ADVERTISEMENT

ಗಮಕ ವ್ಯಾಖ್ಯಾನದಿಂದ ಮೌಲ್ಯ ಬಿತ್ತುವ ಕಾರ್ಯ

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:30 IST
Last Updated 10 ಮೇ 2018, 19:30 IST
ಸತ್ಯವತಿ ರಾಮನಾಥ
ಸತ್ಯವತಿ ರಾಮನಾಥ   

ಸಾರ್ವಕಾಲಿಕ ಮೌಲ್ಯಗಳು ನಶಿಸುತ್ತಿರುವ ಸಂದರ್ಭದಲ್ಲಿ ಜನರಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ಗಮಕ ವ್ಯಾಖ್ಯಾನದ ಮೂಲಕ ಮಾಡಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ನನ್ನಲ್ಲಿದೆ.

ನಾನು ಸತ್ಯವತಿ ರಾಮನಾಥ. ಹಾಸನ ಜಿಲ್ಲೆಯ ಪುಟ್ಟ ಗ್ರಾಮ ಮರಿತಮ್ಮನಹಳ್ಳಿ ನನ್ನ ಹುಟ್ಟೂರು. ಕನ್ನಡ ನನ್ನ ಆಡು ಭಾಷೆಯಾದರೆ ಸಂಸ್ಕೃತ ನಾನು ಓದಿ ಬರೆದ ಭಾಷೆ. ಚಿಕ್ಕವಳಿದ್ದಾಗ ಊರಿನಲ್ಲಿ ವೆಂಕಟೇಶಮೂರ್ತಿಯವರ ಗಮಕ ವ್ಯಾಖ್ಯಾನವನ್ನು ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತಿದ್ದ ನನ್ನ ಕುತೂಹಲ ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವಂತೆ ಪ್ರೇರೇಪಿಸಿತು.

ಕಳೆದ ಮೂರು ದಶಕಗಳಿಂದ ಗಮಕ ಕಾವ್ಯ ವಾಚನಗಳಿಗೆ ವ್ಯಾಖ್ಯಾನ ನೀಡುವುದರ ಮೂಲಕ ಕುಮಾರ ವ್ಯಾಸ, ರಾಘವಾಂಕ ಲಕ್ಷ್ಮೀಶ, ನರಹರಿ ಮುಂತಾದವರ ಕಾವ್ಯಗಳನ್ನು ಇಂದಿನ ಜನರಿಗೆ ವಿವರಿಸಲು ಸಾಧ್ಯವಾಗಿದೆ. ಮಹಾಕಾವ್ಯಗಳನ್ನು ರಂಜನೀಯವಾಗಿ ಹೇಳುವುದರೊಂದಿಗೆ ಅದರ ಅಂತರಂಗವನ್ನು ಸರಿಯಾಗಿ ಗ್ರಹಿಸಿ, ಅವುಗಳಲ್ಲಿರುವ ಸಾಮಾಜಿಕ ಮೌಲ್ಯಗಳು, ತತ್ವ ವಿಚಾರಗಳನ್ನು ಕೇಳುಗರ ಮನ ಮುಟ್ಟುವಂತೆ ವ್ಯಾಖ್ಯಾನಿಸುವ ವಿಶೇಷತೆಯನ್ನು ರೂಢಿಸಿಕೊಂಡಿದ್ದೇನೆ. ಇದಕ್ಕಾಗಿ ಶಾಸ್ತ್ರ ಪುರಾಣಗಳನ್ನು ಆಳವಾದ ಅಧ್ಯಯನ ನಡೆಸುತ್ತಿದ್ದೇನೆ. 

ADVERTISEMENT

ಪೀಠಿಕಾ ಸಂಧಿ ಪದ್ಯಗಳನ್ನು ವ್ಯಾಖ್ಯಾನಿಸುವ ಮೂಲಕ ಆರಂಭಗೊಂಡ ಗಮಕ ವ್ಯಾಖ್ಯಾನವು ಇಂದು ಹಲವಾರು ಪುಸ್ತಕಗಳನ್ನು ಪ್ರಕಟಿಸಲು ಸಾಧ್ಯವಾಗಿಸಿದೆ. ಪಾಶುಪತಾಸ್ತ್ರದ ಪ್ರಧಾನ 110 ಪದ್ಯಗಳನ್ನು ಬರೆದಿದ್ದೇನೆ. ಮಹಿಳಾ ಸಾಧಕರು, ದಿವ್ಯ ಸಸಿ ತುಳಸಿ ಮುಂತಾದ ಕೃತಿಗಳನ್ನು ಬರೆದಿದ್ದೇನೆ. 

ಗಮಕ ವ್ಯಾಖ್ಯಾನದ ಮೂಲಕ ಆಧ್ಯಾತ್ಮದ ವಿಚಾರಗಳನ್ನು ತಿಳಿಸಲು ಪ್ರಯತ್ನಿಸುತ್ತೇನೆ. ಇಂದಿನ ತಲೆಮಾರಿನವರನ್ನು ತಲುಪಲು  ವ್ಯಾಖ್ಯಾನಿಸುವ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಪ್ರೌಢಶಾಲಾ ಮಕ್ಕಳಿಗೆ ಹಳೆಗನ್ನಡ ಪದ್ಯಗಳನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸುವ ಕಾರ್ಯದಲ್ಲಿ ತೊಡಗಿದ್ದೇನೆ.

ಗಮಕ ವ್ಯಾಖ್ಯಾನದಲ್ಲಿ ನನಗೆ ಎಲ್ಲಾ ಮಹಾಕಾವ್ಯಗಳ ವ್ಯಾಖ್ಯಾನವೂ ಇಷ್ಟವಾಗುತ್ತದೆ. ಪ್ರತಿಯೊಬ್ಬ ಕವಿಯ ಕಾವ್ಯದಲ್ಲಿಯೂ ಅದರದೇ ಅದ ವಿಶೇಷತೆ ಇದ್ದು, ನನ್ನ ತನ್ಮಯತೆಯನ್ನು ಹೆಚ್ಚಿಸಿದ್ದು ಕುಮಾರ ವ್ಯಾಸನ ಭಾರತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.