ADVERTISEMENT

ಬೆಂಗಳೂರು ಹಬ್ಬ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಸಿಲಿಕಾನ್ ಸಿಟಿಯ ಹಬ್ಬಗಳ ಪಟ್ಟಿಗೆ ಬೆಂಗಳೂರು ಹಬ್ಬ ಸೇರ್ಪಡೆಯಾಗಿ ಒಂಬತ್ತು ವರ್ಷಗಳಾದವು. ಈ ಬಾರಿ ಕನ್ನಡ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶುಕ್ರವಾರದಿಂದ ಆರಂಭವಾಗಿರುವ ಹಬ್ಬವು ಜ.22ರವರೆಗೆ ನಗರದ ಅನೇಕ ಕಡೆ ನಡೆಯಲಿದೆ.

ಈ ಹಬ್ಬವು ನಂದಿನಿ ಆಳ್ವ ಮತ್ತು ಪದ್ಮಿನಿ ರವಿ ಅವರ ಕಲ್ಪನೆಯಿಂದ ಹುಟ್ಟಿದ್ದು. ರಾಜ್ಯದ ಸಂಸ್ಕೃತಿ, ಕಲೆ, ಆಚರಣೆಗಳನ್ನು ಪ್ರದರ್ಶಿಸುವ ದೊಡ್ಡ ವೇದಿಕೆ ಇದು. ಜಂಜಡದ ಬದುಕಿನಲ್ಲಿ ನಮ್ಮ ಸಾಂಸ್ಕೃತಿಕ ಹಿರಿಮೆಯನ್ನು ನೆನಪಿಸಿ, ಮುಂದಿನ ಪೀಳಿಗೆಗೆ ಅದರ ಅರಿವು ಮೂಡಿಸುವುದು ಬೆಂಗಳೂರು ಹಬ್ಬದ ಉದ್ದೇಶ. ಆ ನಿಟ್ಟಿನಲ್ಲಿ ಬೆಂಗಳೂರು ಹಬ್ಬವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ~ ಎನ್ನುತ್ತಾರೆ ಕಾರ್ಯಕ್ರಮ ಸಂಘಟಕಿ ಎನ್.ಪರಿಮಳಾ.

ಶನಿವಾರ ಲಕ್ಷ್ಮೀ ನಟರಾಜ, ವಿದ್ಯಾ ನಾಗರಾಜ, ಪ್ರಕಾಶ್ ಸೊಂಟಕ್ಕಿ ಮತ್ತು ಡಾ.ಜೋತ್ಸ್ನಾ ಶ್ರೀಕಾಂತ್ ಅವರಿಂದ ಸಂಗೀತ ಹಬ್ಬ. ಆಮೇಲೆ ನಿತ್ಯ ಸಂಗೀತದ ರಸಧಾರೆ. ಸಂಗೀತವಷ್ಟೇ ಅಲ್ಲದೆ ಚಿತ್ರಕಲೆ, ಚಂದ್ರಶೇಖರ ಕಂಬಾರರ ನಾಟಕಗಳು, ಗಿರೀಶ್ ಕಾಸರವಳ್ಳಿ ನಿರ್ದೇಶನದ ಚಲನಚಿತ್ರಗಳ ಪ್ರದರ್ಶನಗಳೂ ಉಂಟು. ನೋಡುವ ಕಣ್ಣು, ಮನಸುಗಳಿಗೆ ಸಾಂಸ್ಕೃತಿಕ ರಸದೌತಣ.

ಚೌಡಯ್ಯ ಸ್ಮಾರಕ ಭವನ, ಕರ್ನಾಟಕ ಚಿತ್ರಕಲಾ ಪರಿಷತ್ತು, ನ್ಯಾಷನಲ್ ಕಾಲೇಜು ಮೈದಾನ, ಸೇವಾ ಸದನ, ಭಾರತೀಯ ವಿದ್ಯಾಭವನ, ರಂಗಶಂಕರ ಮತ್ತಿತರ ಕಡೆಗಳಲ್ಲಿ ಹತ್ತು ದಿನಗಳೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಭಾನುವಾರ (ಜ.22) ಅರಮನೆ ಮೈದಾನದಲ್ಲಿ ಜಾನಪದ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಅಂದು ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾತಂಡಗಳು ಡೊಳ್ಳು ಕುಣಿತ, ವೀರಗಾಸೆ, ಯಕ್ಷಗಾನ ಪ್ರದರ್ಶನ ಜನರಿಗೆ ರಸದೌತಣ ಉಣಬಡಿಸಲಿದ್ದಾರೆ. ಜೊತೆಗೆ ಟಿ.ವಿ ಕಲಾವಿದರ ಒಕ್ಕೂಟದಿಂದ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತಷ್ಟು ರಂಗು ತುಂಬಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.