ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸುವ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಈ ಬಾರಿ ಹಿರಿಯ ಚಿತ್ರ ನಿರ್ದೇಶಕ ಜೋಸೈಮನ್ ಅವರು ಅತಿಥಿ. ಮೇ 24ರ ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ಜೋಸೈಮನ್ ತಮ್ಮ ವೃತ್ತಿಬದುಕಿನ ಸಿಂಹಾವಲೋಕನ ಮಾಡಿ ಚಿತ್ರಪ್ರೇಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಸೆಟ್ಬಾಯ್ ಆಗಿ ಸಿನಿಮಾ ವೃತ್ತಿ ಬದುಕು ಆರಂಭಿಸಿದ ಜೋಸೈಮನ್ ಕಾಲಕ್ರಮೇಣ ನಿರ್ದೇಶಕರಾಗಿ ಹೆಸರು ಮಾಡಿದವರು. ‘ಒಂದು ಪ್ರೇಮದ ಕಥೆ’ಯ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗದಲ್ಲಿ ತಮ್ಮ ಬಗ್ಗೆ ಮರುವ್ಯಾಖ್ಯಾನ ಬರೆದುಕೊಂಡವರು. ಸಾಹಸಮಯ ಸಿನಿಮಾಗಳೆಂದರೆ ಜೋಸೈಮನ್ ಅವರಿಗೆ ಇನ್ನಿಲ್ಲದ ಪ್ರೀತಿ. ಇವರಿಗೆ ಹೆಸರು ತಂದುಕೊಟ್ಟದ್ದೂ ಸಾಹಸಮಯ ಚಿತ್ರಗಳೇ. ಚಿತ್ರಕಥೆ, ಸಂಭಾಷಣೆ ಬರೆಯುವಲ್ಲಿಯೂ ನಿಪುಣರಾದ ಜೋಸೈಮನ್ ನಿರ್ದೇಶಿಸಿದ್ದು 30 ಚಿತ್ರಗಳು.
ಅವುಗಳಲ್ಲಿ ‘ಸಾಹಸಸಿಂಹ’, ‘ನ್ಯಾಯ ಗೆದ್ದಿತು’, ‘ಪ್ರೇಮ ಜಾಲ’, ‘ರವಿ ವರ್ಮ’, ‘ಊರಿನ ಉಪಕಾರಿ’ ಚಿತ್ರಗಳು ಪ್ರಮುಖವಾದುವು. ಚಲನಚಿತ್ರಗಳಲ್ಲದೇ ಕಿರುತೆರೆಯಲ್ಲೂ ಕೆಲಸ ಮಾಡಿದ ಜೋಸೈಮನ್ ಅವರು ಅಭಿನಯದಲ್ಲೂ ಸೈ ಎನಿಸಿಕೊಂಡವರು.
ಕಾರ್ಪೊರೇಷನ್ ವೃತ್ತದ ಬಳಿಯ ಬಾದಾಮಿ ಹೌಸ್ನಲ್ಲಿರುವ ಪ್ರಿಯದರ್ಶಿನಿ ಚಿತ್ರ ಮಂದಿರದಲ್ಲಿ ಶನಿವಾರ ಸಂಜೆ 5.30ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.