ADVERTISEMENT

ಬೆಂಗಳೂರು ಕಲಾ ಹಬ್ಬ...

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 19:30 IST
Last Updated 17 ಜೂನ್ 2011, 19:30 IST
ಬೆಂಗಳೂರು ಕಲಾ ಹಬ್ಬ...
ಬೆಂಗಳೂರು ಕಲಾ ಹಬ್ಬ...   

ಚಿತ್ರಕಲಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುತ್ತಿರುವ ದಿ ಕಲೆಕ್ಷನ್ ಈಗ ರಾಜ್ಯದ ಮತ್ತು ಹೊರ ರಾಜ್ಯದ 17 ಗ್ಯಾಲರಿಗಳ ಸಹಯೋಗದಲ್ಲಿ `ಆರ್ಟ್ ಬೆಂಗಳೂರು 2011~ ಸಮಕಾಲೀನ ಚಿತ್ರಕಲಾ ಉತ್ಸವ ನಡೆಸುತ್ತಿದೆ.

ಈ ಮೂಲಕ ಅದು ಕಲಾವಿದರಿಗೆ ಜಾಗತಿಕ ಮನ್ನಣೆ ದೊರಕಿಸಿಕೊಡಲು ನೆರವಾಗುತ್ತಿದೆ. ಜೊತೆಗೆ ಚಿತ್ರಕಲಾ ಗ್ಯಾಲರಿಗಳು ಸದಾ ಜೀವಂತವಾಗಿರುವಂತೆ ನೋಡಿಕೊಳ್ಳುತ್ತಿದೆ. ಕಲಾ ರಸಿಕರು ತಮಗಿಷ್ಟವಾಗುವ ಪೇಂಟಿಂಗ್ ಕೊಳ್ಳುವ ಆಸೆಯನ್ನು ಪೂರೈಸುತ್ತಿದೆ.

ಗಮನಾರ್ಹ ಅಂಶ ಎಂದರೆ ಇಲ್ಲಿ ಕಲಾಕೃತಿಗಳ ಮಾರಾಟದಿಂದ ಬರುವ ಹಣದ ಒಂದು ಭಾಗ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿರುವ ಎಚ್‌ಸಿಜಿ ಪ್ರತಿಷ್ಠಾನಕ್ಕೆ ಹೋಗಲಿದೆ.

ಉತ್ಸವದಲ್ಲಿ ದಕ್ಷಿಣ ಭಾರತದ ಅನೇಕ ಸುಪ್ರಸಿದ್ಧ ಕಲಾವಿದರ ಕಲಾಕೃತಿಗಳಗಳ ಜತೆಗೆ ಉತ್ತರ ಭಾರತೀಯ ಕಲಾವಿದರ ವರ್ಣಚಿತ್ರ ಪ್ರದರ್ಶನಗೊಳ್ಳುವುದು ವಿಶೇಷ. ಕರ್ನಾಟಕದ ಕೆ.ಎನ್.ರಾಮಚಂದ್ರನ್, ಕೆ.ಜಿ.ಲಿಂಗದೇವರು, ಬಿ.ಎಸ್.ದೇಸಾಯಿ, ಗಣೇಶ ದೊಡ್ಡಮನಿ, ಕೆ.ವಿ.ಸುಬ್ರಹ್ಮಣ್ಯಂ, ಚಂದ್ರಶೇಖರ್ ಹಾಗೂ ಶೇಖರ್ ಬಳ್ಳಾರಿ ಅವರಂತಹ ಘಟಾನುಘಟಿ ಕಲಾವಿದರ ಅಪರೂಪದ ಕಲಾಕೃತಿಗಳು ಇಲ್ಲಿವೆ.

ಉತ್ಸವದಲ್ಲಿ ಕಲಾಕೃತಿ ಪ್ರದರ್ಶನದ ಜೊತೆಗೆ ಹಲವಾರು ಕಾರ್ಯಕ್ರಮಗಳು ಸಹ ಸೇರಿಕೊಂಡಿವೆ. ಶನಿವಾರ ಸಂಜೆ 6.30ಕ್ಕೆ ಕಲಾವಿದ ಹಾಗೂ ವಿನ್ಯಾಸಕ ಕೃಷ್ಣ ಮೆಹ್ತಾ ಅವರು ತಮ್ಮ ಚಿತ್ರಕಲಾ ಪ್ರಾರಂಭದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಭಾನುವಾರ ಮಧ್ಯಾಹ್ನ 2.30ರಿಂದ 3.30ರ ವರೆಗೆ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ. ಸೋಮವಾರ ಸಂಜೆ 4ಕ್ಕೆ ಹೆಸರಾಂತ ಕಲಾವಿದ ಜಾನ್ ದೇವ್‌ರಾಜ್ ಅವರು ಸಿನಿಮಾ ಪ್ರದರ್ಶಿಸಲಿದ್ದಾರೆ. ನಂತರ ಅವರು `ದಿ 10 ಕಮಾಂಡ್‌ಮೆಂಟ್ಸ್ ಆಫ್ ಆರ್ಟ್~ ವಿಷಯ ಕುರಿತು ಮಾತನಾಡಲಿದ್ದಾರೆ. ಮಂಗಳವಾರ ಸಂಜೆ 4ಕ್ಕೆ ಟೆಂಟೆಡ್ ಗ್ಲಾಸ್ ತಯಾರಿಕಾ ಕಾರ್ಯಗಾರ. ಬುಧವಾರ ಸಂಜೆ 6.30ಕ್ಕೆ ದೆಹಲಿಯ ಪ್ರಖ್ಯಾತ ಕಲಾವಿದೆ ಅಪರ್ಣಾ ಕೌರ್ ವಿಚಾರಗೋಷ್ಠಿ ನಡೆಸಿಕೊಡುತ್ತಾರೆ. 25ರಂದು ಚಿತ್ರಕಲಾಕೃತಿಗಳ ಹರಾಜು. ಹೀಗೆ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ.  ಸ್ಥಳ: ದಿ ಕಲೆಕ್ಷನ್, ಯುಬಿ ಸಿಟಿ, ವಿಠಲ್ ಮಲ್ಯ ರಸ್ತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.