ನಟ ಕಾಶೀನಾಥ್ ಅಭಿನಯದ ಚಿತ್ರ 'ಓಳ್ ಮುನ್ಸಾಮಿ'ಯ ಹಾಡುಗಳ ಬಿಡುಗಡೆ ಬೆಂಗಳೂರಿನಲ್ಲಿ ನಡೆಯಿತು. ಆನಂದ ಪ್ರಿಯ ಅವರು ನಿರ್ದೇಶಿಸಿರುವ ಚಿತ್ರ ಇದು. ಹಾಗಾಗಿ ಕಾಶೀನಾಥ್ ಅವರ ಸ್ಮರಣೆ ಕಾರ್ಯಕ್ರಮವೂ ಆಯಿತು.
ವಿನೋದ್ ಪ್ರಭಾಕರ್ ಅವರು ಕಾರ್ಯಕ್ರಮದ ಅತಿಥಿಯಾಗಿ ಬಂದಿದ್ದರು. ಎಲ್ಲರಿಗೂ ಹೂಗುಚ್ಛ ಮತ್ತು ಲಾಲಿಪಾಪ್ ನೀಡುವ ಮೂಲಕ ಸ್ವಾಗತಿಸಲಾಯಿತು!
ಇದು ಆನಂದ ಪ್ರಿಯ ನಿರ್ದೇಶನದ ಮೊದಲ ಸಿನಿಮಾ. 'ಕಾಶೀನಾಥ್ ಅವರು ಈ ಚಿತ್ರದಲ್ಲಿ, ತಮ್ಮ ಬಳಿಗೆ ಬರುವ ಭಕ್ತರಿಗೆಲ್ಲ ಲಾಲಿಪಾಪ್ ಹಂಚುತ್ತಾರೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಕೂಡ ಎಲ್ಲರಿಗೂ ಲಾಲಿಪಾಪ್ ಕೊಡಲಾಗಿದೆ' ಎಂದರು ಆನಂದಪ್ರಿಯ.
'ಓಳ್ ಮುನ್ಸಾಮಿ' ಅಂದರೆ ಸತ್ಯವನ್ನೇ ಹೇಳಿ, ಅರ್ಥವತ್ತಾಗಿ ಜೀವನ ರೂಪಿಸಿಕೊಂಡಿರುವ ಪಾತ್ರವೇ ವಿನಾ ಕಳ್ಳ ಸ್ವಾಮಿಯ ಪಾತ್ರವಂತೂ ಅಲ್ಲ ಎಂದು ಸ್ಪಷ್ಟನೆ ನೀಡಿದರು ನಿರ್ದೇಶಕರು.
ಇನ್ನು ಎರಡು ವಾರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾ ನೋಡಿದ ನಂತರ ವೀಕ್ಷಕರ ಮನಸ್ಸಿನ ಒಳಗಿರುವ ಓಳ್ ಮುನ್ಸಾಮಿ ಹೊರಗೆ ಬರುತ್ತಾನೆ ಎಂಬುದು ಚಿತ್ರತಂಡದ ಅಂಬೋಣ.
'ಇದು ಹಾಸ್ಯಮಯ ಸಿನಿಮಾ. ಹಾಗೆಯೇ ಇದರಲ್ಲಿ ಒಂದು ಸಂದೇಶ ಕೂಡ ಇದೆ. ಚಿತ್ರದ ಕೆಲವು ದೃಶ್ಯಗಳಲ್ಲಿ ಅಭಿನಯಿಸಲು ಕಾಶೀನಾಥ್ ಅವರೇ ನನಗೆ ಗೈಡ್ ಮಾಡಿದರು' ಎಂದು ಹೇಳಿದರು ನಾಯಕ ನಟ ನಿರಂಜನ್ ಒಡೆಯರ್. 'ಕಾಶೀನಾಥ್ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ' ಎಂದರು ನಾಯಕಿ ಅಖಿಲಾ. ಸತೀಶ್ ಬಾಬು ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.