ADVERTISEMENT

ರೈಲಿನಲ್ಲಿ ಸಂದೇಶದ ವಿವೇಕ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 19:30 IST
Last Updated 20 ಜೂನ್ 2011, 19:30 IST

ಅದಮ್ಯ ದೇಶಪ್ರೇಮಿ, ಸಂತ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಒಳಗೊಂಡ ಅಪರೂಪದ ಛಾಯಾಚಿತ್ರಗಳ ಪ್ರದರ್ಶನದ ರೈಲು ಕಳೆದ ಶನಿವಾರದಿಂದ ಸೋಮವಾರವರೆಗೆ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಮೊಕ್ಕಾಂ ಮಾಡಿತ್ತು.

ವಿವೇಕಾನಂದರ 150ನೇ ಜನ್ಮದಿನೋತ್ಸವದ ಅಂಗವಾಗಿ ಭಾರತೀಯ ರೈಲ್ವೆ ಕೋಲ್ಕತ್ತದಿಂದ ಆರಂಭಿಸಿದ್ದ `ವಿವೇಕ ಎಕ್ಸ್‌ಪ್ರೆಸ್~ ರೈಲು ದೇಶದ ವಿವಿಧ ಸ್ಥಳಗಳಲ್ಲಿ ಸಂಚರಿಸಿ ಉದ್ಯಾನ ನಗರಿಗೆ ಬಂದಿತ್ತು.
 
ವಿಶ್ವ ಸೋದರತ್ವದ ಸಂದೇಶ ಸಾರಿದ, ಯುವಕರಲ್ಲಿ  ದೇಶಭಕ್ತಿ ಮೈಗೂಡುವಂತೆ ಮಾಡಲು ಶ್ರಮಿಸಿದ ಸ್ವಾಮಿ ವಿವೇಕಾನಂದರ ಜೀವನ, ಆದರ್ಶಗಳನ್ನು ಯುವಕರು, ವಿದ್ಯಾರ್ಥಿಗಳಿಗೆ ತಿಳಿಸುವುದು ಇದರ ಉದ್ದೇಶ.

ಷಿಕಾಗೊದಲ್ಲಿ 1893ರಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಉಪನ್ಯಾಸ, ಮಾತನಾಡುತಿರುವ, ಕೋಲ್ಕತ್ತದ ಬೇಲೂರು ರಾಮಕೃಷ್ಣ ಮಠ, ಕನ್ಯಾಕುಮಾರಿಯ ಭೂಶಿರದ ಮೇಲೆ ಕುಳಿತ ವಿವೇಕಾನಂದರು ಹೀಗೆ ಹತ್ತು ಹಲವು ಅಪರೂಪದ ಛಾಯಾಚಿತ್ರಗಳು ಪ್ರದರ್ಶನದಲ್ಲಿ ಗಮನ ಸೆಳೆದವು.

ಜೊತೆಗೆ ಅವರ ಸಂದೇಶಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ವಾರಾಂತ್ಯದ ದಿನಗಳಾದ್ದರಿಂದ ವಿದ್ಯಾರ್ಥಿಗಳು, ಪೋಷಕರು, ಯುವಕರಿಂದ ಪ್ರದರ್ಶನ ತುಂಬಿ ತುಳುಕಿತ್ತು.

ವೀಕ್ಷಕರಿಗೆ ಹಲಸೂರಿನ ರಾಮಕೃಷ್ಣ ಮಠದ ವತಿಯಿಂದ ವಿವೇಕಾನಂದರ ಸಂಕ್ಷಿಪ್ತ ಮಾಹಿತಿಯುಳ್ಳ ಕಿರು ಹೊತ್ತಿಗೆಯನ್ನು ಉಚಿತವಾಗಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.