ADVERTISEMENT

ಪಂಚಕಲಾವಿದೆಯರ ಸಂಗಮ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST

ರಿನೈಸೆನ್ಸ್ ಗ್ಯಾಲರಿಯಲ್ಲಿ ಇಂದಿನಿಂದ (ನ.19) 23ರವರೆಗೆ ಪಂಚ ಕಲಾವಿದೆಯರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಲಕ್ಷ್ಮಿ ಮೈಸೂರ್, ಅಕ್ಷಿತಾ ಜೈನ್, ಪರಿಮಳಾ ತೊಮರ್, ಪೂಜಿತಾ ನಯ್ಯರ್, ನಿಜಿಲ್ ಸಿ.ಜಿ. ಮುಂತಾದವರು ತಮ್ಮ ಇತ್ತೀಚಿನ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

ಕಲಾಕೃತಿಗಳಲ್ಲಿ ಜೀವನ ದರ್ಶನ ಮಾಡಿಸುವುದು ಲಕ್ಷ್ಮಿ ಮೈಸೂರ್‌ಗೆ ಅತಿ ಇಷ್ಟದ ಕೆಲಸವಂತೆ. ಬದುಕಿನ ವೈವಿಧ್ಯವನ್ನು ಬಣ್ಣದಲ್ಲಿ ಹಿಡಿದಿಡುವುದು ಸಂತಸದ ಕೆಲಸ ಎನ್ನುವ ಲಕ್ಷ್ಮಿಗೆ ಹೆಣ್ತನ, ಭಾರತೀಯ ಸಂಸ್ಕೃತಿ, ವೈಭವಯುತ ಪರಂಪರೆ, ನಿಸರ್ಗ ಮತ್ತು ದೇವದೇವತೆಗಳು ಎಲ್ಲವೂ ಆಸಕ್ತಿಕರ ವಿಷಯಗಳಂತೆ. ಇವುಗಳನ್ನು ಕಲಾಕೃತಿಯಲ್ಲಿ ಹಿಡಿದಿಡುವ ಕಾಲದಲ್ಲಿ ಅಂತಃಶಕ್ತಿ ಪ್ರವಹಿಸುತ್ತದೆ.

ಅಂತಃಶಾಂತಿ ಲಭಿಸುತ್ತದೆ. ನಮ್ಮಳಗೆ ಹೊಸತೊಂದನ್ನು ಸೃಷ್ಟಿಸುವ ಕೆಲಸ ಆಗುತ್ತದೆ ಎಂದು ತಮ್ಮ ಅನುಭವವನ್ನು ಲಕ್ಷ್ಮಿ ಹೇಳುತ್ತಾರೆ.

`ಜಗತ್ತು ಸುಂದರವಾಗಿದೆ ಎನ್ನುವುದನ್ನು ನನ್ನ ಕಲಾಕೃತಿಗಳಲ್ಲಿ ಬಿಂಬಿಸಲು ಇಷ್ಟಪಡುತ್ತೇನೆ. ನೋಡುಗನಿಗೂ ಕಲೆ ಸಂತಸವನ್ನು ನೀಡಬೇಕು. ಆನಂದಮಯ ಅನುಭವ ನೀಡಬೇಕು ಎನ್ನುವುದೇ ನನ್ನ ಕಲಾಕೃತಿಗಳ ಗುರಿಯಾಗಿದೆ. ನೋಡುಗನಲ್ಲಿ ಅದಮ್ಯ ಪ್ರೀತಿ, ಅಚಲ ಆನಂದ ತಂದುಕೊಡುವಂಥ ಕಲಾಕೃತಿ ರಚನೆಯೇ ಇಷ್ಟದ ಕೆಲಸವಾಗಿದೆ~ ಎನ್ನುತ್ತಾರೆ ಅವರು.

ಅಕ್ಷಿತಾ ಜೈನ್ ಬೆಂಗಳೂರಿನ ಕಲಾವಿದೆ. `ಬಾಲ್ಯದಿಂದಲೇ ಚಿತ್ರಕಲೆಯತ್ತ ಸೆಳೆತವಿತ್ತು. ಬೆಳೆಯುತ್ತಾ ಬಂದಂತೆ ಆಧುನಿಕ ಕಲೆ ನನ್ನನ್ನು ಹಿಡಿದಿಟ್ಟಿತು. ಆಧುನಿಕ ಕಲೆಯ ವಿವಿಧ ಆಯಾಮಗಳು ನನ್ನಲ್ಲಿಯ ಸೃಜನಶೀಲ ಶಕ್ತಿಯನ್ನು, ಪ್ರಯೋಗಾತ್ಮಕ ಮನೋಭಾವವನ್ನೂ ಕೂಗಿ ಕರೆದಂತೆ ಆಗುತ್ತದೆ. ಇದೇ ಸಾಧ್ಯತೆಗಳೇ ನನ್ನನ್ನು ಆಧುನಿಕ ಕಲೆಯಲ್ಲಿ ಮುಂದುವರಿಯುವಂತೆ ಮಾಡಿದೆ~ ಎಂದು ಅವರು ತಮ್ಮ ಕಲಾಯಾನದ ಬಗ್ಗೆ ಹೇಳಿಕೊಳ್ಳುತ್ತಾರೆ.

ಪ್ರತಿ ಕಲಾಕೃತಿಯ ರಚನೆಯೂ ಹೊಸದೊಂದು ಅನುಭವ ನೀಡುತ್ತದೆ. ಹೊಸದೊಂದು ಪಾಠವನ್ನು ಹೇಳುತ್ತದೆ. ಪ್ರತಿ ಕಲಾಕೃತಿಯ ಸೃಷ್ಟಿಯ ಸಂದರ್ಭದಲ್ಲೂ ವಿಶೇಷ ಚೇತನವೊಂದು ನಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡಿದಂತೆ ಆಗುತ್ತದೆ. ಇದೇ ಆಕರ್ಷಣೆಯೇ ಕಲೆಯತ್ತ ಅಕ್ಷಿತಾ ಅವರನ್ನು ಸೆಳೆದಿಟ್ಟಿದೆಯೆಂದು ಅವರು ಹೇಳಿಕೊಳ್ಳುತ್ತಾರೆ.

19ರಿಂದ 23ರವರೆಗೆ ಈ ಕಲಾವಿದರೆಯ ಕಲಾಕೃತಿಗಳು ರಿನೈಸೆನ್ಸ್ ಕಲಾ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿವೆ.

ಬೆಳಗಿನ 11ರಿಂದ ಸಂಜೆ 7ರವರೆಗೆ. ಹೆಚ್ಚಿನ ಮಾಹಿತಿಗೆ:  22202232  
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.