ವಾಚೆರಾನ್ ಕಾಸ್ಟಾಂಟಿನ್ ಹಾಗೂ ಲೂಯಿಸ್ ಫಿಲಿಪ್ ಆಶ್ರಯದಲ್ಲಿ ತಸ್ವೀರ್ ಸಂಸ್ಥೆಯು ತನ್ನ ಏಳನೇ ಆವೃತ್ತಿಯ ಭಾಗವಾಗಿ ಪ್ರಖ್ಯಾತ ಛಾಯಾಗ್ರಾಹಕ ರಘು ರಾಯ್ ಅವರ ಛಾಯಾಚಿತ್ರ ಪ್ರದರ್ಶನವನ್ನು ಡಿ. 14ರಿಂದ ಆಯೋಜಿಸಿದೆ.
ವಿಭಿನ್ನ ಬಗೆಯ ಛಾಯಾಗ್ರಹಣಕ್ಕೆ ಹೆಸರುವಾಸಿಯಾಗಿರುವ ರಘು ರಾಯ್ ಅವರು 1942ರಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರ್ ಆಗಿ ತರಬೇತಿ ಪಡೆದಿದ್ದರೂ ಛಾಯಾಗ್ರಹಣ ಅವರನ್ನು ಬಹುವಾಗಿ ಸೆಳೆಯಿತು. ಆಗ ಅವರಿಗಿನ್ನೂ 23ರ ಹರೆಯ. ಛಾಯಾಗ್ರಹಣ ಕಲಿತ ರಘು ನವದೆಹಲಿಯ ವಾರಪತ್ರಿಕೆ `ದಿ ಸ್ಟೇಟ್ಸ್ಮನ್'ನಲ್ಲಿ ಮುಖ್ಯ ಛಾಯಾಗ್ರಾಹಕರಾಗಿ ಕೆಲಸಕ್ಕೆ ಸೇರಿಕೊಂಡರು. ಹತ್ತು ವರ್ಷಗಳ ನಂತರ ಕೊಲ್ಕತ್ತದ `ಸಂಡೇ' ಪತ್ರಿಕೆಯಲ್ಲಿ ಫೋಟೊ ಸಂಪಾದಕರಾಗಿ ವೃತ್ತಿ ಮುಂದುವರಿಸಿದರು. `ಇಂಡಿಯಾ ಟುಡೇ' ವಾರಪತ್ರಿಕೆಗೂ ಕೆಲಸ ಮಾಡಿದ ಅನುಭವ ಅವರದ್ದು.
1971ರಲ್ಲಿ ರಘು ರಾಯ್ ಅವರು ತೆಗೆದ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವೊಂದು ಪ್ಯಾರಿಸ್ನ ಗ್ಯಾಲರಿ ಡೆಲ್ಪೀರ್ನಲ್ಲಿ ಪ್ರದರ್ಶನವಾಯಿತು. ಅದನ್ನು ನೋಡಿದ ಹೆನ್ರಿ ಕಾರ್ಟಿರ್ ಬ್ರೆಸ್ನನ್ ಅವರು ರಘು ಹೆಸರನ್ನು ವಿಶ್ವ ಪ್ರಖ್ಯಾತ ಮಾಗ್ನಮ್ ಫೋಟೊ ಏಜಿನ್ಸಿಗೆ ಸೂಚಿಸಿದರು. ಅದೇ ವರ್ಷ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿತು.
ರಘು ರಾಯ್ ಅವರ ಚಿತ್ರಗಳ ಪ್ರದರ್ಶನ ನಗರದಲ್ಲಿ ಡಿ. 28ರವರೆಗೂ ನಡೆಯಲಿದೆ. ಸ್ಥಳ: ತಸ್ವೀರ್, ನಂ. 26/1, ಕಸ್ತೂರ್ಬಾ ರಸ್ತೆ, ಬೆಂಗಳೂರು. ಸಮಯ: ಬೆಳಿಗ್ಗೆ 10ರಿಂದ ಸಂಜೆ 6.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.