ಕೈಯಲ್ಲಿ ಕಮಲ ಹಿಡಿದು ಶಿವಲಿಂಗವನ್ನು ಆಲಂಗಿಸಿದ ಮಹಿಳೆಯ ಮುಖದಲ್ಲಿ ಧನ್ಯತಾ ಭಾವ, ನೀರಿನೊಳಗೆ ಕುಳಿತ ಮಹಿಳೆಯನ್ನು ತಬ್ಬಿದ ತಾವರೆ ದಂಟು, ತಾವರೆಯನ್ನೇ ತ್ರಿಶೂಲದಂತೆ ಹಿಡಿದ ದೇವತೆ... ಹೀಗೆ ದೇವರು ಮತ್ತು ತಾವರೆಯನ್ನು ಸಮೀಕರಿಸಿ ಚಿತ್ರ ರಚಿಸಿದವರು ಕೋಟೆಗದ್ದೆ ರವಿ. ರಂಗೋಲಿ ಮೆಟ್ರೊ ಕಲಾ ಕೇಂದ್ರದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ‘ಮಿಸ್ಟಿಕ್ ಲೋಟಸ್’ ಏಕವ್ಯಕ್ತಿ ಕಲಾಪ್ರದರ್ಶನದಲ್ಲಿ ಇಂಥ ಅನೇಕ ಚಿತ್ರಗಳನ್ನು ನೀವು ನೋಡಬಹುದು.
ತೀರ್ಥಹಳ್ಳಿಯವರಾದ ರವಿ ಮೈಸೂರಿನ ಡಿ.ಎಂ.ಎಸ್ ಕಾಲೇಜಿನಲ್ಲಿ ಚಿತ್ರಕಲೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ. ಮೊದಲು ಕೊಡಗಿನ ವಿರಾಜಪೇಟೆಯ ಮಹೀಂದ್ರ ಹಾಲಿಡೇಸ್ ರೆಸಾರ್ಟ್ನಲ್ಲಿ ಪೋರ್ಟರೇಟ್ ಕಲಾವಿರಾಗಿದ್ದ ಇವರು, ಪ್ರಸ್ತುತ ನಗರದ ಫಿಡಿಲಿಟಸ್ ಗ್ಯಾಲರಿಯಲ್ಲಿ ಪೂರ್ಣ ಪ್ರಮಾಣದ ಚಿತ್ರಕಾರರಾಗಿದ್ದಾರೆ.
(ಕೋಟೆಗದ್ದೆ ರವಿ)
ಕಮಲದ ಹೂವನ್ನೇ ಪರಿಕಲ್ಪನೆಯಾಗಿರಿಸಿಕೊಂಡು ಚಿತ್ರ ಬಿಡಿಸುವ ಇವರು, ಕಮಲವನ್ನು ದೇವರಿಗೆ ಹೋಲಿಸುತ್ತಾರೆ. ‘ಕಮಲ ಕೆಸರಿನಲ್ಲಿ ಹುಟ್ಟಿ ಬೆಳೆದರೂ ಅದು ಎಂದಿಗೂ ತನ್ನ ಮೈಗೆ ಕೆಸರು ಅಂಟಿಸಿಕೊಳ್ಳುವುದಿಲ್ಲ. ಅಂತೆಯೇ ದೇವರು ಕೂಡ. ಇಡೀ ಸಮಾಜ ಕೆಟ್ಟು ಹೋದರೂ ದೇವರು ಅದನ್ನು ಸರಿಪಡಿಸುತ್ತಾನೆ. ಆದರೆ ದೇವರು ಎಂದಿಗೂ ಕೆಡುವುದಿಲ್ಲ. ಹಾಗಾಗಿ ನಾನು ದೇವರನ್ನು ಕಮಲಕ್ಕೆ ಹೋಲಿಸಲು ಇಷ್ಟಪಡುತ್ತೇನೆ’ ಎನ್ನುತ್ತಾರೆ ರವಿ.
ಈ ಪ್ರದರ್ಶನದಿಂದ ಬಂದ ಹಣದಲ್ಲಿ ಶೇ 25ರಷ್ಟನ್ನು ‘ಶಿಲ್ಪಾ ಫೌಂಡೇಷನ್’ ವತಿಯಿಂದ ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲಾಗುತ್ತಿದೆ.
**
ಕಲಾಪ
ಕಲಾವಿದ: ಕೋಟೆಗದ್ದೆ ರವಿ
ಸ್ಥಳ: ರಂಗೋಲಿ ಮೆಟ್ರೊ ಕಲಾಕೇಂದ್ರ, ಎಂ.ಜಿ.ರಸ್ತೆ
ಸಮಯ: ಬೆಳಿಗ್ಗೆ 10ರಿಂದ ಸಂಜೆ 7.30 ರವರೆಗೆ.
ದಿನಾಂಕ: ಜೂನ್ 11ರವರೆಗೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.