ADVERTISEMENT

ಗಾಂಧಿ ಎಂಬ ಹೆಸರಿನಲ್ಲಿ...

ಪ್ರಜಾವಾಣಿ ವಿಶೇಷ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಖಾದಿಯಲ್ಲಿ ಪ್ರಯೋಗಕ್ಕೆ ಇಳಿದಿದ್ದು ಹೇಗೆ?
ನಮ್ಮ ಉಡುಗೆ ತೊಡುಗೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂಥದ್ದು. ನಮ್ಮಲ್ಲಿಯ ವಾತಾವರಣಕ್ಕೆ ಹೊಂದುವ ಉಡುಗೆಗಳನ್ನು ತೊಡುವುದೇ ವಸ್ತ್ರ ಸಂಸ್ಕೃತಿಯಾಗಿದೆ. ಖಾದಿ ನಮ್ಮತನದ ವಸ್ತ್ರ. ನಮ್ಮನ್ನು ಹೊಂದಿಕೊಳ್ಳುವ ವಸ್ತ್ರ. ಹಾಗಾಗಿ ಖಾದಿ ಕಡೆಗೆ ಒಲವು ಹೆಚ್ಚಿತು.

ಉಳಿದೆಲ್ಲ ವಸ್ತ್ರಗಳಿಗಿಂತ ಖಾದಿಯಲ್ಲಿ ಪ್ರಯೋಗಗಳು ಕಷ್ಟವಲ್ಲವೇ?
ವಸ್ತ್ರ ವಿನ್ಯಾಸ ಹಾಗೂ ಫ್ಯಾಶನ್ ಎರಡನ್ನೂ ಟ್ರೆಂಡ್‌ಗೆ ಹೋಲಿಸಿದಾಗ ಹಾಗೆನಿಸಬಹುದು. ಆದರೆ ಎಲ್ಲ ಬಗೆಯ ಪ್ರಯೋಗಗಳಿಗೂ ಒಗ್ಗುವ ವಸ್ತ್ರ ಇದಾಗಿದೆ. ಕೈಮಗ್ಗದ ವಸ್ತ್ರಗಳನ್ನು ತೊಡುವುದರಿಂದ ನಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಕೈಮಗ್ಗದೊಂದಿಗೆ ಗುರುತಿಸಿಕೊಂಡಿರುವ ರೈತ ಸಮುದಾಯವನ್ನೂ ಪ್ರೋತ್ಸಾಹಿಸಿದಂತೆ ಆಗುತ್ತದೆ.

ಖಾದಿಯೊಂದಿಗೆ ಬೆಸೆದಿದ್ದು ಹೇಗೆ?

ನಾವು ಸಣ್ಣವರಿದ್ದಾಗ ಅಮ್ಮ ಖಾದಿಯನ್ನು ನೂಲುತ್ತಿದ್ದರು. ಆಗಿನಿಂದಲೇ ಖಾದಿಯೊಂದಿಗೆ ನಂಟು ಬೆಳೆಯಿತು. ಅದು ದೇಸಿ ಅನ್ನುವ ಕಾರಣಕ್ಕಿರಬಹುದು. ಅಥವಾ ಕೈಗೆಟಕುವ ದರ ಮತ್ತು ಬಹುಕಾಲ ಬಾಳಿಕೆಯುಳ್ಳ ಗುಣದಿಂದಾಗಿ ಖಾದಿ ಅನಿವಾರ್ಯವಾಗಿತ್ತು.

ಆದರೆ ಯೌವ್ವನಾವಸ್ಥೆಗೆ ತಲುಪಿದಾಗ, ಜೀನ್ಸ್ ಹಾಕುವ ಹುಚ್ಚಿತ್ತು. ಜೀನ್ಸ್ ಮೇಲೆ ಖಾದಿಗಿಂತ ಬೇರೆ ಟಾಪುಗಳು ಚಂದ ಕಾಣುವುದುಂಟೆ? ಟ್ರೆಂಡ್‌ನೊಂದಿಗೆ ಸರಳತನವೂ ಬೆರೆಯುವ ಖಾದಿ ಇಷ್ಟವಾಗಿದ್ದು ಈ ಕಾರಣದಿಂದ.

ಬೆನ್ನಿ ತೌರಸ್ ಜೊತೆಗಿನ ಬಾಂಧವ್ಯ..?
ಮದುವೆಯಾದ ನಂತರ 10-12 ವರ್ಷ ಅಮೆರಿಕದ ವಾಸ ಅನಿವಾರ್ಯವಾಗಿತ್ತು. ಆಗ ಅಲ್ಲಿಯೂ ಕೈಮಗ್ಗಗಳಿವೆಯೇ? ಅಲ್ಲಿಯ ದೇಸಿ ಜವಳಿ ಉದ್ಯಮ ಹೇಗಿದೆ? ಎಂಬುದನ್ನೆಲ್ಲ ಯೋಚಿಸಿದಾಗ ಬೆನ್ನಿ ತೌರಸ್ ಸ್ಟುಡಿಯೋಗೆ ಭೇಟಿ ಮಾಡುವ ಅವಕಾಶ ದೊರೆಯಿತು. ಅವರ `ಹಾರೋಸ್ಕೋಪ್ ಕಲರ್ಸ್‌ ಹ್ಯಾಂಡ್‌ಲೂಮ್~ ಎಂಬ ಪರಿಕಲ್ಪನೆ ನನ್ನನ್ನು ಸೆಳೆಯಿತು.

ಇದು ತೀರಾ ಸಂಕೀರ್ಣವಾದ ವಿಷಯ. ಜವಳಿ ಉದ್ಯಮದಲ್ಲಿ ಕೈಮಗ್ಗ, ನೂಲು, ಬಣ್ಣ ಮತ್ತು ಹಾರೋಸ್ಕೋಪ್ ಎಲ್ಲವನ್ನೂ ಸಮನ್ವಯಗೊಳಿಸಿದ ಬಗೆ ಆಕರ್ಷಣೀಯವಾಗಿತ್ತು. ಇದೀಗ ಅದೇ ಸಂಸ್ಥೆಯೊಂದಿಗೆ ಕೌಮುದಿ ಸಹ ಕೈ ಜೋಡಿಸಿದೆ.

ನಿಮ್ಮ ಸಂಸ್ಥೆಗೆ ಕೌಮುದಿ ಎಂಬ ಹೆಸರೇಕೆ ಇಟ್ರಿ?

ಕೌಮುದಿ ಎಂದರೆ ಭೂಮಿಗೆ ಪ್ರಿಯವಾದವಳು ಎಂದರ್ಥ. ಇದೀಗ ಸಾವಯವ ಕೃಷಿಯಿಂದಲೇ ಉತ್ಪನ್ನವಾದ ಹತ್ತಿಯ ನೂಲನ್ನು ನೇಯುತ್ತಿದ್ದೇವೆ. ಆದಷ್ಟು ನಿಸರ್ಗಕ್ಕೆ ಹತ್ತಿರವಾಗಿರಲಿ ಎಂಬ ಆಶಯದಿಂದ ಇದನ್ನು ಬಳಕೆಗೆ ತಂದಿದ್ದೇವೆ. ಇನ್ನೊಂದು ಶರದ್‌ಪೂರ್ಣಿಮೆಯ ಚಂದ್ರ ಅತಿ ಶುಭ್ರ ಶ್ವೇತವರ್ಣದವನಾಗಿ ಕಂಗೊಳಿಸುತ್ತಾನೆ.
 
ಆ ಪರಿಶುದ್ಧತೆಯನ್ನು ಈ ಹೆಸರು ಪ್ರತಿನಿಧಿಸಲಿ ಎನ್ನುವುದು ಎರಡನೆಯ ಕಾರಣ. ಮೂರನೆಯದ್ದು ಖಾದಿಯ `ಕೆ~ಯಿಂದಲೇ ಹೆಸರು ಆರಂಭವಾಗಲಿ ಎಂಬ ಆಸೆ ಇತ್ತು. ಹಾಗಾಗಿ `ಕೌಮುದಿ~ ಎಂದು ಹೆಸರಿಟ್ಟೆವು. ಇದು ಹೀಗೆ ಇಷ್ಟೆಲ್ಲ ಪ್ರಸಿದ್ಧಿ ಪಡೆಯುವುದೆಂದು ಅನಿಸಿರಲಿಲ್ಲ.

ಬೆಂಗಳೂರಿನಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ದೊರೆತ ಪ್ರತಿಕ್ರಿಯೆ ಹೇಗಿದೆ?
ಗಾಂಧಿ ಜಯಂತಿಯಂದು ಈ ಪ್ರದರ್ಶನವನ್ನು ಆರಂಭಿಸಲಾಯಿತು. ಗಾಂಧೀಜಿ ಹಾರೋಸ್ಕೋಪ್ ಕಲರ್ ಅನ್ನು ಪರಿಶುದ್ಧ ಸಾವಯವ ಹತ್ತಿ ನೂಲಿನಿಂದ ನೇಯ್ದು ಪ್ರದರ್ಶನಕ್ಕೆ ಇರಿಸಲಾಗಿದೆ. ಇದನ್ನು ಹಲವಾರು ಜನರು ಮೆಚ್ಚಿದ್ದಾರೆ. ಇನ್ನು ಸ್ಕಾರ್ಫ್, ಸೀರೆ, ಟಾಪು, ಕುರ್ತಿಸ್ ಎಲ್ಲಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಲೆ..?
ಕೈಗೆಟಕುತ್ತವೆ. 750 ರೂಪಾಯಿಗಳಿಂದ ಸ್ಕಾರ್ಫ್ ಆರಂಭವಾಗುತ್ತವೆ. ಗರಿಷ್ಠ ಬೆಲೆ 3500 ರೂಪಾಯಿ. ಅಷ್ಟರಲ್ಲಿ ನಿಮ್ಮ  ವ್ಯಕ್ತಿತ್ವಕ್ಕೆ ಒಪ್ಪುವ ಉಡುಗೆ-ತೊಡುಗೆಗಳನ್ನು ಕೊಳ್ಳಬಹುದಾಗಿದೆ. ಈ ಸಂಗ್ರಹದ ಉದ್ದೇಶ ಸಹಜ ಮತ್ತು ಸರಳತನ. ಬಂದವರಿಗೆ ಈ ಅನುಭವ ದೊರೆಯುತ್ತದೆ.

ಈ ಮಾರಾಟವು ನಂದಿದುರ್ಗ ರಸ್ತೆಯಲ್ಲಿರುವ ನೀಲಾದ್ರಿ ಅಪಾರ್ಟ್‌ಮೆಂಟ್‌ನ ಮೊದಲ ಅಂತಸ್ತಿನಲ್ಲಿರುವ ಅಂಡರ್ ದ ಟ್ರೀ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ. ಸಮಯ ಬೆಳಿಗ್ಗೆ 10.30ರಿಂದ 7.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.