ಏನಿದು 'ರೌಂಡ್ಗ್ಲಾಸ್ ಸಂಸಾರ ಉತ್ಸವ'?
ಕಲೆಯ ಮೂಲಕ ಜನರಲ್ಲಿ ಪರಿಸರ ಕಾಳಜಿ ಮೂಡಿಸುವ ಉದ್ದೇಶದಿಂದ ಈ ಉತ್ಸವವನ್ನು ಅಕ್ಟೋಬರ್ 2ರಿಂದ 11ರವರೆಗೆ ಬೆಂಗಳೂರಿನಲ್ಲಿ ಆಯೋಜಿಸುತ್ತಿದ್ದೇವೆ. ಇದರಲ್ಲಿ ಪರಿಸರ ಕಲಾ ಪ್ರದರ್ಶನ, ಸಿನಿಮಾ ಉತ್ಸವ, ಸಂಗೀತ, ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಪರಿಸರ ಸಂರಕ್ಷಕರು, ಕಲಾವಿದರು, ಛಾಯಾಗ್ರಾಹಕರು ಪಾಲ್ಗೊಳ್ಳುವರು.
ಸಂಗೀತದ ಮೂಲಕ ಪರಿಸರ ಸಂರಕ್ಷಣೆ ಜಾಗೃತಿ ಸಾಧ್ಯವೇ?
ಸಂಗೀತ ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ಇದರ ಮೂಲಕ ಅರಣ್ಯ ಸಂರಕ್ಷಣೆ, ಪರಿಸರ ಪ್ರೇಮವನ್ನು ಜನರಲ್ಲಿ ಬಿತ್ತುವ ಕೆಲಸ ಮಾಡಬಹುದು. ನನ್ನ ಆಲ್ಬಂಗಳಲ್ಲಿ ರಮ್ಯ ಪರಿಸರದ ಸೌಂದರ್ಯವನ್ನು ದಾಖಲಿಸಿದ್ದೇನೆ.
ನಿಮ್ಮ ಸಂಗೀತಾಸಕ್ತಿಗೆ ಪೇರಣೆ?
ನಮ್ಮ ಕುಟುಂಬದಲ್ಲಿ ಯಾರೂ ಸಂಗೀತಗಾರರಿಲ್ಲ. ಆದರೆ ನನಗೆ ಬಾಲ್ಯದಿಂದಲೂ ಸಂಗೀತೋಪಕರಣಗಳ ಬಗ್ಗೆ ಅತೀವ ಆಸಕ್ತಿ ಇತ್ತು. ಚಿಕ್ಕಂದಿನಲ್ಲಿ ಬ್ಯಾಂಡ್ ನುಡಿಸುತ್ತಿದೆ. ಇದುವೇ ಮುಂದೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ನನಗೆ ಪ್ರೇರಣೆಯಾಯಿತು.
ಧನ್ಯತೆಯ ಕ್ಷಣ?
ಪ್ಯಾರಿಸ್ನಲ್ಲಿ ನಡೆದ ಸಿಒಪಿ 21 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ನ ಮಾಜಿ ಅಧ್ಯಕ್ಷ ಪ್ರಾಂಸ್ವಾ ಒಲಾಂಡ್ ಅವರು ವಿಶ್ವ ನಾಯಕರ ಸಮ್ಮುಖದಲ್ಲಿ ನನ್ನ ಪರಿಸರ ಕಾಳಜಿಯ ಆಲ್ಬಂ 'ಶಾಂತಿ ಸಂಸಾರ'ವನ್ನು ಬಿಡುಗಡೆಗೊಳಿಸಿದ್ದರು. ಇದು ನನಗೆ ಅತ್ಯಂತ ಖುಷಿ ತಂದ ವಿಚಾರ.
ಮಕ್ಕಳ ಸಂರಕ್ಷಣೆ ಜಾಗೃತಿ ಅಭಿಯಾನದ ಬಗ್ಗೆ ಹೇಳಿ?
'ಸೇವ್ ದಿ ಚಿಲ್ಡ್ರನ್' ಸರ್ಕಾರೇತರ ಸಂಸ್ಥೆಯ ರಾಯಭಾರಿಯಾಗಿ ರಾಜಸ್ಥಾನದ ಜೈಪುರಕ್ಕೆ ತೆರಳಿ ಮಕ್ಕಳಿಗೆ ಶಿಕ್ಷಣ ನೀಡುವ ಕುರಿತು ಹಾಗೂ ಬಾಲ್ಯ ವಿವಾಹ ತಡೆ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ.
ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡುವ ಯೋಚನೆ ಇದೆಯಾ?
ಕನ್ನಡದ 'ಆ್ಯಕ್ಸಿಡೆಂಟ್', 'ವೆಂಕಟ ಇನ್ ಸಂಕಟ' ಮತ್ತು 'ಕ್ರೇಜಿ ಕುಟುಂಬ' ಚಿತ್ರಗಳ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದೇನೆ. ಸದ್ಯ ಯಾವುದೇ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.