ADVERTISEMENT

ಕುಚುಪುಡಿ, ಕಥಕ್, ಭರತನಾಟ್ಯದ ‘ರಸಾಸ್ವಾದ’

ಎಸ್‌.ಸಂಪತ್‌
Published 18 ಮೇ 2018, 19:30 IST
Last Updated 18 ಮೇ 2018, 19:30 IST
ಸ್ವಪ್ನೊಕಲ್ಪ ದಾಸಗುಪ್ತಾ
ಸ್ವಪ್ನೊಕಲ್ಪ ದಾಸಗುಪ್ತಾ   

ಸಂಗೀತ, ಚಲನೆ, ಲಯ ಮತ್ತು ಅಭಿವ್ಯಕ್ತಿಯ ಸಂಯೋಜನೆಯೇ ನೃತ್ಯ. ಇದು ಪ್ರಾದೇಶಿಕ ಸಾಹಿತ್ಯ, ಇತಿಹಾಸ ಮತ್ತು ಸಂಸ್ಕೃತಿಗಳ ಸಮ್ಮಿಶ್ರ ಕಲೆಯೂ ಹೌದು. ಭಾರತೀಯ ಶಾಸ್ತ್ರೀಯ ನೃತ್ಯ ಪ್ರಾಕಾರಗಳು ವೈವಿಧ್ಯವೂ, ವಿಶಿಷ್ಟವೂ ಆಗಿದ್ದು, ನಿರ್ದಿಷ್ಟ ಪ್ರದೇಶ, ಬುಡಕಟ್ಟು, ಅವರ ಸಂಗೀತ, ವೇಷಭೂಷಣದ ಪ್ರತಿಬಿಂಬ.

ಹೀಗೆ ವೈಶಿಷ್ಟ್ಯದಿಂದ ಕೂಡಿದ ಕುಚುಪುಡಿ, ಒಡಿಸ್ಸಿ, ಭರತನಾಟ್ಯ, ಕಥಕ್‌ ಸೇರಿದಂತೆ ಕೆಲ ಬಗೆಯ ಶಾಸ್ತ್ರೀಯ ನೃತ್ಯ ಪ್ರದರ್ಶನಗಳನ್ನು ಒಂದೇ ಕಡೆ ನೋಡಲು ಅವಕಾಶ ದೊರೆತರೆ ಹೇಗೆ? ಅದುವೇ ಅಪ್ಪಟ ‘ರಸಾಸ್ವಾದ’. ಸಂಸ್ಕೃತದಲ್ಲಿ ‘ರಸಾಸ್ವಾದ’ ಎಂದರೆ ‘ಸೌಂದರ್ಯಾತ್ಮಕ ಆನಂದ ಅನುಭವಿಸುವ ಕಲೆ’ ಎಂದರ್ಥ.

(ಪ್ರತೀಕ್ಷಾ ಕಾಶಿ)

ADVERTISEMENT

ನಗರದ ‘ಒಡಿಸ್ಸಿ ನೃತ್ಯ ಸಂಸ್ಥೆ’ಯು ಪ್ರಸಿದ್ಧ ಕಲಾವಿದರು ಮತ್ತು ಕಲಾ ತಂಡಗಳ ಮೂಲಕ ಮೇ 19 ಮತ್ತು 20ರಂದು ಸಂಜೆ 5.30 ಗಂಟೆಗೆ ಮಲ್ಲೇಶ್ವರದ 14ನೇ ಕ್ರಾಸ್‌ನ ‘ಸೇವಾ ಸದನ’ ಸಭಾಂಗಣದಲ್ಲಿ ಏಕವ್ಯಕ್ತಿ (ಸೋಲೊ) ಮತ್ತು ಸಾಮೂಹಿಕ (ತಂಡಗಳ) ಶಾಸ್ತ್ರೀಯ ನೃತ್ಯ ಸಂಯೋಜನೆ ಮತ್ತು ಪ್ರದರ್ಶನವನ್ನು ಆಯೋಜಿಸಿದೆ. ಆ ಮೂಲಕ ನೃತ್ಯ ಕಲಾರಸಿಕರಿಗೆ ನಿಜವಾದ ‘ರಸಾಸ್ವಾದ’ ಒದಗಿಸಲು ಮುಂದಾಗಿದೆ.

(ರುಕ್ಮಿಣಿ ವಿಜಯಕುಮಾರ್‌)

19ರಂದು ಪ್ರಸಿದ್ಧ ಕಲಾವಿದರಾದ ಪ್ರತೀಕ್ಷಾ ಕಾಶಿ (ಕುಚುಪುಡಿ), ಸ್ವಪ್ನೊಕಲ್ಪ ದಾಸಗುಪ್ತಾ (ಒಡಿಸ್ಸಿ), ರುಕ್ಮಿಣಿ ವಿಜಯಕುಮಾರ್‌ (ಭರತನಾಟ್ಯ), ಶ್ವೇತಾ ವೆಂಕಟೇಶ್‌ (ಕಥಕ್‌) ಅವರಿಂದ ಏಕವ್ಯಕ್ತಿ ನೃತ್ಯ ಪ್ರದರ್ಶನ ನಡೆಯಲಿದೆ. 20ರಂದು ಸೂಪರ್‌ ಪರ್ಫಾರ್ಮಿಂಗ್ ಆರ್ಟ್‌ ಸೆಂಟರ್ (ಕಥಕ್‌), ನೃತ್ಯಾಂತರ ಡಾನ್ಸ್‌ ಕೇಂದ್ರ (ಒಡಿಸ್ಸಿ), ಚಿತ್ಕಲಾ ಸ್ಕೂಲ್‌ ಆಫ್‌ ಡಾನ್ಸ್‌ ತಂಡದ ಕಲಾವಿದರು (ಭರತನಾಟ್ಯ) ಪ್ರೇಕ್ಷಕರನ್ನು ಬೆರಗುಗೊಳಿಸಲಿದ್ದಾರೆ.

’ಸೋಲೊ’ ಪ್ರದರ್ಶನ ತಲಾ 30 ನಿಮಿಷದ್ದಾಗಿದ್ದರೆ, ತಂಡಗಳ ನೃತ್ಯ ಪ್ರದರ್ಶನಕ್ಕೆ ತಲಾ 40 ನಿಮಿಷ ನಿಗದಿಯಾಗಿದೆ. ರಸಾಸ್ವಾದ ವೀಕ್ಷಣೆಗೆ ಉಚಿತ ಪ್ರವೇಶ.

(ನೃತ್ಯಾಂತರ ಡಾನ್ಸ್‌ ತಂಡದ ನೃತ್ಯ)

**

ನೃತ್ಯಾಂತರ ಡಾನ್ಸ್‌

ಬೆಂಗಳೂರು ಮೂಲದ ಒಡಿಸ್ಸಿ ನೃತ್ಯ ಸಂಸ್ಥೆ. ಒಡಿಸ್ಸಿ ನೃತ್ಯ ಕಲಾವಿದೆ ಮಧುಲಿತಾ ಮೊಹಾಪಾತ್ರ ಅದರ ನಿರ್ಮಾತೃ. ನಗರದ ವಿವಿಧೆಡೆ ಒಡಿಸ್ಸಿ ನೃತ್ಯದ ಕುರಿತು ಈ ಸಂಸ್ಥೆ ತರಬೇತಿ ನೀಡುತ್ತಿದೆ.

ಈ ಸಂಸ್ಥೆಯಲ್ಲಿ ಶಾಸ್ತ್ರೀಯ ನೃತ್ಯ ಕಲಾವಿದರ ತಂಡವಿದ್ದು, ಅಂತರರಾಷ್ಟ್ರೀಯ ಒಡಿಸ್ಸಿ ನೃತ್ಯ ಉತ್ಸವ, ಮೈಸೂರು ದಸರಾ ಉತ್ಸವ, ಒಡಿಸಿ ಇಂಟರ್‌ನ್ಯಾಷನಲ್‌, ರಂಗ ತರಂಗ ನ್ಯಾಷನಲ್‌ ಕೊರಿಯೊಗ್ರಫಿ ಉತ್ಸವ, ಬೆಂಗಳೂರು ಅಂತರರಾಷ್ಟ್ರೀಯ ಕಲಾ ಉತ್ಸವ, ಹುಬ್ಬಳ್ಳಿ ಹಬ್ಬ, ನಿತ್ಯ ನೃತ್ಯ, ಸಮನ್ವಯ ಉತ್ಸವ, ಕಲಾ ನಂದಮ್‌, ಕಿಣಿಕಿಣಿ ನೃತ್ಯೋತ್ಸವಗಳಲ್ಲಿ ಇಲ್ಲಿನ ಕಲಾವಿದರು ನೃತ್ಯ ಪ್ರದರ್ಶಿಸಿದ್ದಾರೆ. ಈ ತಂಡದ ಕಲಾವಿದರು ಒಡಿಸ್ಸಿ ನೃತ್ಯ ಸಂಯೋಜನೆಯನ್ನು ಇಲ್ಲಿ ಪ್ರದರ್ಶಿಸುವರು.

(ನೂಪುರ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ ಸೆಂಟರ್‌ನ ಕಲಾವಿದರ ನೃತ್ಯ)

ಚಿತ್ಕಲಾ ಸ್ಕೂಲ್‌ ಆಫ್‌ ಡಾನ್ಸ್

ಇದು ಭರತನಾಟ್ಯ ನೃತ್ಯ ತರಬೇತಿ ಸಂಸ್ಥೆ. ಭರತನಾಟ್ಯವನ್ನು ಭವಿಷ್ಯದ ಪೀಳಿಗೆಗೆ ಪರಿಚಯಿಸುವ, ತರಬೇತಿ ನೀಡುವ ಉದ್ದೇಶದಿಂದ ಭರತನಾಟ್ಯ ಕಲಾವಿದ ಪಿ. ಪ್ರವೀಣ್‌ ಕುಮಾರ್‌ ಈ ಸಂಸ್ಥೆಯ ಸ್ಥಾಪಕರು. ಅವರ ನೇತೃತ್ವದ ಕಲಾವಿದರ ತಂಡ ಇಲ್ಲಿ ಭರತನಾಟ್ಯ ಪ್ರದರ್ಶನ ನೀಡಲಿದೆ.

(ಚಿತ್ಕಲಾ ಸ್ಕೂಲ್‌ ಆಫ್‌ ಡಾನ್ಸ್‌ ತಂಡದ ಕಲಾವಿದರ ನೃತ್ಯ)

ನೂಪುರ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ ಸೆಂಟರ್‌

ಕಥಕ್‌ ನೃತ್ಯ ನೂಪುರ್ ಪರ್ಫಾರ್ಮಿಂಗ್‌ ಕೇಂದ್ರವು ಕಥಕ್‌ ಶಾಸ್ತ್ರೀಯ ನೃತ್ಯ ಕಲಿಕೆಯಲ್ಲಿ ತೊಡಗಿದೆ. ಕಥಕ್‌ ಕಲಾವಿದರೂ ಆದ ಹರಿ ಮತ್ತು ಚೇತನಾ ದಂಪತಿಯ ನಿರ್ದೇಶನದಲ್ಲಿ ಒಡಿಸ್ಸಿ ನೃತ್ಯ ಕಾರ್ಯಕ್ರಮ ನಡೆಯಲಿದೆ.

(ಶ್ವೇತಾ ವೆಂಕಟೇಶ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.