇಡಹಳ್ಳಿ, ಹಿರಂಡಳ್ಳಿ, ಬಂಡಾಪುರ, ಬೆನ್ನಗೇನಹಳ್ಳಿ, ಬೋಮ್ಮನಹಳ್ಳಿ, ಕಟ್ಟಿಗೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಂದ ಅರತಿ ಮತ್ತು ಬಾಯಿಬೀಗ, ಹುರುಳ ಕೂದಲು, ಕೊಡುವ ಕಾರ್ಯಕ್ರಮ ನಡೆಯಿತು.

ಬುಧವಾರ ಮಧ್ಯಾಹ್ನ ಮುನೇಶ್ವರ ಸ್ವಾಮಿಯ ರಥೋತ್ಸವ ಮತ್ತು ಅಗ್ನಿಕುಂಡ ಕಾರ್ಯಕ್ರಮವೂ ನಡೆಯಲಿದೆ. ಗುರುವಾರ ವಿವಿಧ ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಹೋತ್ಸವದ ಸಂದರ್ಭದಲ್ಲಿ ಭಕ್ತರಿಗೆ ಅನ್ನದಾಸೋಹ ನಡೆಯಲಿದೆ. ಯಶೋಧಮ್ಮ ಮತ್ತು ವಾಸುದೇವ ಅವರಿಂದ ಸೇವಾ ಕಾರ್ಯಗಳು ಜರುಗಲಿವೆ.ಜಾತ್ರೆಯಲ್ಲಿ ಕೀಲು ಕುದುರೆ, ಡೊಳ್ಳು ಕುಣಿತ, ಗೊಂಬೆ ಕುಣಿತ, ವೀರಗಾಸೆ ಪ್ರದರ್ಶನ ನಡೆಯಲಿದೆ. ಗ್ರಾಮಸ್ಥರು ಪಾನಕ, ಮಜ್ಜಿಗೆ ವಿತರಿಸುತ್ತಾರೆ ಎಂದು ದೇವಸ್ಥಾನ ಸ್ವಾಗತ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.