ಈಚೆಗೆ ತೆರೆಗೆ ಬಂದ ‘ರುಕ್ಕು’ ಚಿತ್ರ ಗೆದ್ದಿದೆಯಂತೆ. ಆದರೆ ಈ ಚಿತ್ರಕ್ಕೆ ಹೂಡಿಕೆ ಮಾಡಿರುವ ದುಡ್ಡು ಪೂರ್ಣ ಪ್ರಮಾಣದಲ್ಲಿ ಬಂದಿಲ್ಲವಂತೆ! ಈ ವಿಷಯವನ್ನು ರುಕ್ಕು ಚಿತ್ರದ ನಿರ್ದೇಶಕ ಬಸವರಾಜ್ ಬಳ್ಳಾರಿ ಮತ್ತು ನಿರ್ಮಾಪಕ ಶ್ರೇಯಸ್ ಪತ್ರಿಕಾಗೋಷ್ಠಿ ಕರೆದು ತಿಳಿಸಿದರು.
‘ಚಿತ್ರ ಗೆದ್ದಿದೆ, ಆದರೆ ಹಣ ಬಂದಿಲ್ಲ ಅಂದರೆ ಏನು’ ಎಂಬ ಪ್ರಶ್ನೆ ಎದುರಾದಾಗ ಬಸವರಾಜ್ ಅವರು, ‘ಈ ಶುಕ್ರವಾರಕ್ಕೆ ಚಿತ್ರ ತೆರೆ ಕಂಡು 25 ದಿನಗಳು ಆಗಲಿವೆ. ಚುನಾವಣಾ ಕಾವು ಇರುವ ಹೊತ್ತಿನಲ್ಲೂ ಇಷ್ಟು ದಿನ ಚಿತ್ರ ಪ್ರದರ್ಶನ ಕಂಡಿದೆ. ಜನ ನಮ್ಮ ಸಿನಿಮಾ ವೀಕ್ಷಿಸಿ ಚಿತ್ರಮಂದಿರಗಳಿಂದ ಹೊರ ಬರುವಾಗ ಕಣ್ಣೀರು ಹಾಕಿದ್ದೂ ಇದೆ’ ಎಂದು ಉತ್ತರಿಸಿದರು.
‘ಸಿನಿಮಾ ಒಳ್ಳೆಯದಿದೆ ಎಂದು ಜನ ಹೇಳುತ್ತಿದ್ದಾರೆ. ಈಗಿನ ಹಣಗಳಿಕೆ ಪ್ರಮಾಣ ಗಮನಿಸಿದರೆ ನಾವು ಬಂಡವಾಳವಾಗಿ ಹಾಕಿದ್ದು ವಾಪಸ್ ಬರುತ್ತದೆಯೋ ಇಲ್ಲವೋ ಎಂಬುದನ್ನು ಹೇಳಲಾಗದು’ ಎಂದರು ಬಸವರಾಜ್. ಶ್ರೇಯಸ್ ಈ ಚಿತ್ರದ ನಿರ್ಮಾಪಕ ಮಾತ್ರವಲ್ಲದೆ ನಾಯಕ ನಟ ಕೂಡ ಹೌದು. ‘ಒಂದೂಕಾಲು ಕೋಟಿ ರೂಪಾಯಿ ಹಣ ಖರ್ಚು ಮಾಡಿದ್ದೇವೆ. ಹಾಕಿದ ಹಣ ವಾಪಸ್ ಬರುತ್ತದೆಯೋ, ಇಲ್ಲವೋ ಎಂಬುದು ಮುಖ್ಯವಲ್ಲ. ಆದರೆ ನಮ್ಮ ಚಿತ್ರದ ಬಗ್ಗೆ ಸಿನಿಮಾ ರಂಗದಲ್ಲಿ ಒಳ್ಳೆಯ ಮಾತುಗಳು ಕೇಳಿಬಂದಿವೆ. ಅಷ್ಟು ಸಾಕು’ ಎಂದು ಹೇಳಿದರು.
ಶ್ರೇಯಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.