ADVERTISEMENT

ಮನಃಪೂರ್ತಿ ನಗಿಸಿದ ಗೊಂಬೆಯಾಟ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಸಿಂಗರಿಸಿಕೊಂಡ `ಮೋಟು~ ಕತ್ತೆ ಗೆಜ್ಜೆ ಸದ್ದಿನೊಂದಿಗೆ ಹೆಜ್ಜೆಹಾಕುತ್ತ ಬಂದಾಗ ಕಿರಿಯರು ಮಾತ್ರವಲ್ಲ ಇಳಿವಯಸ್ಸಿನ ಎಳೆಯರೂ ಮನದುಂಬಿ ನಕ್ಕರು. ಮುದ್ದಿನ ಕತ್ತೆಯ ಮುಗ್ಧ ಯಜಮಾನ ಮೋಸಹೋಗುವ ರೀತಿಯ ಕಂಡು ಮರುಗಿದರು.

ಮೋಸದ ಮಾತಿನ ಮೋಡಿಗಾರನ ಕಡೆಗೆ ನೋಡಿ ಯೋಚನೆ ಮಾಡಿದರು. ಇದೆಲ್ಲೋ ನಮ್ಮದೇ ಕಥೆ ಎನ್ನುವ ಚಿಂತನ ಮಂಥನವೂ ಮನದೊಳಗೆ ನಡೆಯಿತು.

ಮೋಸ ಮಾಡುವ ರಾಜಕಾರಣಿಗಳು ಹೇಗೆ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಾರೆ ಎನ್ನುವ ವ್ಯಂಗ್ಯದೊಂದಿಗೆ `ಗಾರ್ದಭ ಮನುಷ್ಯ~ ಗೊಂಬೆ ಆಟ ಕೊನೆಗೊಂಡಾಗ ಪ್ರೇಕ್ಷಕರ ಒಳನೋಟದಲ್ಲಿ ಯೋಚನೆಗಳ ಸುಳಿದಾಟ. ಹೌದು; ಚಿಂತನೆಗೆ ಆಸ್ಪದ ನೀಡುವಂಥ ಗಂಭೀರವಾದ ವಿಷಯವನ್ನು ಹಾಸ್ಯದ ಸಿಹಿ ಲೇಪ ದೊಂದಿಗೆ ನೋಡುಗರ ಮುಂದೆ ತೆರೆ ದಿಟ್ಟರು `ಗೊಂಬೆ ಮನೆ~ ಕಲಾವಿದರು.

ಗರುಡ ನಾಟ್ಯ ಸಂಘವು ಆಯೋಜಿಸಿದ್ದ ಗಾರ್ದಭ ಮನುಷ್ಯ ಗೊಂಬೆ ಆಟವು ಇಂದಿನ ರಾಜಕೀಯ ಪರಿಸ್ಥಿತಿಯನ್ನು ವಿಭಿನ್ನವಾದ ರೀತಿಯಲ್ಲಿ ವಿಡಂಬನಾತ್ಮಕವಾಗಿ ವಿವರಿಸಿದ್ದು ವಿಶೇಷ. ಸಂತಾನ ಭಾಗ್ಯವಿಲ್ಲದ ಅಗಸನು ತನ್ನ ಕತ್ತೆಯನ್ನು ಮನುಷ್ಯನನ್ನಾಗಿ ಮಾಡಿ ಮಗನಾಗಿ ಸಾಕುವ ಆಸೆಯಲ್ಲಿ ಮೋಸ ಹೋಗುವುದೇ ಈ ಗೊಂಬೆ ಪ್ರಹಸನದ ಸಾರ.

ಮಧ್ಯ ಏಷ್ಯಾದ ಜನಪದ ಕಥೆಯನ್ನು ನಟರಾಜ್ ಹೊನ್ನವಳ್ಳಿ ಅವರು ವಿಶಿಷ್ಟವಾದ ರೀತಿಯಲ್ಲಿ ಗೊಂಬೆ ಆಟಕ್ಕೆ ಹೊಂದುವಂತೆ ರಂಗರೂಪಕ್ಕೆ ಇಳಿಸಿದ್ದಾರೆ.

ಸಮಕಾಲೀನ ಸ್ಥಿತಿಗೆ ಒಪ್ಪುವ ರೀತಿಯಲ್ಲಿ ಅದನ್ನು ಗೊಂಬೆ ಆಟವಾಗಿಸಿದ ಶ್ರೇಯ ಡಾ. ಪ್ರಕಾಶ್ ಗರುಡ ಅವರದ್ದು. ಅಜಿತ್ ರಾವ್ ಅವರು ಮೊಗಲ್ ಕಲಾ ಶೈಲಿಯನ್ನು ಗೊಂಬೆಗಳ ವಿನ್ಯಾಸಕ್ಕೆ ಅಳವಡಿಸಿದ್ದರೂ, ಕಾರ್ಟೂನ್‌ಗಳ ರೀತಿಯಲ್ಲಿ ಮನಕ್ಕೆ ಮುದ ನೀಡುವಂಥ ಮುಖಭಾವ ಆಕರ್ಷಕ.

`ಗಾರ್ದಭ ಮನುಷ್ಯ~ ಪ್ರದರ್ಶನದ ಜೀವಾಳ ಮಾತ್ರ ನಾಗರಾಜ್ ಹೆಗಡೆ ಅವರ ಸಂಗೀತ ಸಂಯೋಜನೆ. ಜೊತೆಗೆ ಗೊಂಬೆ ಆಡಿಸುವ ಕಲಾವಿದರಾದ ರವಿ, ಧನಂಜಯ, ಲಿಂಗರಾಜ್, ದೀಪಾ ಹಾಗೂ ವಸಂತ ಅವರ ಕೌಶಲ್ಯ ಹಾಗೂ ಪ್ರೇಕ್ಷಕರನ್ನು ಹಿಡಿದಿಡುವಂಥ ಧ್ವನಿ ಏರಿಳಿತವು ಮೆಚ್ಚುಗೆಗೆ ಅರ್ಹ. ಗಂಭೀರವಾದ ಕಥೆಯನ್ನು ಸುಲಭವಾಗಿ ನೋಡುಗರ ಮನದಾಳಕ್ಕೆ ಇಳಿಸುವಲ್ಲಿ ಈ ಎಲ್ಲ ಅಂಶಗಳು ಸಹಕಾರಿ ಎನಿಸಿದವು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.