ADVERTISEMENT

ನಿವೇದಿತಾ ನೃತ್ಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಆಸಕ್ತಿ ಜೊತೆಗೆ ಕಲಿಯುವ ಹುಮ್ಮಸಿದ್ದರೆ ಸಾಧನೆಗೆ ಯಾವುದೇ ತೊಂದರೆ ಇಲ್ಲ ಎಂಬ ಮಾತು ಟಿ.ಜಿ. ನಿವೇದಿತಾ ಪಾಲಿಗೆ ಸತ್ಯವಾಗಿದೆ. ಹುಟ್ಟುತ್ತಲೇ ಶಸ್ತ್ರಚಿಕಿತ್ಸೆಗೆ ಗುರಿಯಾಗಿ ಮಾನಸಿಕ ಹಾಗೂ ದೈಹಿಕವಾಗಿ ಅಸ್ವಸ್ಥಗೊಂಡಿದ್ದಳು. ಈಕೆಗೆ ಮಾತು ಬಾರದು, ಕಿವಿ ಕೇಳಿಸದು, ಇಷ್ಟೆಲ್ಲಾ ವೈಕಲ್ಯದ ನಡುವೆ ಬುದ್ಧಿ ಮಾಂದ್ಯತೆ ಸಹ  ಸೇರಿದೆ. ಆದರೆ ಇವರ ಹಠಕ್ಕೆ ನಟರಾಜ ಸೋತಿದ್ದಾನೆ.

ನಿವೇದಿತಾಗೆ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನೃತ್ಯದ ಕಡೆಗೆ ಒಲವು ಜಾಸ್ತಿ. ತಾಯಿ ರಮಾ ಜಗನ್ನಾಥ್. ಇವರು ಆಂಧ್ರ ನಾಟ್ಯ, ಕೂಚಿಪುಡಿ ಮತ್ತು ಭರತನಾಟ್ಯ ಕಲಾವಿದರ ನೃತ್ಯಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ತಂದೆ ಟಿ.ಎನ್.ಜಗನ್ನಾಥ್‌ರಾವ್. ತಾಯಿ ತಾವು ಭಾಗವಹಿಸುತ್ತಿದ್ದ ನೃತ್ಯ ಕಾರ್ಯಕ್ರಮಗಳಿಗೆ ನಿವೇದಿತಾಳನ್ನು ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ಪ್ರೇರಿತಗೊಂಡ ನಿವೇದಿತಾ ತಾನು ಸಹ ನೃತ್ಯದ ಅನುಕರಣೆ ಮಾಡುತ್ತಿದ್ದಳು. ಅತ್ತೆ ಸುಭದ್ರ ಪ್ರಭು ಸಹ ನೃತ್ಯ ಶಿಕ್ಷಕಿ. ತಾಯಿ ಮತ್ತು ಅತ್ತೆ ಇಬ್ಬರ ಪ್ರೋತ್ಸಾಹದಿಂದ ನಿವೇದಿತಾಳಲ್ಲಿ ನೃತ್ಯದ ಆಸೆ ಚಿಗುರೊಡೆಯಿತು.

ಜೆ.ಎಸ್.ಎಸ್. `ಸಹನಾ~ ವಿಶೇಷ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ನಿವೇದಿತಾಗೆ ಶಾಲೆಯಿಂದಲೂ ಪ್ರೋತ್ಸಾಹ ದೊರೆತಿದೆ. ಅನೇಕ ರಂಗ ಕಾರ್ಯಕ್ರಮಗಳನ್ನು ನೀಡಿ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.

ADVERTISEMENT

ನೃತ್ಯಕ್ಕೆ ಬೇಕಾದ ಹಾವಭಾವದಲ್ಲಿ ಎಲ್ಲಿಯೂ ಕೊರತೆಯಾಗದಂತೆ ನರ್ತಿಸುತ್ತಾರೆ. ಸವಾಲುಗಳನ್ನು ದಾಟಿ ನೃತ್ಯಕ್ಕೆ ಜೀವ ತುಂಬುವ ಇವರಿಗೆ ಬೇಕಾಗಿರುವುದು ಪ್ರೋತ್ಸಾಹ.
ನಿವೇದಿತಾ ಅವರ ಭರತನಾಟ್ಯ  ಸಂಜೆ 6.30ಕ್ಕೆ ನೃಪತುಂಗಾ ರಸ್ತೆ ಯವನಿಕಾದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.