ADVERTISEMENT

ಮದುವೆ ಮನೆಯಲ್ಲಿ `ಪುಣ್ಯಕೋಟಿ'

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST
ಮದುವೆ ಮನೆಯಲ್ಲಿ `ಪುಣ್ಯಕೋಟಿ'
ಮದುವೆ ಮನೆಯಲ್ಲಿ `ಪುಣ್ಯಕೋಟಿ'   

ರಾಜಾಜಿನಗರದ ಪಶ್ಚಿಮ ಕಾರ್ಡ್ ರಸ್ತೆಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ಆ ಮದುವೆ ಸಮಾರಂಭದಲ್ಲಿ ಬ್ಯಾಂಡ್ ಬಜಾಯಿಸುವ ಸದ್ದಿನ ಬದಲಾಗಿ ಚಂಡೆಯ ನಿನಾದ, ಮಾಧುರ್ಯಭರಿತ ಭಾಗವತಿಕೆ, ಬಾಲ ಕಲಾವಿದರ ಅಬ್ಬರದ ಕುಣಿತ ಮತ್ತು `ಪುಣ್ಯಕೋಟಿ'ಯ ಯಕ್ಷ ನೃತ್ಯರೂಪಕ ಕಂಡು ಬಂತು.

ಮೂಲತಃ ಮೂಡಬಿದ್ರೆಯ ಅಶ್ವತ್ಥಪುರದವರಾದ, ಹೋಟೆಲ್ ಮ್ಯಾನೇಜ್‌ಮೆಂಟ್ ಪ್ರಾಧ್ಯಾಪಕ ರಾಮಚಂದ್ರ ರಾವ್ ಹಾಗೂ ಕುಸುಮ ಮಂಗೇಬೆಟ್ಟು ಅವರ ಮಗಳು ಶ್ರುತಿ ಹಾಗೂ ದೀಪಕ್ ಅವರ ಮದುವೆ ಮಂಟಪದಲ್ಲಿ ವರಪೂಜೆಯ ದಿನ ಕರಾವಳಿಯ ಗಂಡುಕಲೆಯೆನಿಸಿದ ಯಕ್ಷಗಾನವನ್ನು ಸವಿಯುವ ಈ ಅವಕಾಶ ಅತಿಥಿ ಅಭ್ಯಾಗತರಿಗೆ ಸಿಕ್ಕಿತು.

ಸೃಷ್ಟಿ ಕಲಾ ವಿದ್ಯಾಲಯದ ನಿರ್ದೇಶಕ ಛಾಯಾಪತಿ ಅವರು ನಗರದ ಕಲಾಕದಂಬ ಸಂಸ್ಥೆಯ ಯಕ್ಷ ಕಲಾವಿದರಿಗೆ ಯಕ್ಷಗಾನ ಪ್ರದರ್ಶನ ನೀಡಲು ಆಹ್ವಾನ ನೀಡಿದರು. ಬಾಲ ಕಲಾವಿದೆಯರಾದ ಅದಿತಿ ಆರ್. ಉರಾಳ  ಹಾಗೂ ಪೃಥ್ವಿ ಓಕುಡಾ ಮತ್ತು ಹುಲಿಯ ರುದ್ರ ರೂಪ ತೋರಿದ ನಿತ್ಯಾನಂದ ನಾಯಕ್ ಅವರೊಂದಿಗೆ, ಪ್ರಸಂಗದ ನಿರ್ದೇಶಕ ರಾಧಾಕೃಷ್ಣ ಉರಾಳ ಪುಣ್ಯಕೋಟಿ ಪಾತ್ರವನ್ನು ನಿರ್ವಹಿಸಿದರು.

`ಮದುವೆ ಮನೆಯಲ್ಲಿ ಸಾಮಾನ್ಯವಾಗಿ ಕಾಣುವ ಆರ್ಕೆಸ್ಟ್ರಾ ತಂಡಗಳ ಸಂಗೀತ ಕಾರ್ಯಕ್ರಮಕ್ಕಿಂತ ಭಿನ್ನವಾಗಿ ಕರಾವಳಿಯ ಪಾರಂಪರಿಕ ಕಲೆ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು' ರಾಧಾಕೃಷ್ಣ ಉರಾಳ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.