ADVERTISEMENT

ತಮಿಳು ಪ್ರತಿಭೆಯ ಕನ್ನಡ ಹಾಡು

ಏಜೆನ್ಸೀಸ್
Published 5 ಮಾರ್ಚ್ 2014, 19:30 IST
Last Updated 5 ಮಾರ್ಚ್ 2014, 19:30 IST

‘ಎರಡೇ ಎರಡು ತಿಂಗಳು ಟೈಮ್‌ ಕೊಡಿ. ಕನ್ನಡದಲ್ಲಿ ಫ್ಲುಯೆಂಟ್‌ ಆಗಿ ಮಾತಾಡೋದನ್ನು ಕಲೀತೀನಿ. ಬೇಕಿದ್ರೆ ಸಿನಿಮಾಕ್ಕೆ ಸಂಭಾಷಣೇನೂ ಬರೀತೀನಿ’ ಎಂದು ಟಿ. ರಾಜೇಂದ್ರ ಸವಾಲು ಎಸೆದಾಗ ಸಿಕ್ಕ ಚಪ್ಪಾಳೆ ಹಾಗೂ ಹೊಡೆದ ಶಿಳ್ಳೆಗೆ ಲೆಕ್ಕವಿಲ್ಲ.

ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಟಿ.ರಾಜೇಂದ್ರ ಅವರದು. ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ನೃತ್ಯ ಸಂಯೋಜಕ, ಸಂಕಲನಕಾರ, ಗಾಯಕ... ಒಂದೇ ಎರಡೇ? ಸಾಲದ್ದಕ್ಕೆ ‘ಕುರಳ್’ ಟಿವಿ ಚಾನೆಲ್ ಮಾಲೀಕ. ರಾಜಕೀಯ ಪಕ್ಷದ ಮುಖಂಡರೂ ಹೌದು! ಇಷ್ಟೆಲ್ಲ ‘ಚಟುವಟಿಕೆ’ಯಿಂದ ಕೂಡಿರುವ ರಾಜೇಂದ್ರ, ಮೊದಲ ಬಾರಿಗೆ ಕನ್ನಡ ಸಿನಿಮಾದ ಹಾಡೊಂದಕ್ಕೆ ದನಿಗೂಡಿಸಿದ್ದಾರೆ.

‘ರಾಜ್‌ ಬಹದ್ದೂರ್‌’ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ರಾಜೇಂದ್ರ, ತಮಿಳು– ತೆಲುಗು ಮಿಶ್ರಿತ ಕನ್ನಡದಲ್ಲಿ ಮಾತಾಡಿದರು. ಬಾಯಿಯಲ್ಲಿ ‘ಧನಕ ಧಿಮ್... ತಕಿಟ ಧಮ್’ ಎಂದು ತಾಳ ಹಾಕುತ್ತ, ಹೆಜ್ಜೆ ಹಾಕಿದಾಗ ಪ್ರೇಕ್ಷಕರ ಕರತಾಡನ ಸಭಾಂಗಣದಲ್ಲಿ ಮಾರ್ದನಿಸಿತು.

ತಮಿಳಿನಲ್ಲಿ ಅನೇಕ ಸಿನಿಮಾ ಮಾಡಿರುವ ರಾಜೇಂದ್ರ ಅವರಿಗೆ ಕನ್ನಡದಲ್ಲಿಯೂ ಚಿತ್ರವೊಂದನ್ನು ನಿರ್ದೇಶನ ಮಾಡುವ ಬಯಕೆ ಇದೆಯಂತೆ. ‘ನನ್ನ ಆಸೆ ದೇವರಿಗೆ ಗೊತ್ತಾಗಿರಬಹುದು. ಅದಕ್ಕಾಗಿ ಆತ ಮೊದಲು ಕನ್ನಡದಲ್ಲಿ ಹಾಡು, ಆಮೇಲೆ ಸಿನಿಮಾ ಮಾಡು ಅಂತ ಆಶೀರ್ವಾದ ಮಾಡಿದ್ದಾನೆ. ಅದಕ್ಕಾಗಿ ನಾನಿಲ್ಲಿ ಇದ್ದೇನೆ’ ಅಂತ ಹೇಳಿಕೊಂಡರು.

‘ರಾಜ್‌ ಬಹದ್ದೂರ್’ ನಿರ್ಮಾಪಕ ದಿಲ್‌ ಸತ್ಯ ಅವರು ರಾಜೇಂದರ್‌ ಅವರ ಕಟ್ಟಾ ಅಭಿಮಾನಿಯಂತೆ. ರಾಜೇಂದ್ರ ಕನ್ನಡಕ್ಕೆ ಬರಲು ಇದೇ ಮುಖ್ಯ ಕಾರಣವಂತೆ. ದಿಲ್‌ ಸತ್ಯ ಬಂದು ಮನವಿ ಮಾಡಿದಾಗ, ಎರಡನೇ ಮಾತೇ ಇಲ್ಲದೆ ರಾಜೇಂದ್ರ ಒಪ್ಪಿಕೊಂಡರು. ಕೃಪಾಕರ ಸಂಗೀತ ನಿರ್ದೇಶನದಲ್ಲಿ ಈ ಹಾಡಿಗೆ ದನಿ ನೀಡಿದರು. ‘ಚಾಯ್ ಚಾಯ್ ಚಾಯ್ ಗರಂ ಚಾಯ್, ಮಸಾಲಾ ಚಾಯ್... ವಾಹ್ ಎಷ್ಟ್ ಚೆಂದ ಅದೆ ಈ ಹಾಡು! ಇದರಲ್ಲಿ ಪ್ರತಿಯೊಂದು ಶಬ್ದವೂ ಪ್ರಾಸಬದ್ಧವಾಗಿದೆ. ಕೃಪಾಕರ ನನಗೆ ಫುಲ್‌ ಫ್ರೀಡಂ ಕೊಟ್ಟರು. ನನ್ನ ರಿದಮ್‌ನಲ್ಲೇ ಹಾಡಿದೆ’ ಎಂದು ಆ ಹಾಡಿನ ತುಣಕನ್ನು ಹಾಡಿ ತೋರಿಸಿದರು ರಾಜೇಂದ್ರ.

ರಾಜೇಂದ್ರ ಅವರಿಗೆ ಬೆಂಗಳೂರು ಅಂದರೆ ಬಲು ಪ್ರೀತಿ. ಯಾಕೆಂದರೆ ಇಲ್ಲಿ ಅವರ ಅನೇಕ ಸ್ನೇಹಿತರಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಅವರು ಸದಾ ಸ್ಮರಿಸುವ ದೇವತೆಗಳ ನಾಡು ಇದು. ಮೈಸೂರಿನ ಚಾಮುಂಡೇಶ್ವರಿ, ಕೊಲ್ಲೂರ ಮೂಕಾಂಬಿಕೆ, ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ... ಎಲ್ಲರೂ ನನ್ನನ್ನ ಆಶೀರ್ವದಿಸಿದ್ದಾರೆ.

ಇಂಥ ನೆಲದಲ್ಲಿ ಜನಿಸಲು ಅದೃಷ್ಟ ಮಾಡಿರಬೇಕು’ ಎಂದ ರಾಜೇಂದ್ರನ್‌, ನೆಲ ಮುಟ್ಟಿ ನಮಸ್ಕರಿಸಿದರು. ನೆಲವನ್ನು ಮತ್ತೆ ಕಣ್ಣಿಗೊತ್ತಿಕೊಂಡರು. ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಹಿರಿಯ ನಟ ಶ್ರೀನಿವಾಸ ಮೂರ್ತಿ, ರಾಜೇಶ್‌ ಅವರಿಗೆ ಬಾಗಿ ನಮಸ್ಕರಿಸಿದರು.
‘ಸಂಗೀತ ಅಂದರೆ ಈ ಕರ್ನಾಟಕ. ಕರ್ನಾಟಕ ಸಂಗೀತ ಇಲ್ಲಿನ ನೆಲದಿಂದಲೇ ಬಂದಿದ್ದು. ಈ ನೆಲದಲ್ಲಿ ಒಂದು ಸಿನಿಮಾ ಮಾಡಬೇಕು ಎಂಬುದು ನನ್ನ ಆಸೆ.

ಆದರೆ ಅದಕ್ಕೂ ಮೊದಲು ತಯಾರಿ ಮಾಡಬೇಕಲ್ವಾ? ಅಕ್ಕಡ– ಈಕ್ಕಡ ಎಂಬಷ್ಟು ಕನ್ನಡ ಗೊತ್ತು. ಇನ್ನು ಅಡ್ಡಿಯಿಲ್ಲ. ಹಾಡು ಹಾಡಿದ್ದೇನೆ. ನೋಡ್ತಾ ಇರಿ. ಎರಡು ತಿಂಗಳಲ್ಲಿ ಫುಲ್‌ ಕನ್ನಡ ಮಾತಾಡ್ತೀನಿ. ಒಂದು ಸಿನಿಮಾ ಮಾಡೇ ಮಾಡ್ತೀನಿ’ ಅಂದರು. ಮಾತಿನ ಕೊನೆಗೆ, ಜನರ ಒತ್ತಾಯಕ್ಕೆ ಮಣಿದು ‘ಚಾಯ್ ಚಾಯ್‌’ ಹಾಡಿಗೆ ನೃತ್ಯ ತಂಡದ ಜತೆ ಹೆಜ್ಜೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.