ರಾಜಧಾನಿ ಬೆಂಗಳೂರಿನಲ್ಲಿ ಭಾರತ ಮತ್ತು ಆಫ್ರಿಕಾದ ಸಂಸ್ಕೃತಿಯ ಸಮ್ಮಿಲನ. ಅದು ಕೂಡ ವರ್ಣಚಿತ್ರಗಳಲ್ಲಿ. ಇಂತಹ ಅಪೂರ್ವ ಘಟನೆಗೆ ಭಾರತೀಯ ಮತ್ತು ಆಫ್ರಿಕಾದ ಚಿತ್ರ ಕಲಾವಿದರು ಮೂರ್ತ ಸ್ವರೂಪ ನೀಡಿದ್ದು ವಿಶೇಷ.ಆಫ್ರಿಕಾದ ಆರು ಮತ್ತು ಭಾರತದ ಐದು ಕಲಾವಿದರ 52 ಕಲಾಕೃತಿಗಳು ಆಯಾ ದೇಶದ ಸಂಸ್ಕೃತಿ, ಪ್ರಕೃತಿ ಸೌಂದರ್ಯ, ಮಹಿಳಾ ಸಂವೇದನೆ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ, ಬೆಳೆಯುತ್ತಿರುವ ಆಧುನಿಕ ಮಹಾ ನಗರಗಳಲ್ಲಿ ಮನುಷ್ಯ ಅನುಭವಿಸುತ್ತಿರುವ ಯಾತನೆ ಮೇಲೆ ಬೆಳಕು ಚೆಲ್ಲುತ್ತವೆ.
‘ಆರ್ಟ್ ಅಫೇರ್ಸ್ ಬೈ ಮರ್ಜಿಂಗ್ ಫ್ಲೂಸ್’ ಹೆಸರಿನ ಚಿತ್ರಕಲಾ ಪ್ರದರ್ಶನದಲ್ಲಿ ತೈಲ ಚಿತ್ರ, ಜಲಚಿತ್ರ, ಆ್ಯಕ್ರಿಲಿಕ್ ಆನ್ ಕ್ಯಾನ್ವಾಸ್, ಇಂಕ್ ಆನ್ ಪೇಪರ್ ಕಲಾಕೃತಿಗಳು ಗಮನ ಸೆಳೆಯುತ್ತವೆ.ಆಯಾ ಋತುಮಾನಗಳಲ್ಲಿ ಬೆಂಗಳೂರಿನ ರಸ್ತೆಬದಿ ಅರಳುವ ವಿವಿಧ ಪ್ರಕಾರದ ಹೂಗಳು, ಮೈಮರೆತು ಕುಣಿಯುವ ನವಿಲು ಹಾಗೂ ಅದರ ಸೌಂದರ್ಯ, ಬುದ್ಧನ ಧ್ಯಾನಮಗ್ನ ಭಂಗಿ, ಗ್ರಹಗಳು, ಮಹಾನಗರಕ್ಕೆ ಮೊದಲ ಸಲ ಬಂದಾಗ ಉಂಟಾಗುವ ಅನುಭವವನ್ನು ಭಾರತೀಯ ಕಲಾವಿದರಾದ ಜಿ.ಎಸ್. ಶ್ರೀ ವಿದ್ಯಾ, ಶಾಹುಲ್ ಕೊಲೆನ್ಗೊಡೆ, ಅಂಬರೀಷ್ ಮಾಳವಂಕರ್, ಸಂಜಯ್ ಶರ್ಮಾ ಮತ್ತು ಡಾ. ಅಮೀತ್ ರಾಜವಂಶಿ ಅವರ ಕಲಾಕೃತಿಗಳಲ್ಲಿ ನೋಡಬಹುದು.
ಆಫ್ರಿಕಾದ ಕಲಾವಿದರಾದ ರುತ್ ನೈಕಂಡಿ, ಡೇವಿಡ್ ಜುಗುನೋ, ಅನ್ವರ್ ಸಾದತ್ ನಕಾಬಿಂಗೆ, ವಿಲ್ಸನ್ ವಾಂಗಿ ಕಿನುತ್, ಜೋಸೆಫ್ ಜುಗುನಾ ಕಮೌತ್, ಕ್ರಿಸ್ಟೋಫರ್ ವೆಯಚ್ ಅವರ ಕಲಾಕೃತಿಗಳಲ್ಲಿ ಆಫ್ರಿಕಾ ದೇಶದಲ್ಲಿರುವ ಅರಣ್ಯ, ವನ್ಯ ಜೀವಿಗಳು, ವೇಷಭೂಷಣ, ಮಹಿಳೆಯರ ಸ್ಥಿತಿಗತಿ ಕಾಣಬಹುದು.
ಸ್ಥಳ: ಗ್ಯಾಲರಿ ಟೈಮ್ ಅಂಡ್ ಸ್ಪೆಸ್, ಲ್ಯಾವೆಲ್ಲೆ ರಸ್ತೆ. ಈ ಸಮೂಹ ಚಿತ್ರಕಲಾ ಪ್ರದರ್ಶನ ಇದೇ ಭಾನುವಾರ ಮುಕ್ತಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.